BMW ಮಾಲೀಕನ ಸೂಪರ್ ಐಡಿಯಾ: ಬೆಂಗಳೂರು ಪ್ರವಾಹದಿಂದ ಕಾರು ರಕ್ಷಿಸಲು ಇದೇ ಬೆಸ್ಟ್ ಎಂದ ನೆಟ್ಟಿಗರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಮಳೆಯ ಆರ್ಭಟದ ಬೆನ್ನಲ್ಲೇ ಬೆಂಗಳೂರಿನ ಮಂದಿಯ ಕ್ರಿಯೇಟಿವಿಟಿ ಜಗತ್ತಿನ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಗೆ ನಗರದ ಐಷಾರಾಮಿ ಏರಿಯಾಗಳಾದ ಇಂದಿರಾನಗರ, ಕೋರಮಂಗಲದ ರಸ್ತೆಗಳು ಕೆರೆಯಂತಾಗಿದ್ದವು. ಇದನ್ನು ಕಂಡು ಬೆಚ್ಚಿಬಿದ್ದ ಇಂದಿರಾನಗರದ ಬಿಎಂಡಬ್ಲ್ಯೂ (BMW) ಕಾರಿನ ಮಾಲೀಕರೊಬ್ಬರು, ನಗರದ ಕಳಪೆ ಮೂಲಸೌಕರ್ಯ ಹಾಗೂ ಪ್ರವಾಹದಿಂದ ತಮ್ಮ ಕೋಟ್ಯಂತರ ರೂಪಾಯಿ ಕಾರನ್ನು ರಕ್ಷಿಸಲು ಮಾಡಿರುವ ಐಡಿಯಾ ಈಗ ವೈರಲ್ ಆಗಿದೆ.
ಏನಿದು ಐಡಿಯಾ?
ಸಾಮಾನ್ಯವಾಗಿ ಕಾರು ರಕ್ಷಣೆಗೆ ಕವರ್ ಹಾಕಿ ನಿಲ್ಲಿಸುತ್ತಾರೆ. ಇದೇ ಕೆಲಸವನ್ನು ಬಹುತೇಕ ಕಾರು ಮಾಲೀಕರು ಮಾಡ್ತಾರೆ. ಆದ್ರೆ ಇಂದಿರಾನಗರದ ಕಾರು ಮಾಲೀಕ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿರುವ ನೀಲಿ ಬಣ್ಣದ ಐಷಾರಾಮಿ BMW ಕಾರಿನ ಕೆಳಭಾಗವನ್ನು ಸಂಪೂರ್ಣವಾಗಿ ಒಂದು ಕಪ್ಪು ಬಣ್ಣದ ದಪ್ಪನೆಯ ವಾಟರ್ಪ್ರೂಫ್ ಬ್ಯಾರಿಯರ್ ಅಥವಾ ರಕ್ಷಣಾತ್ಮಕ ಕವಚದಿಂದ ಸುತ್ತಿ ಮುಚ್ಚಿದ್ದಾರೆ. ದಿಢೀರ್ ಮಳೆ ಬಂದು ರಸ್ತೆಯಲ್ಲಿ ನೀರು ನಿಂತರೂ ಸಹ, ಇಂಜಿನ್ ಅಥವಾ ಕಾರಿನ ಒಳಗೆ ನೀರು ನುಗ್ಗದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ.

