ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡರೇ ಈ ಬಗ್ಗೆಯೂ ರೀಲ್ಸ್ ಮಾಡಿ ಪ್ಲೀಸ್ ಎಂದ ಆರ್ ಅಶೋಕ್
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದು ಯಾವಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೇ ಅಂತ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ಹಾಗೂ ಮೂಲಸೌಕರ್ಯ ಸಮಸ್ಯೆಗೆ ಸಂಬಂಧಿಸಿದಂತೆ ಸಚಿವ ಕೃಷ್ಣಬೈರೇಗೌಡ ಅವರು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಆದರೆ ಸರಣಿ ಸಭೆಗಳನ್ನು ನಡೆಸಿದರ ಹೊರತಾಗಿಯೂ ಸಹ ಬೆಂಗಳೂರಿನಲ್ಲಿ ಸಮಸ್ಯೆಗಳು ಪರಿಹಾರವಾಗಿಲ್ಲ. ಹೀಗಾಗಿ, ಬೆಂಗಳೂರು ನಗರ ಸಚಿವ ಕೃಷ್ಣಬೈರೇಗೌಡರೇ ಈ ಬಗ್ಗೆಯೂ ರೀಲ್ಸ್ ಮಾಡಿ ಪ್ಲೀಸ್ ಎನ್ನುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಜನತೆ ಪತ್ರಿಕೆಗೆ ಕಳುಹಿಸಿರುವ ಈ ನರಕಸದೃಶ ರಸ್ತೆಗುಂಡಿಗಳು ಫೋಟೋಗಳನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ವಿನಾಯಕ ಲೇಔಟ್ ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್... ಹೀಗೆ ರಾಜಧಾನಿಯ ಪ್ರತಿ ರಸ್ತೆಯಲ್ಲೂ ಈಗ 'ಗುಂಡಿಗಳದ್ದೇ ದರ್ಬಾರ್'! ಬೆಂಗಳೂರನ್ನು "Failed Model" ಎಂದು ಕರೆಯುವ ಮೂಲಕ ಬ್ರ್ಯಾಂಡ್ ಬೆಂಗಳೂರು ನಿರ್ಮಿಸುತ್ತೇವೆ ಎಂದು ಕೊಚ್ಚಿಕೊಳ್ಳುತ್ತಿದ್ದ ನಿಮ್ಮ ಮುಖ್ಯಮಂತ್ರಿಗಳ ಅಸಲಿ ಬಂಡವಾಳವನ್ನ ನೀವೇ ಬಯಲು ಮಾಡಿದ್ದೀರಿ.
ಬೆಂಗಳೂರಿನ ಇಂದಿನ ದುಸ್ಥಿತಿಗೆ ನೇರ ಹೊಣೆಗಾರರು ನಿಮ್ಮ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಎಂದು ಒಪ್ಪಿಕೊಂಡು ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದೀರಾ ಕೃಷ್ಣ ಬೈರೇಗೌಡರೇ ಅಥವಾ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರಿನ ನಾಗರಿಕರ ತೆರಿಗೆ ಹಣ ಬೇಕು, ಆದರೆ ಅವರಿಗೆ ಸುರಕ್ಷಿತ ರಸ್ತೆ ಕೊಡುವ ಯೋಗ್ಯತೆ ಇಲ್ಲ. ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರ ವೈಫಲ್ಯದಿಂದಾಗಿ ಜನರ ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ. ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವ ನಾಟಕ ಸಾಕು ಮಾಡಿ, ಮೊದಲು ರಸ್ತೆಗಿಳಿದು ಈ ಗುಂಡಿಗಳನ್ನು ಮುಚ್ಚಿಸಿ. ಇಲ್ಲದಿದ್ದರೆ ಬೆಂಗಳೂರಿನ ಜನ ನಿಮಗೆ ತಕ್ಕ ಪಾಠ ಕಲಿಸುವ ದಿನ ಬಹಳ ದೂರವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸರಣಿ ಸಭೆ ನಡೆಸಿದ್ದ ಸಚಿವ ಕೃಷ್ಣಬೈರೇಗೌಡ
ಬೆಂಗಳೂರಿನ ಸಮಸ್ಯೆಗಳು ಹಾಗೂ ಸಾರ್ವಜನಿಕರಿಗೆ ಸರಿಯಾದ ಮೂಲಸೌಕರ್ಯ ಸೇವೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸರಣೆ ಸಭೆಯನ್ನು ಸಚಿವ ಕೃಷ್ಣಬೈರೇಗೌಡ ಅವರು ನಡೆಸಿದ್ದರು. ಬೆಂಗಳೂರಿನಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಸರಣಿ ಸಭೆಗಳನ್ನು ನಡೆಸಿದ್ದರು. ಆದರೆ, ಸರಣಿ ಸಭೆಯ ನಂತರವೂ ಬೆಂಗಳೂರಿನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಆಗಿಲ್ಲ.












Click it and Unblock the Notifications