ಬೆಂಗಳೂರು ಸುತ್ತ 4 ಪಥದ ರೈಲ್ವೆ ಲೈನ್; ರಾಜ್ಯಕ್ಕೆ ಹೊಸ ಸ್ಲೀಪರ್ ವಂದೇ ಭಾರತ್ ರೈಲಿಗೆ ಗ್ರೀನ್ ಸಿಗ್ನಲ್: ಸೋಮಣ್ಣ ಅಪ್ಡೇಟ್ಸ್
Karnataka New Railways Projects: ಬೆಂಗಳೂರಿನಿಂದ ಹೊರ ಹೋಗುವ ಪ್ರಯಾಣಿಕರಿಗೆ, ರೈಲುಗಳಿಗೆ ಅನುವಾಗುವಂತೆ ನಗರದಿಂದ 100 ಕಿಲೋ ಮೀಟರ್ ಸುತ್ತಮುತ್ತಲಿನ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ರಾಜಧಾನಿಯಿಂದ ಕರಾವಳಿ ಭಾಗದ ಮಂಗಳೂರಿಗೆ ಕೂಡ ಇದೇ ರೀತಿ ಚತುಷ್ಪಥ ಮಾರ್ಗ ಅಭಿವೃದ್ಧಿಯನ್ನೂ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಹೊಸ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲು, ಮಂಗಳೂರಿಗೆ ಸುಗಮ ರೈಲು ಸಂಪರ್ಕ ಕುರಿತು ಸಚಿವರು ಮಹತ್ವದ ಅಪ್ಡೇಟ್ ನೀಡಿದರು.
ಸೋಮವಾರ ಸಚಿವ ವಿ.ಸೋಮಣ್ಣ ಅವರು, ಚನ್ನಪಟ್ಟಣ ತಾಲ್ಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಹೊಸ ರೈಲು ಯೋಜನೆಗಳ ಕುರಿತು ಮಾಹಿತಿ ನೀಡಿದರು. ಇದರೊಂದಿಗೆ ಬೆಂಗಳೂರು-ಕರಾವಳಿಗೆ ಮಾರ್ಗ ಮತ್ತು ಬೆಂಗಳೂರು-ತುಮಕೂರು-ದಾವಣಗೆರೆ ದ್ವಿಪಥ, ಬೆಂಗಳೂರು-ವಿಜಯಪುರಕ್ಕೆ ಹೊಸ ಸ್ಲೀಪರ್ ವಂದೇ ಭಾರತ್ ರೈಲು ಸೇರಿದಂತೆ ಹೊಸ ಯೋಜನೆಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದರು.

ತುಮಕೂರು, ಮೈಸೂರು ಸೇರಿ ವಿವಿಧ ರೂಟ್ ಚತುಷ್ಪಥ ಹಳಿ
ಕರ್ನಾಟಕ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ಕರ್ನಾಟಕದ ರೈಲ್ವೇ ಬೇಡಿಕೆಗಳನ್ನು ಸಮಾರಂಭದಲ್ಲಿ ಪ್ರಸ್ತಾಪಿಸಿದ್ದರು. ಇದರಲ್ಲಿ ಅವರು ಬೆಂಗಳೂರಿನಿಂದ ತುಮಕೂರು, ಮೈಸೂರು, ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಮತ್ತು ಕೋಲಾರಕ್ಕೆ ಚತುಷ್ಪಥ ಹಳಿ ನಿರ್ಮಿಸಬೇಕು ಎಂದು ಕೋರಿದ್ದರು.
ಬೆಂಗಳೂರು-ತುಮಕೂರು ಲೈನ್ ಚತುಷ್ಪಥ: ಸರ್ವೇ..
ಕೈಗಾರಿಕೆ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋಮಣ್ಣ ಅವರು, ಬೆಂಗಳೂರು-ತುಮಕೂರು ಚತುಷ್ಪಥ ಮಾರ್ಗದ ಸರ್ವೆ ಮುಗಿದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಮುಂದಿನ ಒಂದೂವರೆ- ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವ ಉದ್ದೇಶ ಇದೆ. ಹಾಗೆಯೇ ಬೆಂಗಳೂರು- ಮೈಸೂರು ಚತುಷ್ಪಥ ನಿರ್ಮಾಣಕ್ಕೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಕೋಲಾರಕ್ಕೆ ನೇರ ರೈಲು ಸಂಪರ್ಕ
ಎಂಬಿ ಪಾಟೀಲರು ಪ್ರಸ್ತಾಪಿಸಿರುವ ಬೇಡಿಕೆಗಳು ಸರಿಯಾಗಿವೆ. ಅವರ ಕೋರಿಕೆಯಂತೆ ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ವೈಟ್ ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದಕ್ಕೂ ಕೊಂಡೊಯ್ಯಲಾಗುವುದು. ಇದಕ್ಕೆ ಬೇಕಾದ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ ಎಂದು ಅವರು ಭರವಸೆ ಕೊಟ್ಟರು.

ಬೆಂಗಳೂರು-ಕರಾವಳಿಗೆ ಚತುಷ್ಪಥ ಮಾರ್ಗ
ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ತ್ವರಿತ ರೈಲುಗಳ ಕಾರ್ಯಾಚರಣೆಗೆ ಅಗತ್ಯವಾದ ವ್ಯವಸ್ಥೆ ನಿರ್ಮಿಸಬೇಕಿದೆ. ಇದಕ್ಕಾಗಿ ಸಕಲೇಶಪುರ-ಗುಂಡ್ಯ ನಡುವೆ ಸಮಾನಾಂತರವಾಗಿ ರಸ್ತೆ ಮತ್ತು ರೈಲು ಮಾರ್ಗ ಆಗಬೇಕೆಂದು ಸಚಿವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಸೋಮಣ್ಣ ಅವರು ಇದೊಂದು ಉಪಯುಕ್ತ ಸಲಹೆಯಾಗಿದ್ದು, ಈ ಎರಡೂ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ ಅಗತ್ಯ ಇದೆ. ಬಂದರು ನಗರ ಮಂಗಳೂರಿಗೆ ಸಂಪರ್ಕ ಮಾಡುವುದರಿಂದ ಅನೇಕ ಪ್ರಯೋಜನಗಳು ಆಗಲಿದ್ದು, ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೆ ಕಾಮಗಾರಿ
ತುಮಕೂರು- ಚಿತ್ರದುರ್ಗ- ದಾವಣಗೆರೆ ಮಾರ್ಗದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗ ಏಕಪಥವಾಗಿರುವ ಈ ಮಾರ್ಗವನ್ನು ಜೋಡಿ ಹಳಿ ಮಾಡಬೇಕು ಎಂದು ಪಾಟೀಲರು ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೂಡ ಪರಿಗಣಿಸಲಾಗುವುದು. ಈಗಾಗಲೇ ತುಮಕೂರು, ಅರಸಿಕೆರೆ, ಚಿಕ್ಕಜಾಜೂರು ಮಾರ್ಗವನ್ನು ದ್ವಿಪಥಗೊಳಿಸಲಾಗಿದೆ. ಶೀಘ್ರವೇ ಉದ್ದೇಶಿತ ಹೊರ ರೈಲು ಮಾರ್ಗ ಸಹ ಎರಡು ಪಥಕ್ಕೆ ಮೇಲ್ದರ್ಜೆಗೇರುವ ಸಾಧ್ಯತೆ ಇದೆ.