ಈ ಕಪ್ಪು ಕವಚದ ಮೇಲ್ಭಾಗದಲ್ಲಿ ರಾತ್ರಿಯ ವೇಳೆಯೂ ಕಾರು ಬೇರೆಯವರಿಗೆ ಸ್ಪಷ್ಟವಾಗಿ ಕಾಣಿಸಲಿ ಎಂಬ ಸುರಕ್ಷತಾ ದೃಷ್ಟಿಯಿಂದ ಹಸಿರು ಬಣ್ಣದ ಹೊಳೆಯುವ ರೇಡಿಯಂ ಲೈನ್ (Neon Green Stripe) ಅನ್ನು ಹಾಕಲಾಗಿದೆ. ಕಾರಿನ ಪಕ್ಕದಲ್ಲೇ ಒಂದು ಬೈಕ್ ಅನ್ನು ನಿಲ್ಲಿಸಲಾಗಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
"ಬಿಬಿಎಂಪಿ ರಸ್ತೆ ಮತ್ತು ಡ್ರೈನೇಜ್ ಸರಿಪಡಿಸುವುದನ್ನು ಕಾಯುತ್ತಾ ಕೂತರೆ ನಮ್ಮ ಕಾರು ಗುಜರಿ ಸೇರೋದು ಗ್ಯಾರಂಟಿ, ಅದಕ್ಕೆ ನಮ್ಮ ರಕ್ಷಣೆ ನಮ್ಮ ಕೈಯಲ್ಲೇ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಭಾರತದ ಇಂಜಿನಿಯರಿಂಗ್ ಹಬ್ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಇಂತಹ ಐಡಿಯಾಗಳು ಮಾತ್ರ ಮೂಡಲು ಸಾಧ್ಯ ಎಂದು ತಮಾಷೆ ಮಾಡುತ್ತಿದ್ದಾರೆ.
Someone invented a new way to protect their bmw against flash floods and failing infrastructure in @peakbengaluru 's indiranagar pic.twitter.com/vFhh1tfblX
— Shreshta (@shreshhhhhhh) June 27, 2026
ಪೋಸ್ಟ್ಗೆ ಟ್ವಿಸ್ಟ್; ಇದು ಇಲಿ ಕಾಟಕ್ಕೆ ಸ್ವಾಮಿ ಎಂದ ಜನ
ಇದು ಬೆಂಗಳೂರಿನ ಮಳೆ ಅಥವಾ ಕಳಪೆ ಮೂಲಸೌಕರ್ಯದಿಂದ ಬಚಾವಾಗಲು ಮಾಡಿದ ಪ್ಲಾನ್ ಅಲ್ಲ, ಬದಲಿಗೆ ಸಿಟಿ ಜನರನ್ನು ಕಾಡುವ 'ಇಲಿಗಳ' ಕಾಟಕ್ಕೆ ಮಾಡಿರುವ ಅಸಲಿ ಪ್ಲ್ಯಾನ್ ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ಸತ್ಯ ಬಿಚ್ಚಿಟ್ಟಿದ್ದಾರೆ. ಕಾರಿನ ಸುತ್ತಲೂ ಬೇಲಿಯಂತೆ ಹಾಕಿ ಮುಚ್ಚಿರುವ ಆ ವಸ್ತುವಿನ ಅಸಲಿ ಕಥೆಯನ್ನು ನೆಟ್ಟಿಗರು ಕಮೆಂಟ್ಗಳ ಮೂಲಕ ವಿವರಿಸಿದ್ದಾರೆ.
