ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಡಿ: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹಿಂಗ್ ಹೇಳಿದ್ಯಾಕೆ?
Ireland v India T20: ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನುಭವಿಸಿತ್ತು.ಇದೀಗ ಭಾನುವಾರ (ಜೂನ್ 28) ನಡೆಯಲಿರುವ ಎರಡನೇ ಪಂದ್ಯಕ್ಕಾದರೂ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅರ್ಧಶತಕ (50) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ದೊಡ್ಡ ಮೊತ್ತದ ರನ್ ಗಳಿಸಲು ವಿಫಲರಾದರು. ಭಾರತವು ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಲನುಭವಿಸಿತು. ಇಂತಹ ಪರಿಸ್ಥಿತಿಯಲ್ಲಿ ಹೊರಗುಳಿದಿರುವ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ತರಬೇಕು ಎಂಬ ಚರ್ಚೆಗಳು ಜೋರಾಗಿವೆ.

ಆಕಾಶ್ ಚೋಪ್ರಾ ಹೇಳಿದ್ದೇನು?
ಆಕಾಶ್ ಚೋಪ್ರಾ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ್ದು, ತಂಡದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ. 'ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಂದ್ರೆ ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಇಬ್ಬರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತದೆ. ಆದರೆ ತಂಡ ಸೋತಾಗ ಹೊರಗಿರುವ ಆಟಗಾರನೇ ಉತ್ತಮವಾಗಿ ಕಾಣಿಸುತ್ತಾನೆ ಮತ್ತು ಅವನೇ ಪಂದ್ಯ ಗೆಲ್ಲಿಸುತ್ತಾನೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ಅದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ,' ಎಂದು ಅವರು ಹೇಳಿದ್ದಾರೆ.
ಇಶಾನ್ ಕಿಶನ್, ಸಂಜು ಫಾರ್ಮ್ಗೆ ಮರಳುವ ಭರವಸೆ
ಆಕಾಶ್ ಚೋಪ್ರಾ ಅವರು ವೈಭವ್ ಅವರನ್ನು ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಆಡಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇಶಾನ್ ಕಿಶನ್ ಇತ್ತೀಚೆಗಷ್ಟೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಆದ್ದರಿಂದ ಅವರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿದೆ. ಸಂಜು ಸ್ಯಾಮ್ಸನ್ ಅವರ ಅದೃಷ್ಟ ಸರಿಯಿಲ್ಲದ ಕಾರಣ ಮೊದಲ ಪಂದ್ಯದಲ್ಲಿ ಬೇಗನೆ ಔಟಾದರು. ಆದರೆ ಮುಂದಿನ ಪಂದ್ಯದಲ್ಲಿ ಅವರು ರನ್ ಗಳಿಸುವ ವಿಶ್ವಾಸವಿದೆ,' ಎಂದು ಭರವಸೆ ವ್ಯಕ್ತಪಡಿಸಿದರು.
'ವೈಭವ್ ಅವರನ್ನು ಆಡಿಸುವುದು ಬೇಡ'
'ಇದು ರಾಜಕೀಯವಾಗಿ ಸರಿಯಾದ ಹೇಳಿಕೆ ಅಲ್ಲದಿರಬಹುದು, ಆದರೆ ನಾನು ಮ್ಯಾನೇಜ್ಮೆಂಟ್ನಲ್ಲಿಇದ್ದಿದ್ದರೆ ವೈಭವ್ ಅವರನ್ನು ಆಡಿಸುತ್ತಿರಲಿಲ್ಲ. ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಇಬ್ಬರನ್ನೂ ತಂಡದಿಂದ ಕೈಬಿಡುವುದಿಲ್ಲ. ಮೊದಲ ಪಂದ್ಯದಲ್ಲಿ ಆಡಿದ ಅಗ್ರ ಮೂರು ಬ್ಯಾಟರ್ಗಳನ್ನೇ ಮುಂದಿನ ಪಂದ್ಯದಲ್ಲೂ ಕಣಕ್ಕಿಳಿಸಿ, ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತೇನೆ,' ಎಂದು ಆಕಾಶ್ ಚೋಪ್ರಾ ಅವರು ಸ್ಪಷ್ಟಪಡಿಸಿದರು.
'ಭಾರತೀಯ ಬ್ಯಾಟರ್ಗಳು ಮೊದಲ ಬ್ಯಾಟಿಂಗ್ ಮಾಡಿದರೆ 250 ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಐರ್ಲೆಂಡ್ ಎದುರು ಅನುಭವಿಸಿದ ಮೊದಲ ಸೋಲು ಭಾರತ ತಂಡಕ್ಕೆ ಖಂಡಿತವಾಗಿಯೂ ಬೇಸರ ತಂದಿರುತ್ತದೆ. ಆದ್ದರಿಂದ ಅವರು ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ,' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೂರ್ಯವಂಶಿ ಅವರ ಅದ್ಭುತ ಪ್ರದರ್ಶನ
ವೈಭವ್ ಸೂರ್ಯವಂಶಿ ಇತ್ತೀಚಿನ ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 237.30 ರ ಭರ್ಜರಿ ಸ್ಟ್ರೈಕ್ ರೇಟ್ನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳ ನೆರವಿನಿಂದ 776 ರನ್ ಗಳಿಸಿ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಆಗಿದ್ದರು. ಅಲ್ಲದೆ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ವಿರುದ್ಧದ ಇತ್ತೀಚಿನ ತ್ರಿಕೋನ ಸರಣಿಯಲ್ಲಿ 42.20 ರ ಸರಾಸರಿಯಲ್ಲಿ 211 ರನ್ ಗಳಿಸಿದ್ದರು. ಇದರಲ್ಲಿ ಲಂಕಾ ಎ ವಿರುದ್ಧ ಕೇವಲ 11 ಎಸೆತಗಳಲ್ಲಿ ಬಾರಿಸಿದ ಅತ್ಯಂತ ವೇಗದ ಅರ್ಧಶತಕವೂ ಸೇರಿದೆ. ಆದರೂ ಸರಣಿಯ ನಿರ್ಣಾಯಕ ಹಂತದಲ್ಲಿ ಹಿರಿಯ ಆಟಗಾರರ ಮೇಲೆ ನಂಬಿಕೆ ಇಡುವುದು ಮತ್ತು ತಂಡದ ಸಂಯೋಜನೆಯನ್ನು ತಕ್ಷಣವೇ ಬದಲಾಯಿಸದಿರುವುದು ಸೂಕ್ತ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಇಂದಿನ ಪಂದ್ಯದಲ್ಲಿ ವೈಭವ್ ಅವರನ್ನು ಆಡಿಸುತ್ತಾರೆ ಎಂದು ನಂಬಿದ್ದಾರೆ. ಆದರೆ ಆಕಾಶ್ ಚೋಪ್ರಾ ಮಾತ್ರ ಅವರನ್ನು ಇನ್ನೂ ಬೆಂಚ್ ಕಾಯಿಸುವುದೇ ಉತ್ತಮ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.












Click it and Unblock the Notifications