ಮಗನನ್ನೂ ಚಿತ್ರರಂಗಕ್ಕೆ ಕರೆತರ್ತಾರ ರಿಷಬ್! ಈ ವೀಡಿಯೋ ನೋಡಿದ್ರೆ ನಿಮಗೇ ಗೊತ್ತಾಗುತ್ತೆ..
ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ಅವರು ತನ್ನ ಮಗನನ್ನೂ ಮನರಂಜನಾ ಮಾಧ್ಯಮಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಸಾಕ್ಷಿಯೆಂಬಂತೆ ವೀಡಿಯೋವೊಂದು ರಿವೀಲ್ ಆಗಿದೆ.
ರಿಷಬ್ ಶೆಟ್ಟಿ ಅಪ್ರತಿಮ ಕೆಲಸಗಾರ. ಒಂದು ಕಾಲದಲ್ಲಿ ಕಾಲೇಜಿಗೆ ಹೋಗುತ್ತಲೇ ಬಿಸ್ಲೆರಿ ವಾಟರ್ ಕ್ಯಾನ್ ಸಪ್ಲೈ ಮಾಡುತ್ತ, ಸಿನಿಮಾದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತ ರಾತ್ರಿ ಹಗಲು ನಿದ್ದೆಯಿಲ್ಲದೇ ಕೆಲಸದಲ್ಲೇ ಮುಳುಗಿ ಹೋಗಿದ್ದವರು. ಇಂಥಾ ಕಷ್ಟದ ಹಾದಿಯಲ್ಲಿ ಬಂದವರಿಗೆ ಒಂದು ಆಸೆ ಇರುತ್ತದೆ. ತನ್ನ ಮಕ್ಕಳು ತನ್ನ ಹಾಗೆ ಕಷ್ಟಪಡಬಾರದು. ಅವರ ಬದುಕು ನೆಮ್ಮದಿಯಿಂದ ಕೂಡಿರಬೇಕು. ಅವರಿಗೆ ತಾನು ಎದುರಿಸಿದ ಸಂಘರ್ಷಗಳೆಲ್ಲ ಎದುರಾಗಬಾರದು ಎಂಬ ಕಾಳಜಿಯದು. ನಟಿ ಸಮಂತಾ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುತ್ತ, ʼನನ್ನ ಅಮ್ಮ ಅಪ್ಪ ಬಾಲ್ಯದಲ್ಲಿ ನನಗೆ ಅಂತ ಸಮಯ ಕೊಟ್ಟಿರಲಿಲ್ಲ. ನನ್ನ ಬಾಲ್ಯ ಉಳಿದ ಮಕ್ಕಳ ಬಾಲ್ಯದ ಹಾಗೆ ಗೋಲ್ಡನ್ ಡೇ ಆಗಿರಲಿಲ್ಲ. ಆದರೆ ನನ್ನ ಮಕ್ಕಳಿಗೆ ಈ ಸಮಸ್ಯೆ ಬರಬಾರದು. ಅವರಿಗೆ ಒಂದೊಳ್ಳೆ ಬಾಲ್ಯ ಸಿಗಬೇಕುʼ ಎಂದಿದ್ದರು.

ಅದೇ ರೀತಿ ಪ್ರಿಯಾಂಕಾ ಚೋಪ್ರಾ, ʼಸಿನಿಮಾರಂಗದಲ್ಲಿ ನಾನು ಬಹಳಷ್ಟು ಕಷ್ಟಪಟ್ಟಿದ್ದೇನೆ. ನನ್ನ ಮಗಳಿಗೆ ಆ ಕಷ್ಟ ಬರಬಾರದುʼ ಎಂಬ ಮಾತು ಹೇಳಿದ್ದಾರೆ. ಇದು ಸೆಲೆಬ್ರಿಟಿಗಳ ಮಾತಾಯ್ತು. ಕಾಮನ್ ಮ್ಯಾನ್ ಚಿಂತನೆ ಸಹ ಹೆಚ್ಚುಕಮ್ಮಿ ಹೀಗೇ ಇರುತ್ತದೆ. ತನ್ನಂತೆ ತನ್ನ ಮಕ್ಕಳು ಕಷ್ಟಪಡಬಾರದು ಅನ್ನುವುದು ಎಲ್ಲರ ಮನಸ್ಸಿನಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಬೇರೂರಿರುತ್ತದೆ. ಇದಕ್ಕೆ ರಿಷಬ್ ಶೆಟ್ಟಿ ಅವರೂ ಹೊರತಾದಂತೆ ಕಾಣುತ್ತಿಲ್ಲ.
