BMTC ಸಂಸ್ಥೆ 4,500 ಹೊಸ ಇ-ಬಸ್; ಕರ್ನಾಟಕ ಸಚಿವ ಸಂಪುಟದ ಅನುಮೋದನೆ ವಿಳಂಬ: ವ್ಯಾಪಕ ಆಕ್ರೋಶ
ಬೆಂಗಳೂರು: ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಹೊಸ ಬಸ್ಗಳ ಖರೀದಿ ಆಗಿವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರವು ಬೆಂಗಳೂರಿಗಾಗಿಯೇ ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಅಡಿಯಲ್ಲಿ 4,500 ಪರಿಸರ ಸ್ನೇಹಿ ಬಸ್ಗಳನ್ನು ನೀಡಲು ಮುಂದಾದರೂ ರಾಜ್ಯ ಸರ್ಕಾರ ಅನುಮತಿ ನೀಡದೇ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ ಶೇ. 50ರಷ್ಟು ಕಡಿಮೆ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಜನರಿಗೆ ತೊಂದರೆ ಆಗುತ್ತಿದೆ' ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 4,500 ಹೊಸ ಎಲೆಕ್ಟ್ರಿಕ್ ಬಸ್ಗಳ ಪ್ರಸ್ತಾವನೆಗೆ ಒಪ್ಪಿ ಮಂಜೂರು ಮಾಡಿದೆ. ಆದರೆ ರಾಜ್ಯ ಸರ್ಕಾರ ಕಳೆದ ಆರು ತಿಂಗಳಿನಿಂದ ಇದಕ್ಕೆ ಅನುಮೋದನೆ ನೀಡದಿರುವುದು ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿ, ಸೂರತ್, ಅಹ್ಮದಾಬಾದ್, ಹೈದರಾಬಾದ್ ಸಿಟಿಗೂ ಹೆಚ್ಚಿನ ಇ-ಬಸ್ಗಳನ್ನು ಬೆಂಗಳೂರಿಗೆ ಮಂಜೂರು ಮಾಡಲಾಗಿದೆ. ಇದರಿಂದ ನಗರ ಸಾರಿಗೆ ಸಂಪರ್ಕ ಮತ್ತು ಬಸ್ ಸೇವೆಗಳ ಲಭ್ಯತೆ ಹೆಚ್ಚಾಗಲಿದೆ. ಪರಿಸರಕ್ಕೂ ಕೊಡುಗೆ ನೀಡಬಹುದಾಗಿದೆ. ಇಂತಹ ಯೋಜನೆ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸಂಸದರು ದೂರಿದ್ದಾರೆ.

ಎಕ್ಸ್ ಪೋಸ್ಟ್ನಲ್ಲಿ 'ಮನಿ ಕಂಟ್ರೋಲ್' ವರದಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಸರ್ಕಾರದ ನಡೆ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಅವರೊಂದಿಗೆ ಸಂಸದ ಪಿಸಿ ಮೋಹನ್ ಅವರು ಸಹ ರಾಜ್ಯ ಸಚಿವ ಸಂಪುಟವು ಸದರಿ ಪ್ರಸ್ತಾವನೆಗೆ ಕೂಡಲೇ ಅನುಮೋದನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು, 'ಪಿಎಂ ಇ-ಡ್ರೈವ್' ಯೋಜನೆಯಡಿ ಈ ಪರಿಸರ ಸ್ನೇಹಿ ಬಸ್ಗಳನ್ನು ಬೆಂಗಳೂರಿಗೆ ಮಂಜೂರು ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದಾಗ್ಯೂ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಸಿಗದ ಕಾರಣ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಈ ಬಸ್ಗಳನ್ನು ರಸ್ತೆಗಿಳಿಸಲು ಸಾಧ್ಯವಾಗದೆ ಅಸಹಾಯಕವಾಗಿದೆ. ಈ ವಿಳಂಬವು ದಿನನಿತ್ಯ ಲಕ್ಷಾಂತರ ಪ್ರಯಾಣಿಕರು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ, ನೌಕರರು ಕಚೇರಿ ಸರಿಯಾದ ಸಮಯಕ್ಕೆ ತೆರಳಲಾಗದೇ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ. ಬೆಂಗಳೂರಿಗರು ನಿತ್ಯ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಸಾರಿಗೆ ಬಿಕ್ಕಟ್ಟು ಎದುರಾಗುವ ಆತಂಕ?
