ಅಯೋಧ್ಯೆ ರಾಮಮಂದಿರ ದೇಣಿಗೆ ವಿಚಾರ: ಅಚ್ಚರಿಯ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆಗಳ ದುರುಪಯೋಗದ ಆರೋಪಗಳು ಅತ್ಯಂತ ಆತಂಕಕಾರಿ ಮತ್ತು ನೋವುಂಟು ಮಾಡುವಂತಿವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ರಾಮಮಂದಿರದ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆಗಳ ದುರುಪಯೋಗದ ಆರೋಪಗಳು ಅತ್ಯಂತ ಆತಂಕಕಾರಿ ಎಂದಿದ್ದಾರೆ.
ಈ ಕಾಣಿಕೆಗಳನ್ನು ದೇಶದ ಕೋಟ್ಯಂತರ ಭಕ್ತರು ತಮ್ಮ ಭಕ್ತಿ, ನಂಬಿಕೆ ಮತ್ತು ತ್ಯಾಗ ಮನೋಭಾವದಿಂದ ಅರ್ಪಿಸಿದ್ದಾರೆ. ಪ್ರತಿಯೊಂದು ಕಾಣಿಕೆಯೂ ಪವಿತ್ರ ಉದ್ದೇಶದ ಮೇಲಿನ ಅವರ ವಿಶ್ವಾಸದ ಸಂಕೇತವಾಗಿದೆ. ಆ ವಿಶ್ವಾಸಕ್ಕೆ ಧಕ್ಕೆಯಾಗಿದ್ದರೆ, ಅದು ಕೇವಲ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಷ್ಟೇ ಅಲ್ಲ, ಇಂತಹ ಧಾರ್ಮಿಕ ಸಂಸ್ಥೆಗಳು ಪಾಲಿಸಬೇಕಾದ ಮೌಲ್ಯಗಳಿಗೂ ಮಾಡಿದ ಅವಮಾನವಾಗಿದೆ. ಧಾರ್ಮಿಕ ಕ್ಷೇತ್ರಗಳು ಮತ್ತು ಸಾರ್ವಜನಿಕರಿಂದ ಬಂದಿರುವ ದೇಣಿಗೆಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಅತ್ಯುನ್ನತ ಮಟ್ಟದ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವ ಇರಬೇಕು.

ಈ ಕುರಿತು ನಡೆಯುತ್ತಿರುವ ತನಿಖೆಯು ನ್ಯಾಯಸಮ್ಮತ, ಸಮಗ್ರ ಮತ್ತು ನಿಷ್ಪಕ್ಷಪಾತವಾಗಿರಬೇಕು. ಯಾವುದೇ ಹುದ್ದೆ ಅಥವಾ ಪ್ರಭಾವ ಹೊಂದಿದ್ದರೂ ತಪ್ಪಿತಸ್ಥರು ಯಾರು ಎಂಬುದು ಸಾಬೀತಾದರೆ, ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಕೋಟ್ಯಂತರ ಭಕ್ತರ ವಿಶ್ವಾಸ ಮರುಸ್ಥಾಪನೆಯಾಗುತ್ತದೆ ಮತ್ತು ಭಕ್ತಿಯ ಹೆಸರಿನಲ್ಲಿ ಖಾಸಗಿ ಲಾಭ ಪಡೆಯಲು ಯಾರಿಗೂ ಅವಕಾಶವಿಲ್ಲ ಎಂಬ ಸಂದೇಶ ಸಮಾಜಕ್ಕೆ ತಲುಪುತ್ತದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ರಾಮಮಂದಿರ ದೇಣಿಗೆ ಆರೋಪ - ಏನಿದು ವಿವಾದ
ಉತ್ತರ ಪ್ರದೇಶದ ರಾಮಮಂದಿರ ದೇಣಿಗೆ ವಿಚಾರವು ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಭಕ್ತರು ನೀಡಿದ ನಗದು ಮತ್ತು ವಸ್ತು ರೂಪದ ದೇಣಿಗೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ದುರುಪಯೋಗ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಆರಂಭದಲ್ಲಿ 5 ರಿಂದ 7.5 ಕೋಟಿ ರೂ. ಅಕ್ರಮ ನಡೆದಿದೆ ಎಂದು ಶಂಕಿಸಲಾಗಿದ್ದರೂ, ಪ್ರತಿಪಕ್ಷಗಳು ಈ ಹಗರಣದ ಪ್ರಮಾಣ 200 ಕೋಟಿ ರೂ. ದಾಟಬಹುದು ಎಂದು ವಾದಿಸುತ್ತಿವೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಈ ತನಿಖೆಯು ಕೇವಲ ಕೆಳಹಂತದ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ಟೀಕಿಸಿವೆ. ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ಯತ್ನಿಸಲಾಗುತ್ತಿದ್ದು, ಈ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.












Click it and Unblock the Notifications