ಈ ಪೋಸ್ಟ್ಗೆ ಕಮೆಂಟ್ ಮಾಡಿರುವ ಬಹುತೇಕರು, "ಇದು ಫ್ಲ್ಯಾಶ್ ಫ್ಲಡ್ಸ್ನಿಂದ (ದಿಢೀರ್ ಪ್ರವಾಹ) ಬಚಾವಾಗಲು ಮಾಡಿದ್ದಲ್ಲ, ಬದಲಿಗೆ ಇಲಿಗಳ ಕಾಟದಿಂದ ಕಾರನ್ನು ರಕ್ಷಿಸಲು ಬಳಸಿರುವ 'ರೋಡೆಂಟ್ ಪ್ರೊಟೆಕ್ಷನ್ ಮ್ಯಾಟ್' (Rodent Protection Mat)" ಎಂದು ನೆಟ್ಟಿಗರು ತಿಳಿಸಿದ್ದಾರೆ. "ಇದು ಪ್ರವಾಹದಿಂದ ರಕ್ಷಿಸಿಕೊಳ್ಳಲು ಅಲ್ಲ, ಇಲಿಗಳು ಮತ್ತು ಇತರ ಕೀಟಗಳು ಕಾರಿನ ಒಳಗೆ ನುಗ್ಗಿ ವೈರ್ಗಳನ್ನು ಕಡಿಯದಂತೆ ತಡೆಯಲು ಬಳಸಿರುವ ಮ್ಯಾಟ್. ಇದು ತುಂಬಾ ಸಾಮಾನ್ಯವಾದ ವ್ಯವಸ್ಥೆ" ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಇದರಿಂದ ಪ್ರವಾಹದ ಸಮಯದಲ್ಲಿ ಹೇಗೆ ತಾನೇ ಸಹಾಯ ಆಗಲು ಸಾಧ್ಯ? ಇದು ಇಲಿಗಳಿಗಾಗಿ ಮಾಡಿರುವ ಬೇಲಿ. ವಿಯೆಟ್ನಾಂ ದೇಶದ ರಸ್ತೆ ಬದಿಯ ಪಾರ್ಕಿಂಗ್ಗಳಲ್ಲಿ ಇದನ್ನು ನೋಡುವುದು ತುಂಬಾ ಸಾಮಾನ್ಯ" ಎಂದು ಬರೆದಿದ್ದಾರೆ.
"ಕೋಟಿ ಕಾರು ತರೋಕೆ ದುಡ್ಡಿದೆ, ಪಾರ್ಕಿಂಗ್ಗೆ ಜಾಗ ಇಲ್ವಾ?"
ಇದೇ ವೇಳೆ, ಇಷ್ಟೊಂದು ದುಬಾರಿ ಬಿಎಂಡಬ್ಲ್ಯೂ ಕಾರನ್ನು ರಸ್ತೆಯ ಮೇಲೆಯೇ ಪಾರ್ಕ್ ಮಾಡಿರುವುದಕ್ಕೆ ಬೆಂಗಳೂರಿನ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೋಟ್ಯಂತರ ರೂಪಾಯಿ ಕೊಟ್ಟು ಬಿಎಂಡಬ್ಲ್ಯೂ ಕಾರು ಖರೀದಿಸಲು ದುಡ್ಡಿದೆ, ಅದಕ್ಕೆ ಸ್ವಂತ ಪಾರ್ಕಿಂಗ್ ಸ್ಪೇಸ್ ಇಲ್ಲ. ಎಂತಹ ಚೀಪ್ ಮೈಂಡ್ಸೆಟ್ ಇದು" ಎಂದು ಒಬ್ಬರು ತರಾಟೆಗೆ ತಗೆದುಕೊಂಡಿದ್ದಾರೆ. ಸ್ವಂತ ಪಾರ್ಕಿಂಗ್ ಜಾಗ ಇಲ್ಲದವರು ರಸ್ತೆಗಳನ್ನು ಬ್ಲಾಕ್ ಮಾಡುವುದನ್ನು ಮೊದಲು ನಿಲ್ಲಿಸಬೇಕು" ಎಂದು ಕಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಲಿಗಳ ಕಾಟ ವಿಪರೀತವಾಗಿರುತ್ತದೆ. ಐಷಾರಾಮಿ ಕಾರುಗಳ ಇಂಜಿನ್ ಒಳಗೆ ನುಗ್ಗುವ ಇಲಿಗಳು ಕೇವಲ ಒಂದೇ ಒಂದು ವೈರ್ ಕತ್ತರಿಸಿದರೂ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಅಲ್ಲದೆ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಕೂಡ ತಲೆನೋವಿನ ಕೆಲಸ. ಇದೇ ಕಾರಣಕ್ಕೆ ಬಿಎಂಡಬ್ಲ್ಯೂ ಮಾಲೀಕ ಈ ಪ್ಲ್ಯಾನ್ ಮಾಡಿದ್ದಾರೆ.












Click it and Unblock the Notifications