ಬೆಂಗಳೂರಿನ ಜನಸಂಖ್ಯೆಗೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಸಾರ್ವಜನಿಕ ಸಾರಿಗೆ ಬಲಪಡಿಸಬೇಕು. ಸದ್ಯ ಬಿಎಂಟಿಸಿ ನಗರದ ರಸ್ತೆಗಳಲ್ಲಿ ಅಗತ್ಯವಿರುವುದಕ್ಕಿಂತ ಸುಮಾರು ಶೇಕಡಾ 50 ರಷ್ಟು ಕಡಿಮೆ ಬಸ್ಗಳೊಂದಿಗೆ ಕಾರ್ಯಾಚರಣೆ ಮಾಡುತ್ತಿದೆ. ಇ ಬಸ್ಗಳ ಸೇರ್ಪಡೆಯಿಂದ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ, ಪರಿಸರಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗುತ್ತದೆ. ರಾಜ್ಯ ಸರ್ಕಾರದ ತಾರತಮ್ಯ ನೀತಿಯಿಂದ ಸಾರ್ವಜನಿಕರು ಪ್ರಯಾಣದ ಸಂಕಷ್ಟ ಎದುರಿಸುವಂತಾಗಿದೆ ಎಂದು ಪಿಸಿ ಮೋಹನ್ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಬೇರೆ ನಗರಗಳಿಗಿಂತ ಬೆಂಗಳೂರಿಗೆ ಹೆಚ್ಚು ಇ-ಬಸ್ ವಿತರಣೆ
ಪಿಎಂ ಇ-ಡ್ರೈವ್ ಅಡಿ ಬೆಂಗಳೂರು ಸೇರಿದಂತೆ ದೇಶದ ಐದು ಪ್ರಮುಖ ನಗರಗಳಿಗೆ 10,900 ಇ-ಬಸ್ ಹಂಚಿಕೆ ಮಾಡಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಎಲ್ಲ ಪೂರ್ಣಗೊಂಡಿದೆ. ದೆಹಲಿಗೆ 2,800, ಹೈದರಾಬಾದ್ಗೆ 2,000, ಸೂರತ್ಗೆ 600 ಮತ್ತು ಅಹಮದಾಬಾದ್ಗೆ 1,000 ಬಸ್ ನೀಡಲು ಮುಂದಾದರೆ, ಬೆಂಗಳೂರಿಗೆ ಬರೋಬ್ಬರಿ 4,500 ಬಸ್ ಒದಗಿಸಲು ಕೇಂದ್ರ ಮುಂದಾಗಿದೆ. ಆದರೆ ರಾಜ್ಯ ಸರ್ಕಾರದ ವಿಳಂಬದಿಂದ ಬಸ್ಗಳ ವಿತರಣೆ ವಿಳಂಬವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಿಎಂ ಸಲಹೆಗಾರರಿಂದ ಭರವಸೆ
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಈ ವಿಚಾರವು ತೀವ್ರ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇ-ಬಸ್ ಪಡೆಯುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಕ್ಯಾಬಿನೆಟ್ನಲ್ಲಿ ಶೀಘ್ರದಲ್ಲೇ ಮಂಡಿಸಿ, ಒಪ್ಪಿಗೆ ಸಿಗುವಂತೆ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.
ನಿರ್ಲಕ್ಷ್ಯ ಬೇಡ, ಕೂಡಲೇ ಸೂಕ್ತ ಕ್ರಮವಹಿಸಿ
ಬೆಂಗಳೂರಿನ ಮಟ್ಟಿಗೆ ಇಂತಹ ಯೋಜನೆಗಳು, ಯೋಜನೆ ಆರಂಭ, ಜಾರಿ ವಿಳಂಬದಂತಹ ಪ್ರವೃತ್ತಿಗಳು ಇದೇನು ಹೊಸದಲ್ಲ. ಈ ಹಿಂದೆ 2019 ರಲ್ಲಿದ್ದ ಮೈತ್ರಿ ಸರ್ಕಾರದವೇ ಸಮಯದಲ್ಲಿ ಆಡಳಿತಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸದ ಕಾರಣ, ಕೇಂದ್ರದ 'ಫೇಮ್' ಯೋಜನೆಯಡಿ ಒದಗಿಸಬೇಕಾಗಿದ್ದ ಸುಮಾರು 75 ಕೋಟಿ ರೂಪಾಯಿಗಳ ಬೃಹತ್ ಸಬ್ಸಿಡಿಯನ್ನು ಬಿಎಂಟಿಸಿ ಕಳೆದುಕೊಂಡಿತ್ತು. ಈ ಬಾರಿಯು ಅದೇ ರೀತಿ ಆಗದಂತೆ ಅಸ್ತಿತ್ವಕ್ಕೆ ಬಂದ ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.













Click it and Unblock the Notifications