ಕಾರ್ ಚಾಲಕನಿಂದ ಕಾಂತಾರ ಸ್ಟಾರ್
ರಿಷಬ್ ಶೆಟ್ಟಿ ವಿಷಯಕ್ಕೆ ಬಂದರೆ ಸಾಮಾನ್ಯ ಕಾರು ಚಾಲಕನಾಗಿದ್ದುಕೊಂಡು ಭಾರತೀಯ ಚಿತ್ರರಂಗದಲ್ಲಿ ಗ್ಲೋಬಲ್ ಸ್ಟಾರ್ ಆದವರು ರಿಷಬ್ ಶೆಟ್ಟಿ. ಕುಂದಾಪುರದ ಕೆರಾಡಿಯಲ್ಲಿ ಜನಿಸಿದ ಇವರು, ಮುಂಬೈನಲ್ಲಿ ಆಫೀಸ್ ಬಾಯ್ ಆಗಿ ದುಡಿದು, ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ 'ಕಾಂತಾರ'ದಂತಹ ಬ್ಲಾಕ್ಬಸ್ಟರ್ ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ವಿಜೇತ ನಟ-ನಿರ್ದೇಶಕರಾಗಿ ಬೆಳೆದು ಬಂದ ರೋಚಕ ಹಾದಿ. ಇವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಸಿನಿಮಾ ಮೇಲಿನ ಅಪಾರ ಆಸಕ್ತಿಯಿಂದ ಮುಂಬೈಗೆ ತೆರಳಿ, ಸಿನಿಮಾದಲ್ಲಿ ಅವಕಾಶಕ್ಕಾಗಿ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಾ, ಚಲನಚಿತ್ರ ನಿರ್ಮಾಪಕರೊಬ್ಬರ ಬಳಿ ಕಾರು ಚಾಲಕರಾಗಿ ಮತ್ತು ಆಫೀಸ್ ಬಾಯ್ ಆಗಿ ದುಡಿದಿದ್ದವರು.
ಹೊಟ್ಟೆತುಂಬ ಉಣ್ಣಲು ಹಣವಿಲ್ಲದೆ ಬೀದಿಬದಿ ವಡಾಪಾವ್ ತಿಂದು ಹಸಿವು ನೀಗಿಸಿಕೊಂಡ ದಿನಗಳಿದ್ದವು. ಕನ್ನಡ ಸಿನಿಮಾರಂಗದಲ್ಲಿ ಅನೇಕರ ಕೈ ಕೆಳಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದವರು. ಒಮ್ಮೆಯಂತೂ ನಿರ್ದೇಶಕ ರವಿ ಶ್ರೀವತ್ಸ ಮಾಡದ ತಪ್ಪಿಗೆ ಇವರ ಕೆನ್ನೆಗೆ ಹೊಡೆದಿದ್ದಾರೆ. ಮರುಕ್ಷಣ ಅಲ್ಲಿರದೇ ಹೊರನಡೆದ ಸ್ವಾಭಿಮಾನಿ.
ಕೋಟಿ ಕೋಟಿ ಬಜೆಟ್
'ತುಘಲಕ್' ಸಿನಿಮಾದ ಮೂಲಕ ನಟನಾ ಜೀವನ ಆರಂಭಿಸಿ, 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಜನಪ್ರಿಯತೆ ಗಳಿಸಿದವರು. 'ರಿಕ್ಕಿ' ಚಿತ್ರದ ಮೂಲಕ ನಿರ್ದೇಶಕರಾಗಿ, ನಂತರ 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ನಂತಹ ಯಶಸ್ವಿ ಸಿನಿಮಾಗಳನ್ನು ನೀಡಿದವರು.'ಬೆಲ್ ಬಾಟಮ್' ಚಿತ್ರದಲ್ಲಿ ಪತ್ತೇದಾರನಾಗಿ, 'ಗರುಡ ಗಮನ ವೃಷಭ ವಾಹನ'ದಲ್ಲಿ ನಟನೆಯ ಮೂಲಕ ಅದ್ಭುತ ಮನ್ನಣೆ ಪಡೆದವರು. ರಿಷಬ್ ವೃತ್ತಿಜೀವನದ ದೊಡ್ಡ ಮೈಲಿಗಲ್ಲು 'ಕಾಂತಾರ'. ಸ್ವತಃ ಬರೆದು, ನಿರ್ದೇಶಿಸಿ ನಟಿಸಿದ ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು. ದೈವಾರಾಧನೆ ಮತ್ತು ಸ್ಥಳೀಯ ಸಂಸ್ಕೃತಿಯನ್ನು ತೆರೆಯ ಮೇಲೆ ಅದ್ಭುತವಾಗಿ ತಂದ ಇವರಿಗೆ ಅತ್ಯುತ್ತಮ ನಟನಾಗಿ ರಾಷ್ಟ್ರಪ್ರಶಸ್ತಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ಉನ್ನತ ಮನ್ನಣೆ ದೊರೆಯಿತು.
ಈಗ ಇವರ ಸ್ಥಿತಿ ಊಹೆಗೂ ಮೀರಿದ ರೀತಿಯಲ್ಲಿ ಬದಲಾಗಿದೆ. ಕೈಯಲ್ಲಿ ನೂರಾರು ಕೋಟಿ ಬಜೆಟ್ನ ಸಿನಿಮಾಗಳಿವೆ. ದೇಶಾದ್ಯಂತ ದೊಡ್ಡ ಇಮೇಜ್ ಇದೆ. ಪ್ರಧಾನಿ ಮೋದಿ ಅವರಿಂದ ಸಣ್ಣ ಹಳ್ಳಿಯ ಸಾಮಾನ್ಯನವರೆಗೆ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರು ಮಗನನ್ನು ಸಿನಿಮಾರಂಗಕ್ಕೆ ಕರೆತರುತ್ತಾರ ಎಂಬ ಮಾತು ಕೇಳಿಬರುತ್ತಿದೆ.
ಇದಕ್ಕೆ ಕಾರಣವೆಂಬ ಹಾಗೆ ಇದೀಗ ತಾನೇ ರಿಷಬ್ ಹೊರಬಿಟ್ಟಿರುವ ವೀಡಿಯೋದಲ್ಲಿ ಅವರ ಮಗ ರನ್ವಿತ್ ಶೆಟ್ಟಿ ಯಕ್ಷಗಾನ ವೇಷ ಹಾಕಿ ಕುಣಿದಿದ್ದಾನೆ. ಕೇವಲ ಏಳು ವರ್ಷ ವಯಸ್ಸಿನ ಚಿಕ್ಕ ಹುಡುಗನ ಪರ್ಫಾಮೆನ್ಸ್ ನೋಡಿ ಈತ ಮುಂದೆ ಅಪ್ಪನಂತೆ ಸಿನಿಮಾರಂಗದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದು ಸಿನಿಮಾಪಂಡಿತರು ಹೇಳುತ್ತಾರೆ. ರಿಷಬ್ ಸಹ ಮಗನಿಗೆ ಯಕ್ಷಗಾನದಂಥ ಕಲೆಯನ್ನು ಕಲಿಸಿ ಅದಕ್ಕೆ ಗಟ್ಟಿ ತಳಹದಿ ನಿರ್ಮಿಸುತ್ತಿರುವಂತಿದೆ.














Click it and Unblock the Notifications