ಸಚಿವರಿಬ್ಬರು ವಿಶೇಷ ರೈಲಿನಲ್ಲಿ ಪ್ರಯಾಣ
ರೈಲ್ವೆ ಮೂಲಸೌಕರ್ಯದ ಗುಣಮಟ್ಟ, ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಬಳಸಲಾಗುವ Self-Propelled Inspection Car (SPIC ) ಎಂಬ ವಿಶೇಷ ರೈಲ್ವೆ ಪರಿಶೀಲನಾ ವಾಹನದಲ್ಲಿ ಸಚಿವರು ರಾದ ವಿ.ಸೋಮಣ್ಣ ಮತ್ತು ಎಂಬಿ ಪಾಟೀಲರು ಪ್ರಯಾಣಿಸಿದರು. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಚನ್ನಪಟ್ಟಣದವರೆಗೆ ಪ್ರಯಾಣ ಮಾಡಿ, ಮರಳಿ ಅದೇ ರೈಲಿನಲ್ಲಿ ವಾಪಸ್ಸಾದರು. ಪ್ರಯಾಣದುದ್ದಕ್ಕೂ ಕರ್ನಾಟಕದಲ್ಲಿ ಪ್ರಗತಿಯಲ್ಲಿರುವ ಮತ್ತು ಪ್ರಸ್ತಾವಿತ ರೈಲು ಯೋಜನೆಗಳ ಬಗ್ಗೆ ಚರ್ಚಿಸಿದರು.
ರಾಜ್ಯಕ್ಕೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು
ರಾಜ್ಯದ ಕಿತ್ತೂರು ಕರ್ನಾಟಕ ಭಾಗದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು (Sleeper Vande Bharat Express Train) ಸೇವೆ ಆರಂಭಿಸಬೇಕು ಎಂಬ ಮನವಿ ಜೋರಾಗಿದೆ. ಸಚಿವರು ಸೇರಿದಂತೆ ಆ ಭಾಗದ ಜನರ ಬೇಡಿಕೆ ಇದೆ. ಈ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಇನ್ನು 3-4 ತಿಂಗಳಲ್ಲಿ ಬೆಂಗಳೂರು-ವಿಜಯಪುರ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಒದಗಿಸಲಾಗುವುದು ಎಂದು ಅವರು ಇದೇ ವೇಳೆ ಘೋಷಿಸಿದರು. ವಂದೇ ಭಾರತ್ ರೈಲಿಗೆ ಬದಲಾಗಿ ಸ್ಲೀಪರ್ ರೈಲು ಓಡಿಸಲಾಗುವುದು. ಈ ಕುರಿತು ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು- ವಿಜಯಪುರ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಮಾಡಲಾಗುವುದು. ಜತೆಗೆ ಇಲ್ಲಿರುವ ಸಣ್ಣಪುಟ್ಟ ತೊಂದರೆಗಳನ್ನು ನಿವಾರಿಸಲಾಗುವುದು. ಅಲ್ಲದೆ ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬಯಿಯನ್ನು ಬೆಸೆಯಲು ಬೆಂಗಳೂರು-ಪುಣೆ ಮಧ್ಯೆ ಹೈಸ್ಪೀಡ್ ರೈಲು ಆರಂಭಿಸಬೇಕು ಎನ್ನುವ ಬೇಡಿಕೆ ಸೂಕ್ತವಾಗಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.
ರಾಮೋಹಳ್ಳಿ ರೈಲ್ವೆ ಸೇತುವೆ ಕಾಮಗಾರಿ ಪರಿಶೀಲನೆ
ಚನ್ನಪಟ್ಟಣಕ್ಕೆ ತೆರಳುವ ಮಾರ್ಗದ ಮಧ್ಯದಲ್ಲಿ, ಸಚಿವರಾದ ಸೋಮಣ್ಣ ಮತ್ತು ಎಂ ಬಿ ಪಾಟೀಲ ಇಬ್ಬರೂ ಬೆಂಗಳೂರು ನಗರದ ಕುಂಬಳಗೋಡಿನ ಸಮೀಪದ ರಾಮೋಹಳ್ಳಿಯಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಸೇತುವೆಯ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.














Click it and Unblock the Notifications