ಅಯೋಧ್ಯೆ ರಾಮ ಮಂದಿರದಲ್ಲಿ ದುಡ್ಡು ಕದ್ದವರ ಬಳಿ ಫಾರ್ಮ್ಹೌಸ್, ಸ್ಕಾರ್ಪಿಯೋ - ಐಷಾರಾಮಿ ಜೀವನ!
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಶಾಕಿಂಗ್ ನ್ಯೂಸ್ ಬೆಳಕಿಗೆ ಬಂದಿದೆ. ರಾಮ ಮಂದಿರಕ್ಕೆ ಭಕ್ತರು ನೀಡಿರುವ ಅಪಾರ ಪ್ರಮಾಣದ ದೇಣಿಗೆಯನ್ನು ಕಳ್ಳತನ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಎಸ್ಐಟಿ ರಚನೆ ಮಾಡಿದೆ. ಆದರೆ, ಇದೀಗ ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ರಾಮಮಂದಿರಕ್ಕೆ ಭಕ್ತರು ಕೊಟ್ಟಿದ್ದ ಕಾಣಿಕೆ ಹಣ ದೋಚಿದ್ದ ಆರೋಪಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. ಅತ್ಯಂತ ಕಡಿಮೆ ವೇತನ ಹೊಂದಿದ್ದ ದೇಗುಲದ ಕೆಲವು ಸಿಬ್ಬಂದಿ, ಹಣ ಎಣಿಕೆಗೆ ನಿಯೋಜಿತ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಹಲವರು ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವುದು ಇದೀಗ ತನಿಖೆಯಿಂದ ಬಹಿರಂಗವಾಗಿದೆ. ಈ ಆರೋಪಿಗಳ ಬಳಿ ಐಷಾರಾಮಿ ಬೈಕ್, ಕಾರು, ಫ್ಲ್ಯಾಟ್ ಹಾಗೂ ಫಾರ್ಮ್ಹೌಸ್ ಸಹ ಇದೆ. ದೇವಾಲಯದಲ್ಲಿ ಕೆಲಸ ಮಾಡುವ ಬೇರೆ ಸಿಬ್ಬಂದಿಗೆ ಹೋಲಿಕೆ ಮಾಡಿದರೆ ಆರೋಪಿತ ಸಿಬ್ಬಂದಿಯ ಬಳಿ ಇರುವ ಆಸ್ತಿ ಪ್ರಮಾಣವು ಶೇ 100 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.
ಆಯೋಧ್ಯೆಯ ರಾಮಮಂದಿರಲ್ಲಿ ಕೋಟ್ಯಾಂತರರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ. ಇದರ ನಡುವೆ ಹಲವು ವಿಷಯಗಳು ಬೆಳಕಿಗೆ ಬಂದಿದೆ. ಈ ದೇವಾಲಯದಲ್ಲಿ ತಳ ಹಂತದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯು ಕೋಟ್ಯಾಂತರ ರೂಪಾಯಿ ಹಣ ಕಳ್ಳತನ ಮಾಡಿರುವುದು ಇದೀಗ ಬಹಿರಂಗವಾಗಿದೆ. ಕೆಲ ಸಿಬ್ಬಂದಿ ಆದಾಯಕ್ಕೂ ಅವರ ಬಳಿ ಇರುವ ಆಸ್ತಿಗೂ 100 ಪಟ್ಟು ವ್ಯತ್ಯಾಸ ಕಂಡುಬಂದಿದೆ. ದೇಗುಲದಲ್ಲಿ ಹುಂಡಿ ಹಣ ಎಣಿಕೆ ಮಾಡುವುದಕ್ಕೆ ನೇಮಕ ಮಾಡಲಾಗಿದ್ದ ಅನುಕಲ್ಪ್ ಮಿಶ್ರಾ ಮತ್ತು ಆತನ ಭಾವ ಲವಕುಶ ಮಿಶ್ರಾ ಎನ್ನುವವರ ಬಳಿ ಕೋಟ್ಯಾಂತರ ರೂಪಾಯಿ ಹಣ ವಹಿವಾಟು ನಡೆದಿರುವುದು ಬಹಿರಂಗವಾಗಿದೆ. ಈ ಇಬ್ಬರು ಬಡ ಕುಟುಂಬದಿಂದ ಬಂದವರು, ದೇವಾಲಯದಲ್ಲಿ ಈ ಕೆಲಸಕ್ಕೆ ನೇಮಕವಾಗುವ ಮುನ್ನ ತೀರ ಬಡವರಾಗಿದ್ದರು ಎಂದು ಹೇಳಲಾಗಿದೆ. ಇವರು ರಾಮಮಂದಿರದಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಶ್ರೀಮಂತ ಜೀವನ ನಡೆಸುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ರಾಮಮಂದಿರ ದೇಣಿಗೆ ಹಣ ಎಣಿಸುವ ಕೆಲಸಕ್ಕೆ ಸೇರಿಕೊಂಡ ಮೇಲೆ ಇವರಿಬ್ಬರು ಐಷಾರಾಮಿ ಜೀವನವನ್ನು ಪ್ರಾರಂಭಿಸಿದ್ದರು ಎಂದು ಹಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಐಷಾರಾಮಿ ಬೈಕ್, ಕಾರು, ಫ್ಲ್ಯಾಟ್ - ಫಾರ್ಮ್ಹೌಸ್
ಕೆಳ ಹಂತದ ಅಥವಾ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಬಳಿ ಅವರ ವೇತನಕ್ಕಿಂತಲೂ ನೂರು ಪಟ್ಟು ಆಸ್ತಿ ಇರುವುದು ಮಾತ್ರವಲ್ಲ. ಐಷಾರಾಮಿ ಬೈಕ್, ಕಾರು, ಫ್ಲ್ಯಾಟ್ ಹಾಗೂ ಫಾರ್ಮ್ಹೌಸ್ ಸಹ ಖರೀದಿ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಅನುಕಲ್ಪ್ ಮೊದಲು ಮಂದಿರದ ಕೆಲಸಕ್ಕೆ ಸೇರಿಕೊಂಡಿದ್ದ. ಇದಾಗಿ ಕೆಲವೇ ದಿನಗಳಲ್ಲಿ ಆತನ ಬಂಧು ಲವಕುಶ ಮಿಶ್ರಾ ಎನ್ನುವ ವಕ್ತಿಯನ್ನೂ ಸಹ ದೇಣಿಗೆ ಎಣಿಸುವ ಕೆಲಸಕ್ಕೆ ಸೇರಿಸಿಕೊಂಡ ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಕೆಲಸಕ್ಕೆ ಸೇರುವುದಕ್ಕೂ ಮುಂಚೆ ಅನುಕಲ್ಪ್ ಮಿಶ್ರಾ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ, ಈಗ ಅವರಿಗೆ ಯಾವುದರ ಅಗತ್ಯವೇ ಇಲ್ಲ. ಅಷ್ಟೊಂದು ದಿಢೀರ್ ಶ್ರೀಮಂತರಾಗಿದ್ದಾರೆ. ಇವರ ಆದಾಯ ಮೂಲ ಹಾಗೂ ಹಣ ವಹಿವಾಟಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಕಲ್ಪ್ ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್ಹೌಸ್ ಸಹ ನಿರ್ಮಿಸಿದ್ದಾನೆ. ಕಳೆದ ವರ್ಷ ಅಯೋಧ್ಯೆಯಲ್ಲಿ 65 ಲಕ್ಷ ರೂ.ಗಳ ಮನೆಯನ್ನೂ ಖರೀದಿ ಮಾಡಿದ್ದಾನೆ. ಮತ್ತೊಂದು ಸ್ಕಾರ್ಪಿಯೋ ಎಸ್ಯುವಿ ಬುಕ್ ಮಾಡಲು ಮುಂದಾಗಿದ್ದ ಎನ್ನುವ ವಿಚಾರಗಳು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಆತನ ಭಾವ ಬಳಿಯೂ ಲಕ್ಷಾಂತರ ರೂಪಾಯಿ ಹರಿದಾಡುತ್ತಿತ್ತು ಎಂದು ಹೇಳಲಾಗಿದೆ.














Click it and Unblock the Notifications