ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ಭಾರಿ ಮುಖಭಂಗ, ಕ್ಲೀನ್ ಸ್ವೀಪ್ಗೆ ನೆಟ್ಟಿಗರು ಕೊಟ್ಟ ಕಾರಣ ಏನು?
India vs Ireland 2nd T20I: ಬೆಲ್ಫಾಸ್ಟ್ನಲ್ಲಿ ಭಾನುವಾರ (ಜೂನ್ 28) ನಡೆದ ಎರಡನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಭಾರತ ತಂಡದ ವಿರುದ್ಧ 1 ರನ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡಕ್ಕೆ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಮಾಡಿದೆ. ಮತ್ತೊಂದೆಡೆ ಹಲವಾರು ನೆಟ್ಟಿಗರು ವೈಭವ್ ಸೂರ್ಯವಂಶಿ ಅವರನ್ನು ಆಡಿಸಿದ್ದರೆ ಪಕ್ಕಾ ಈ ಸ್ಥಿತಿ ಬರುತ್ತಿರಲಿಲ್ಲಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಈ ಸೋಲಿನೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಸತತ 16 ಸರಣಿಗಳಲ್ಲಿ ಸೋಲರಿಯದೆ ಮುನ್ನುಗ್ಗುತ್ತಿದ್ದ ಭಾರತದ ಐತಿಹಾಸಿಕ ಜಯದ ಓಟಕ್ಕೆ ಬ್ರೇಕ್ ಬಿದ್ದಿದೆ. ಕುತೂಹಲಕಾರಿ ಸಂಗತಿ ಅಂದ್ರೆ ಭಾರತದ ಈ ಅದ್ಭುತ ಸರಣಿ ಗೆಲುವಿನ ಅಭಿಯಾನವು ಆಗಸ್ಟ್ 2023ರಲ್ಲಿ ಇದೇ ಐರ್ಲೆಂಡ್ ವಿರುದ್ಧದ ಸರಣಿ ಜಯದೊಂದಿಗೆ ಆರಂಭವಾಗಿತ್ತು. ಆದರೆ ಇದೀಗ ಅದೇ ಐರ್ಲೆಂಡ್ ತಂಡವು ಭಾರತಕ್ಕೆ ಆಘಾತ ನೀಡುವ ಮೂಲಕ ಅಧಿಪತ್ಯಕ್ಕೆ ಮುಕ್ತಾಯ ಹಾಡಿದೆ.

1 ರನ್ನಿಂದ ಭಾರತ ಹೀನಾಯ ಸೋಲು
ಸರಣಿ ಉಳಿಸಿಕೊಳ್ಳಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿತ್ತು. ಐರ್ಲೆಂಡ್ ನೀಡಿದ 155 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 1 ರನ್ನಿಂದ ಹೀನಾಯ ಸೋಲು ಕಂಡಿತು.
ಭಾರತದ ಪರ ಮಿಂಚಿದ ಬೌಲರ್ಗಳು
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಭಾರತದ ಬೌಲರ್ಗಳು ಯಶಸ್ವಿ ಆಗಿದ್ದರು. ಭಾರತದ ಪರ ಪ್ರಿನ್ಸ್ ಯಾದವ್ ಮಾರಕ ಬೌಲಿಂಗ್ ದಾಳಿ ನಡೆಸಿ 3 ವಿಕೆಟ್ ಉರುಳಿಸಿದರೆ, ಅರ್ಷ್ದೀಪ್ ಸಿಂಗ್ (35 ರನ್ಗಳಿಗೆ 2 ವಿಕೆಟ್) ಮತ್ತು ಶಿವಂ ದುಬೆ (25 ರನ್ಗಳಿಗೆ 2 ವಿಕೆಟ್) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಇದರ ಪರಿಣಾಮ ಐರ್ಲೆಂಡ್ ತಂಡವನ್ನು 20 ಓವರ್ಗಳಲ್ಲಿ 8 ವಿಕೆಟ್ಗೆ 154 ರನ್ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಆದರೆ ಸ್ಫೋಟಕ ಬ್ಯಾಟರ್ಗಳ ವೈಫಲ್ಯದಿಂದಾಗಿ ಭಾರತ ಹೀನಾಲ ಸೋಲನುಭವಿಸಬೇಕಾಯಿತು. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 34 ರನ್ಗಳಿಂದ ಪರಾಜಯಗೊಂಡಿತ್ತು.
ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ
ಟೀಮ್ ಇಂಡಿಯಾ ಪರ ತಿಲಕ್ ವರ್ಮಾ ಅವರು 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 55 ರನ್ ಕಲೆಹಾಕಿದರು. ಉಳಿದಂತೆ ಶಿವಂ ದುಬೆ 20(16), ಹರ್ಷಿತ್ ರಾಣಾ 21(10), ಇಶಾನ್ ಕಿಶನ್ 12(11), ನಾಯಕ ಶ್ರೇಯಸ್ ಅಯ್ಯರ್ 10(7), ಅಕ್ಷರ್ ಪಟೇಲ್ 14(18) ರನ್ ಗಳಿಸಿದರು. ಕೊನೆಗೆ ಟೀಮ್ ಇಂಡಿಯಾವು ನಿಗದಿತ 20 ಓವರ್ಗಳಲ್ಲಿ 153 ರನ್ ಗಳಿಸಿ ಐರ್ಲೆಡ್ಗೆ ಶರಣಾಯಿತು.
ಈ ಸೋಲಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಲಹೆಯನ್ನೂ ಸಹ ನೀಡಿದ್ದಾರೆ. 'ಈ ಪಂದ್ಯದಲ್ಲಾದರೂ ವೈಭವ್ ಸೂರ್ಯವಂಶಿಯನ್ನು ಆಡಿಸಿದ್ದರೆ ಅವರು ಉತ್ತಮ ಆಟ ಆಡುತ್ತಿದ್ದರು. ಆಗ ಮುಖಭಂಗ ಆಗುವುದು ತಪ್ಪುತ್ತಿತ್ತು,' ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು 'ಮುಂದಿನ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಾದರೂ ಆ ಬಾಲಕನಿಗೆ ಪ್ಲೇಯಿಂಗ್ 11ನಲ್ಲಿ ಒಂದು ಚಾನ್ಸ್ ನೀಡಿ ನೋಡಿ. ಅವನಲ್ಲಿ ಪಂದ್ಯ ಗೆಲ್ಲಿಸಿಕೊಡುವ ತಾಕತ್ತು ಇದೆ,' ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ರಾಷ್ಟ್ರದ ವಿರುದ್ಧ ಭಾರತ ಹೀನಾಯವಾಗಿ ಸರಣಿ ಸೋತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications