ತಮಿಳುನಾಡು ಡಿಸಿಎಂ ಆಗಲಿದ್ದಾರಾ ನಟಿ ತ್ರಿಷಾ? ವಿಜಯ್ ಪ್ಲ್ಯಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಕ್ರಾಂತಿ ಸೃಷ್ಟಿಸಿ, ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದ್ರಾವಿಡ ಪಕ್ಷಗಳ ದಶಕಗಳ ಆಡಳಿತಕ್ಕೆ ಬ್ರೇಕ್ ಹಾಕಿ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿರುವ ದಳಪತಿ ವಿಜಯ್ ಅವರ ಹೆಸರು ಈಗ ಮತ್ತೊಮ್ಮೆ ಭಾರಿ ಸದ್ದು ಮಾಡುತ್ತಿದೆ. ಸದ್ಯ ಮುಖ್ಯಮಂತ್ರಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಸರ್ಕಾರವು ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿ ಮುನ್ನಡೆಯುತ್ತಿದ್ದು, ಇದರ ನಡುವೆಯೇ ನಟಿ ತ್ರಿಷಾ ಕೃಷ್ಣನ್ ಅವರ ರಾಜಕೀಯ ಪ್ರವೇಶದ ವದಂತಿ ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.
ಡೆಪ್ಯುಟಿ ಸಿಎಂ ಪಟ್ಟ ಸಿಗುತ್ತಾ?
ಮುಖ್ಯಮಂತ್ರಿ ವಿಜಯ್ ಅವರ ದೀರ್ಘಕಾಲದ ಆಪ್ತ ಒಡನಾಡಿ ಎನ್ನಲಾದ ನಟಿ ತ್ರಿಷಾ ಕೃಷ್ಣನ್ ಅವರು ಇತ್ತೀಚೆಗೆ ಚೆನ್ನೈನಲ್ಲಿರುವ ಸಿಎಂ ವಿಜಯ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿರುವುದು ಈ ಎಲ್ಲ ಚರ್ಚೆಗಳಿಗೆ ಪ್ರಮುಖ ಕಾರಣವಾಗಿದೆ. ಚುನಾವಣೆ ಸಂದರ್ಭದಲ್ಲೂ ತಮ್ಮ ಜನ್ಮದಿನದ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ತ್ರಿಷಾ, ಅಲ್ಲಿಂದ ಬಂದ ಬೆನ್ನಲ್ಲೇ ನೇರವಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಭೇಟಿ ಮಾಡಿರುವುದು ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ವಿಜಯ್ ಅವರು ಈ ಹಿಂದೆ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ತಿರುಚಿರಾಪಳ್ಳಿ ಈಸ್ಟ್ ಮತ್ತು ಪೆರಂಬೂರ್ ಕ್ಷೇತ್ರಗಳ ಪೈಕಿ, ನಿಯಮಾವಳಿಗಳ ಪ್ರಕಾರ ಒಂದು ಕ್ಷೇತ್ರವನ್ನು ತೆರವುಗೊಳಿಸಬೇಕಾಗಿ ಬಂದಿದೆ. ಈ ತೆರವಾದ ಸ್ಥಾನಕ್ಕೆ ಮುಂಬರುವ ಉಪಚುನಾವಣೆಯಲ್ಲಿ ಟಿವಿಕೆ ಪಕ್ಷದ ವತಿಯಿಂದ ನಟಿ ತ್ರಿಷಾ ಕೃಷ್ಣನ್ ಅವರನ್ನು ಕಣಕ್ಕಿಳಿಸಲು ಸಿಎಂ ವಿಜಯ್ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಮತ್ತು ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ, ತ್ರಿಷಾ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ, ಸಿಎಂ ವಿಜಯ್ ತಮ್ಮ ಸಚಿವ ಸಂಪುಟದಲ್ಲಿ ಅವರಿಗೆ ತಮಿಳುನಾಡಿನ ಉಪಮುಖ್ಯಮಂತ್ರಿ ಪಟ್ಟ ನೀಡಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ರಾಜಕೀಯ ಎಂಟ್ರಿಯ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದಾಗಲಿ ಅಥವಾ ನಟಿ ತ್ರಿಷಾ ಅವರ ಕಡೆಯಿಂದಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಸದ್ಯಕ್ಕೆ ಇದು ತಮಿಳುನಾಡು ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿರುವ ವದಂತಿಯಷ್ಟೇ.
ವಿಜಯ್ ಪತ್ನಿಯಿಂದ ಡಿವೋರ್ಸ್ ಅರ್ಜಿ
ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರ 27 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ಅವರಿಗೆ ಮತ್ತೊಬ್ಬ ನಟಿಯೊಂದಿಗೆ ಇರುವ ಸಂಬಂಧ ಮತ್ತು ತಮಗೆ ನೀಡಿದ ಮಾನಸಿಕ ಕಿರುಕುಳವನ್ನು ಪ್ರಮುಖ ಕಾರಣವಾಗಿ ಉಲ್ಲೇಖಿಸಿದ್ದಾರೆ. 2021ರಲ್ಲೇ ಈ ವಿಷಯ ತಮಗೆ ತಿಳಿಯಿತೆಂದೂ, ತದನಂತರ ವಿಜಯ್ ತಮ್ಮನ್ನು ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಿಂದ ದೂರವಿಟ್ಟು ನಿರ್ಲಕ್ಷಿಸಿದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ವಿಜಯ್ ಮತ್ತು ತ್ರಿಷಾ ಕೃಷ್ಣನ್ ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಆನ್ಸ್ಕ್ರೀನ್ ಜೋಡಿಗಳಲ್ಲಿ ಒಬ್ಬರಾಗಿದ್ದು, ಗಿಲ್ಲಿ', 'ಲಿಯೋ' ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ಈ ಇಬ್ಬರೂ ತಾರೆಯರು ಉತ್ತಮ ಸ್ನೇಹಿತರೆಂದು ಹೇಳಿಕೊಂಡಿದ್ದಾರೆ. ವಿಜಯ್ ಅವರ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ, ವಿಜಯ್ ತಾಯಿ ಜೊತೆ ಆತ್ಮೀಯವಾಗಿ ಮಾತನಾಡಿದ್ದು ಕೂಡ ಭಾರಿ ಸುದ್ದಿಯಾಗಿತ್ತು.













Click it and Unblock the Notifications