ಎಕ್ಸ್ಪ್ರೆಸ್ ರೈಲಿನಲ್ಲಿ ಅಧಿಕಾರಿಗಳ ಅಚ್ಚರಿಯ ತಪಾಸಣೆ: ಪ್ರಯಾಣಿಕರ ಸುರಕ್ಷತೆ ಹೆಚ್ಚಳಕ್ಕೆ ಒತ್ತು
ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ಜಾಲ ವಿಸ್ತರಣೆ, ಹೊಸ ಮಾರ್ಗಗಳಲ್ಲಿ ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಇದರಿಂದ ಅಗ್ಗದ ಮತ್ತು ಸುರಕ್ಷಿತ ರೈಲು ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾತ್ರವಲ್ಲದೇ ಆಗಾಗ ರೈಲುಗಳಲ್ಲಿ ಮೂಲಸೌಕರ್ಯ ಸೇರಿ ಇನ್ನಿತರ ಸಮಸ್ಯೆಗಳು ಏರಿಕೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಲು ಎಕ್ಸ್ಪ್ರೆಸ್ ರೈಲಿನಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದೆ.
ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕ (ಡಿಆರ್ಎಂ) ಮುದಿತ್ ಮಿತ್ತಲ್ ಅವರು ವಿಭಾಗೀಯ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಟುಟಿಕೊರಿನ್ ಎಕ್ಸ್ಪ್ರೆಸ್ ರೈಲಿನಲ್ಲಿ (16236) ಅಚ್ಚರಿ ಎಂಬಂತೆ ದಿಢೀರ್ ತಪಾಸಣೆ ನಡೆಸಿದರು. ರೈಲ್ವೆ ಮಂಡಳಿಯ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಈ ತಪಾಸಣೆ ಮಾಡಿದ್ದು, ಪ್ರಯಾಣಿಕರ ಸ್ನೇಹಿ ವಾತಾವರಣ ಕುರಿತು ಖುದ್ದು ಅಧಿಕಾರಿಗಳೇ ತಿಳಿದುಕೊಂಡರು.

ಒಂದೂರಿನಿಂದ ಇನ್ನೊಂದು ಊರಿಗೆ ತೆರಳುವಾಗ, ರಾತ್ರಿ-ಹಗಲು ಸುದೀರ್ಘ ಪ್ರಯಾಣ ಮಾಡುವಾಗ ರೈಲ್ವೆ ಪ್ರಯಾಣಿಕರು ಕೆಲವು ಸವಾಲುಗಳು ಮತ್ತು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿರುತ್ತಾರೆ. ಅಂತಹ ಸಮಸ್ಯೆಗಳನ್ನು ಕಣ್ಣಾರೆ ತಿಳಿದುಕೊಳ್ಳುವ ಸಲುವಾಗಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ಆಯೋಜಿಸಿತ್ತು. ರೈಲಿನ ವಿವಿಧ ಬೋಗಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಅಗ್ನಿಶಾಮಕ ಉಪಕರಣಗಳ ಲಭ್ಯತೆ, ಅವುಗಳ ಕಾರ್ಯಕ್ಷಮತೆ ಪರಿಶೀಲಿಸಿತು. ಅಗ್ನಿ ಅನಾಹುತಗಳಂತಹ ತುರ್ತು ವೇಳೆ ಯಶಸ್ವಿಯಾಗಿ ಎದುರಿಸಲು ಕೈಗೊಳ್ಳಲಾಗಿರುವ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವೀಕ್ಷಿಸಿದರು.
ಪ್ರಯಾಣಿಕ ಸಂಬಂಧಿ ಸೌಲಭ್ಯಗಳ ಪರಿಶೀಲನೆ
ಬೋಗಿಗಳಲ್ಲಿ ಪ್ರಯಾಣಿಕರು ಬಳಸುವ ಶೌಚಾಲಯಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಲಭ್ಯತೆ, ವಿದ್ಯುತ್ ದೀಪಗಳು, ಫ್ಯಾನ್ಗಳ ಕಾರ್ಯ ನಿರ್ವಹಣೆ, ವಿದ್ಯುತ್ ಸರಬರಾಜು, ಸ್ವಚ್ಛತೆ ಕುರಿತು ಕೂಲಂಕಷವಾಗಿ ತಪಾಸಣೆ ನಡೆಸಿದರು. ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ಅಡ್ಡಿಯಾಗುವ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ಅವುಗಳನ್ನು ತಕ್ಷಣವೇ ಪರಿಹರಿಸುವಂತೆ ಡಿಆರ್ಎಂ ಅವರು ಸ್ಥಳದಲ್ಲಿದ್ದ ರೈಲ್ವೆ ತಾಂತ್ರಿಕ ಮತ್ತು ಸೇವಾ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿದರು.
ತಪಾಸಣೆಯಿಂದ ರೈಲು ಸಿಬ್ಬಂದಿಗೆ ಜಾಗೃತಿ
ರೈಲ್ವೆ ಅಧಿಕಾರಿಗಳ ತಪಾಸಣೆಯಿಂದಾಗಿ ನಿತ್ಯ ರೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅವರ ಕಾರ್ಯನಿರ್ವಹಣೆ ಕುರಿತು ಜಾಗೃತಿ ಮೂಡಿಸಿದಂತಾಗಿದೆ. ನಿರ್ಲಕ್ಷ್ಯ ವಹಿಸದೇ ಸುಸೂತ್ರ ಕರ್ತವ್ಯ ಪಾಲನೆ ಮಾಡುವಂತೆ ಸೂಚಿಸಿದಂತಾಗಿದೆ. ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ರೈಲ್ವೆ ಸಿಬ್ಬಂದಿಯ ಮೂಲಭೂತ ಕರ್ತವ್ಯವಾಗಿದೆ ಎಂದು ಮುದಿತ್ ಮಿತ್ತಲ್ ಅವರು ಸ್ಪಷ್ಟಪಡಿಸಿದರು. ಪ್ರಯಾಣಿಕರಿಗೆ ಅತ್ಯುನ್ನತ ಗುಣಮಟ್ಟದ ಸೇವೆ ಹಾಗೂ ಭದ್ರತೆಯನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.
ಮೈಸೂರು ರೈಲ್ವೆ ವಿಭಾಗ ಅಧಿಕಾರಿಗಳ ಪ್ರಕಾರ, ಇಂಥಹ ಪ್ರಾಯೋಗಿಕ ಮತ್ತು ಮಹತ್ವದ ಉಪಕ್ರಮಗಳು ಪ್ರಯಾಣಿಕರ ಒಟ್ಟಾರೆ ರೈಲು ಪ್ರಯಾಣದ ಅನುಭವವನ್ನು ಮತ್ತಷ್ಟು ಸುರಕ್ಷಿತಗೊಳಿಸಲು, ಸುಗಮಗೊಳಿಸಲು ಸಹಾಯ ಮಾಡುತ್ತದೆ. ಇಲಾಖೆಯು ಕೇವಲ ನಿಯಮಗಳ ತಪಾಸಣೆಗಷ್ಟೇ ಸೀಮಿತವಾಗದೆ, ಪ್ರಯಾಣಿಕರ ನಂಬಿಕೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮುಂದಿನ ದಿನಗಳಲ್ಲೂ ಇಂತಹ ಆಕಸ್ಮಿಕ ತಪಾಸಣೆಗಳನ್ನು ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













Click it and Unblock the Notifications