ಬೆಂಗಳೂರಲ್ಲಿ 3 ಲಕ್ಷ ಬೀದಿ ನಾಯಿಗಳು: ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ, ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ
ಕೇಂದ್ರ ಸರ್ಕಾರವು ಎಲ್ಲಾ ಸಚಿವಾಲಯಗಳಿಗೆ ತಮ್ಮ ಸಚಿವಾಲಯಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದೆ. ಕರ್ನಾಟಕದ ವಿವಿಧ ಸಚಿವಾಲಯಗಳ ವ್ಯಾಪ್ತಿ, ವಿಧಾನಸೌಧ ಹಾಗೂ ವಿಕಾಸಸೌಧ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಬೀದಿ ನಾಯಿಗಳ ಸ್ಥಳಾಂತರ ಸವಾಲು ಎದುರಾಗಿದೆ. ಕೇಂದ್ರ ಸರ್ಕಾರವು ಈಗ ಹೊರಡಿಸಿರುವ ಆದೇಶದಲ್ಲಿ ಆಸ್ಪತ್ರೆಗಳು, ಶಾಲೆಗಳು, ರೈಲು ನಿಲ್ದಾಣಗಳು ಹಾಗೂ ಕ್ರೀಡಾ ಸಂಕೀರ್ಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರಿಸುವುದಕ್ಕೂ ಅನ್ವಯವಾಗಲಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳು, ರೋಗಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಈ ಸ್ಥಳಗಳಲ್ಲಿ ಓಡಾಡುವಂತಾಗಬೇಕು ಎನ್ನುವ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಈ ಆದೇಶವು ಮಹತ್ವ ಪಡೆದುಕೊಂಡಿದೆ.
ಹೊಸ ಮಾರ್ಗಸೂಚಿಗಳನ್ನು ಸಚಿವಾಲಯಗಳು ಜಾರಿಗೆ ತಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜೂನ್ 30ರ ಒಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡುವುದಕ್ಕೆ ಕೇಂದ್ರ ಸರ್ಕಾರವು ಸ್ಪಷ್ಟವಾದ ನಿರ್ದೇಶನವನ್ನು ನೀಡಿದೆ. ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಯಲು ಕ್ಯಾಂಪಸ್ಗಳಲ್ಲಿ ಬೇಲಿಗಳು ಅಥವಾ ಭದ್ರವಾದ ಗೋಡೆಗಳನ್ನು ನಿರ್ಮಿಸಬೇಕು. ಈ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಇರಬೇಕು. ಏಕೆಂದರೆ ಆಹಾರ ಪದಾರ್ಥಗಳು ಹಾಗೂ ಹಸಿ ಕಸ ಇರುವ ಪ್ರದೇಶಗಳಲ್ಲಿ ನಾಯಿಗಳು ಹೆಚ್ಚಾಗುತ್ತವೆ. ಪ್ರತಿ ಕ್ಯಾಂಪಸ್ ನೋಡಲ್ ಅಧಿಕಾರಿಯ ಸಂಪರ್ಕ ವಿವರಗಳನ್ನು ಸಹ ಪ್ರದರ್ಶಿಸಬೇಕು, ಇದರಿಂದಾಗಿ ಆವರಣದಲ್ಲಿ ನಾಯಿ ಕಂಡುಬಂದರೆ ಸ್ಪಷ್ಟವಾಗಿ ಜವಾಬ್ದಾರರಾಗಿರುವ ಯಾರು ಎಂದು ತಿಳಿಯುತ್ತದೆ. ಅಲ್ಲದೆ ಆ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ನೀಡುವುದಕ್ಕೂ ಸುಲಭವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮುಂದುವರಿದು ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸಮಯದಲ್ಲೂ ಸಾಕಷ್ಟು ರೇಬೀಸ್ ವಿರೋಧಿ ಲಸಿಕೆಗಳನ್ನು ಸ್ಟಾಕ್ನಲ್ಲಿ ಇರಿಸಲು ಸೂಚನೆ ನೀಡಲಾಗಿದೆ. ನಾಯಿಗಳಿಂದ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ಮಕ್ಕಳಿಗೆ ಶಾಲೆಗಳಲ್ಲೇ ತರಬೇತಿ ನೀಡುವ ಅಭಿಯಾನ ಹಮ್ಮಿಕೊಳ್ಳುವ ಸಾಧ್ಯತೆ ಇದೆ. ರೈಲ್ವೆ ನಿಲ್ದಾಣಗಳು ಮತ್ತು ಕ್ರೀಡಾ ಸ್ಥಳ, ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ ನಿಗಾ ಇರಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದಕ್ಕೂ ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನಲ್ಲಿವೆ 3 ಲಕ್ಷ ಬೀದಿ ನಾಯಿಗಳು
ಇನ್ನು ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 2025ರಲ್ಲಿ 26 ರೇಬಿಯಸ್ ಸಾವು ಮತ್ತು ಮೂರು ವರ್ಷಗಳಲ್ಲಿ 90,248 ನಾಯಿ ಕಚ್ಚಿದ ಪ್ರಕರಣ ವರದಿಯಾಗಿವೆ. 2023 ಮತ್ತು 2025ರ ವರ್ಷಗಳಿಗೆ ಹೋಲಿಕೆ ಮಾಡಿದರೆ, ಶೇ. 16ರಷ್ಟು ಪ್ರಕರಣಗಳು ಬೆಂಗಳೂರು ಒಂದರಲ್ಲಿಯೇ ವರದಿಯಾಗಿದೆ. 2023ನೇ ವರ್ಷದಲ್ಲಿ - 21,163 ಮತ್ತು 2025 - 24,492 ಬೀದಿ ನಾಯಿಗಳು ಕಚ್ಚಿದ ಪ್ರಕರಣಗಳು ವರದಿಯಾಗಿದೆ.
ಸುಪ್ರೀಂ ಕೋರ್ಟ್ ಆದೇಶದಲ್ಲಿ ಏನಿದೆ
ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ವಿಶೇಷವಾಗಿ ಶಾಲೆ, ಆಸ್ಪತ್ರೆ ಮತ್ತು ಬಸ್ ನಿಲ್ದಾಣಗಳಂತಹ ಜನನಿಬಿಡ ಸಾರ್ವಜನಿಕ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಲಸಿಕೆ ಹಾಕಿದರೂ ಸಹ ಇಂತಹ ಸ್ಥಳಗಳಿಗೆ ನಾಯಿಗಳನ್ನು ಮತ್ತೆ ಬಿಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರೊಂದಿಗೆ ಕೇಂದ್ರ ಸರ್ಕಾರಕ್ಕೂ ಕೆಲವೊಂದು ಪ್ರಮುಖ ನಿರ್ದೇಶನಗಳನ್ನು ನೀಡಲಾಗಿದೆ.














Click it and Unblock the Notifications