2 ಹೆಂಡ್ತಿಯರ RSS ಕಾರ್ಯಕರ್ತನಿಗೆ ಅಂತ್ಯ ಸಂಸ್ಕಾರ ಮಾಡಿದ ಮುಸ್ಲಿಂ ಲೀಗ್ ನಾಯಕಿ, ಧರ್ಮಕ್ಕಿಂತ ಮಾನವೀಯತೆ ದೊಡ್ಡದು
ಮನುಷ್ಯತ್ವಕ್ಕೆ ಯಾವುದೇ ಧರ್ಮ, ಜಾತಿಯ ಹಂಗಿಲ್ಲ ಎಂಬುದನ್ನು ಕೇರಳದ ಕಾಸರಗೋಡಿನ ಘಟನೆಯೊಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದು, ನೋಡಿಕೊಳ್ಳಲು ಯಾರು ಇಲ್ಲದೆ ಅನಾಥರಾಗಿ ಮೃತಪಟ್ಟ 64 ವರ್ಷದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಮಹಿಳೆಯೊಬ್ಬರು ಮುಂದೆ ನಿಂತು ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬ್ಲಾಕ್ನ ಮೀಂಜಾ ಪಂಚಾಯತ್ನ ಚಿಗ್ರುಪದವು ಗ್ರಾಮದ ನಿವಾಸಿ ನಾರಾಯಣನ್ ತೋಟತ್ತೋಡಿ (64) ಮೃತಪಟ್ಟ ದುರ್ದೈವಿ. ಮಂಜೇಶ್ವರ ವಿಭಾಗದ ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿರುವ ಪರ್ಧಾ ಧಾರಿಣಿ ಇರ್ಫಾನ್ ಇಕ್ಬಾಲ್ ಅವರು ನಾರಾಯಣನ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಇಬ್ಬರು ಹೆಂಡತಿಯರಿದ್ರೂ ಅನಾಥವಾಗಿದ್ದ ಮಾಜಿ ಆರ್ಎಸ್ಎಸ್ ಕಾರ್ಯಕರ್ತ
ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ನಾರಾಯಣನ್ ಅವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಸುಮಾರು ಎರಡು ದಶಕಗಳ ಹಿಂದೆ ಸಕ್ರಿಯ ಆರ್ಎಸ್ಎಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಆದರೆ, ಕೌಟುಂಬಿಕ ಸಮಸ್ಯೆಯಿಂದಾಗಿ ಅವರ ಬದುಕು ಬೀದಿಗೆ ಬಂದಿತ್ತು. ಅವರು ಎರಡು ಬಾರಿ ವಿವಾಹವಾಗಿದ್ದರೂ, ಮೊದಲನೇ ಹೆಂಡತಿಯ ಮಕ್ಕಳು ಅವರ ಸಂಪರ್ಕದಲ್ಲಿ ಇರಲಿಲ್ಲ. ಅವರಿಗೆ ಒಬ್ಬರು ವಯಸ್ಸಾದ ಸಹೋದರಿ ಇದ್ದರೂ, ಆಕೆಗೆ ನಾರಾಯಣನ್ ಅವರನ್ನು ನೋಡಿಕೊಳ್ಳುವ ಆರ್ಥಿಕ ಹಾಗೂ ದೈಹಿಕ ಶಕ್ತಿ ಇರಲಿಲ್ಲ. ಹೀಗಾಗಿ, ಸುಮಾರು ಒಂದು ತಿಂಗಳ ಹಿಂದೆ ಚಿಗ್ರುಪದವಿನ ಅಂಗಡಿಯೊಂದರ ಬಳಿ ಅವರು ಅನಾಥವಾಗಿ, ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತೀವ್ರ ಸ್ವರೂಪದ ಬಾಯಿಯ ಕ್ಯಾನ್ಸರ್ನಿಂದ ನಾರಾಯಣನ್ ಬಳಲುತ್ತಿದ್ದರು. ಅವರ ಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿತ್ತು. ಈ ವೇಳೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಒಂದು ತಿಂಗಳ ಕಾಲ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ (ಜೂನ್ 25) ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಮಧ್ಯಾಹ್ನ ಅವರ ಹುಟ್ಟೂರಾದ ಚಿಗ್ರುಪದವಿನಲ್ಲಿಯೇ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
ನೆರವಿಗೆ ಬಂದ ಯೂನಿಯನ್ ಮುಸ್ಲಿಂ ಲೀಗ್ನ ನಾಯಕಿ ಇರ್ಫಾನಾ ಇಕ್ಬಾಲ್
ನಾರಾಯಣನ್ ಅವರ ದಯನೀಯ ಸ್ಥಿತಿಯ ಬಗ್ಗೆ ಸ್ಥಳೀಯ ವಾರ್ಡ್ ಸದಸ್ಯ ಶರೀಫ್ ಚಿನಾಲಾ ಅವರು ಇರ್ಫಾನಾ ಇಕ್ಬಾಲ್ ಅವರಿಗೆ ಮೊದಲು ಮಾಹಿತಿ ನೀಡಿದ್ದರು. ಇರ್ಫಾನಾ ಅವರ ಕುಟುಂಬವು 'ಶೇಖ್ ಜಾಯೆದ್ ಫೌಂಡೇಶನ್' ಅನ್ನು ನಡೆಸುತ್ತಿದ್ದು, ಇದರ ಅಡಿಯಲ್ಲಿ ಶೇಖ್ ಜಾಯೆದ್ ವೃದ್ಧಾಶ್ರಮವು ಕಾರ್ಯನಿರ್ವಹಿಸುತ್ತಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಮಹಿಳಾ ಘಟಕವಾದ ವನಿತಾ ಲೀಗ್ನ ನಾಯಕಿಯೂ ಆಗಿರುವ ಇರ್ಫಾನಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ನಾರಾಯಣನ್ ಅವರನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಆಶ್ರಮಕ್ಕೆ ದಾಖಲಿಸಲು ನಮಗೆ ಕರೆ ಮಾಡಿದ್ದರು. ಆದರೆ, ಅವರಿಗೆ ಬಾಯಿಯ ಕ್ಯಾನ್ಸರ್ ಇದ್ದಿದ್ದರಿಂದ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು," ಎಂದು ಅವರು ವಿವರಿಸಿದ್ದಾರೆ.
ನಾರಾಯಣನ್ ಅವರ ನಿಧನದ ಬಳಿಕ ಅವರ ಮೃತದೇಹವನ್ನು ಪಡೆಯಲು ಅವರು ಕೆಲಸ ಮಾಡಿದ ಬಿಜೆಪಿ ಪಕ್ಷದವರಾಗಲಿ, ಕುಟುಂಬದ ಸದಸ್ಯರಾಗಲಿ ಯಾರೂ ಮುಂದೆ ಬಾರದಿದ್ದಾಗ, ಯಾವುದೇ ಹಿಂಜರಿಕೆ ಇಲ್ಲದೆ ಪರ್ಧಾ ಧಾರಿಣಿ ಇರ್ಫಾನ ಸ್ವತಃ ತನ್ನ ಕೈಗಳಿಂದಲೇ ನಾರಾಯಣನ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು. ಧರ್ಮದ ಗಡಿಗಳನ್ನು ಮೀರಿ, ಅನಾಥ ಶವಕ್ಕೆ ಗೌರವಯುತವಾಗಿ ಅಂತಿಮ ವಿದಾಯ ಹೇಳುವ ಮೂಲಕ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.














Click it and Unblock the Notifications