ಉತ್ತರ ಬೆಂಗಳೂರಿನ ಪ್ರಯಾಣಿಕರಿಗೆ ಗುಡ್ ನ್ಯೂಸ್; ಯಲಹಂಕದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಒಪ್ಪಿಗೆ
ಬೆಂಗಳೂರು: ಉತ್ತರ ಭಾರತದ ಕಡೆಗೆ ತೆರಳುವ ಬಹುತೇಕ ರೈಲುಗಳು ಯಲಹಂಕ ಮಾರ್ಗವಾಗಿ ಮುಂದೆ ಆಂಧ್ರ ಗಡಿ ಮೂಲಕ ಸಾಗುತ್ತದೆ. ಕೆಲವು ಉತ್ತರ ಕರ್ನಾಟಕ ಮಾರ್ಗವಾಗಿಯೂ ತೆರಳುತ್ತವೆ. ಇದರಲ್ಲಿ ಎಕ್ಸ್ಪ್ರೆಸ್ ರೈಲೊಂದು ಯಲಹಂಕ ನಿಲ್ದಾಣದಲ್ಲಿ ನಿಲುಗಡೆ ನೀಡಲು ಕೇಂದ್ರ ರೈಲ್ವೆ ಮಂಡಳಿಯು ಒಪ್ಪಿ ಅನುಮೋದಿಸಿದೆ. ಈ ಮೂಲಕ ಯಲಹಂಕ ರೈಲು ಸಂಪರ್ಕಕ್ಕೆ ಬಲ ಬಂದಂತಾಗಿದೆ ಎಂದು ಬಿಜೆಪಿ ಸಂಸದ ಡಾ.ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿ ಮಾಹಿತಿ ನೀಡಿದ ಸುಧಾಕರ್ ಅವರು, ಮುಂಬೈ-ಕೊಯಮತ್ತೂರು ಎಕ್ಸ್ಪ್ರೆಸ್ ರೈಲು ಬೆಂಗಳೂರು ಹೊರ ವಲಯದ ಯಲಹಂಕ ನಿಲ್ದಾಣದಲ್ಲೂ ನಿಲುಗಡೆ ನೀಡಲಿದೆ. ಯಲಹಂಕ ಮತ್ತು ಬೆಂಗಳೂರಿನ ಉತ್ತರ ಭಾಗದ ಸಾರ್ವಜನಿಕರ ಬಹುದಿನಗಳ ಪ್ರಮುಖ ಬೇಡಿಕೆಯೊಂದು ಇಂದು ನನಸಾಗಿದ್ದು, ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮನವಿಗೆ ಸ್ಪಂದಿಸಿದ ರೈಲ್ವೆ ಮಂಡಳಿ
ಯಲಹಂಕ ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಸಾವಿರಾರು ದಿನನಿತ್ಯದ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಕುಟುಂಬಗಳು ಮುಂಬೈ ಮತ್ತು ಕೊಯಮತ್ತೂರು ಭಾಗಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ). ಕೊಯಮತ್ತೂರು ಎಕ್ಸ್ಪ್ರೆಸ್ ರೈಲಿಗೆ ಯಲಹಂಕ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೆ.
ನಮ್ಮ ಮನವಿ ಹಾಗೂ ನಿರಂತರ ಪ್ರಯತ್ನದಿಂದಾಗಿ ನೈಋತ್ಯ ರೈಲ್ವೆಯು ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಗೆ ಶಿಫಾರಸು ಮಾಡಿತ್ತು. ಇದೀಗ ರೈಲ್ವೆ ಮಂಡಳಿಯು ಈ ಹೆಚ್ಚುವರಿ ನಿಲುಗಡೆಗೆ ಅಧಿಕೃತ ಅನುಮೋದನೆ ನೀಡಿ ಆದೇಶ ಹೊರಡಿಸಿದೆ ಎಂದು ಆದೇಶ ಪ್ರತಿಗಳನ್ನು ಅವರು ಹಂಚಿಕೊಂಡಿದ್ದಾರೆ.
ಹೊಸ ನಿಲುಗಡೆಗೆ ಇಂದು ವಿ.ಸೋಮಣ್ಣ ಚಾಲನೆ
ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ) - ಕೊಯಮತ್ತೂರು - ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ) ಎಕ್ಸ್ಪ್ರೆಸ್ ರೈಲು (11013/11014) ಮುಂದೆ ಯಲಹಂಕ ರೈಲು ನಿಲ್ದಾಣದಲ್ಲಿ ಅಧಿಕೃತವಾಗಿ ನಿಲುಗಡೆಯಾಗಲಿದೆ. ಈ ರೈಲಿನಲ್ಲಿ ಈ ಹೊಸ ನಿಲುಗಡೆಗೆ ಇಂದು ಮಧ್ಯಾಹ್ನ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.
ಈ ಸಾರ್ವಜನಿಕ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿ ಅನುಮೋದನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ತಿಳಿಸಿದರು.
ಸಂಚಾರ ದಟ್ಟಣೆಗೂ ನಿಯಂತ್ರಣಕ್ಕೂ ಕೊಡುಗೆ
ಈ ಹೊಸ ನಿಲುಗಡೆಯಿಂದ ಉತ್ತರ ಬೆಂಗಳೂರಿನ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾವಿರಾರು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಮೆಜೆಸ್ಟಿಕ್ (KSR ಬೆಂಗಳೂರು) ನಿಲ್ದಾಣದವರೆಗೆ ತೆರಳುವ ಅಗತ್ಯ ಕಡಿಮೆಯಾಗುತ್ತದೆ. ಜೊತೆಗೆ ನಗರದ ಸಂಚಾರ ದಟ್ಟಣೆಯನ್ನೂ ತಗ್ಗಿಸಲು ಇದು ಸಹಕಾರಿಯಾಗಲಿದೆ. ಉತ್ತಮ ಸಂಪರ್ಕ ವ್ಯವಸ್ಥೆ, ಉತ್ತಮ ಮೂಲಸೌಕರ್ಯ ಮತ್ತು ಜನಸ್ನೇಹಿ ಅಭಿವೃದ್ಧಿ ಮೂಲಕ ವಿಕಸಿತ ಯಲಹಂಕ, ವಿಕಸಿತ ಬೆಂಗಳೂರು ಹಾಗೂ ವಿಕಸಿತ ಚಿಕ್ಕಬಳ್ಳಾಪುರ ನಿರ್ಮಾಣಕ್ಕೆ ಸದಾ ಬದ್ಧ ಎಂದು ಅವರು ಹೇಳಿದ್ದಾರೆ.













Click it and Unblock the Notifications