ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ
Suryakumar Yadav: ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾವು ಟಿ20 ವಿಶ್ವಕಪ್ 2026 ಟ್ರೋಫಿಗೆ ಮುತ್ತಿಟ್ಟಿತು. ಇದರ ಬೆನ್ನಲ್ಲೇ ಇದೀಗ ಟೂರ್ನಿಗೂ ಮುನ್ನ ಹಾಗೂ ಪಂದ್ಯಾವಳಿಯ ನಿರ್ಣಾಯಕ ಹಂತಗಳಲ್ಲಿ ಸೂರ್ಯಕುಮಾರ್ ಅವರು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವಕಪ್ ಟೂರ್ನಿಗೆ ತೆರಳುವ ಮುನ್ನವೇ ಸೂರ್ಯಕುಮಾರ್ ಯಾದವ್ ಅವರು ತಮ್ಮ ಗುರುಗಳಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅಲ್ಲದೆ, ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಯಶಸ್ಸಿಗಾಗಿ ಅವರು ಮುಂಬೈನ ಪೇಜಾವರ ಮಠಕ್ಕೆ ಖುದ್ದಾಗಿ ಭೇಟಿ ನೀಡಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದ್ದರು. ಇಂದು ತಂಡವು ವಿಶ್ವಕಪ್ ಗೆದ್ದಿರುವುದು ಅವರ ಪ್ರಯತ್ನ ಮತ್ತು ದೈವಿಕ ನಂಬಿಕೆಯ ಫಲ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರಾವಳಿಯೊಂದಿಗೆ ಸೂರ್ಯನ ನಂಟು
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು. ಈ ಕಾರಣದಿಂದಲೇ ಸೂರ್ಯಕುಮಾರ್ ಅವರಿಗೆ ಕರಾವಳಿಯ ದೈವ-ದೇವಸ್ಥಾನಗಳ ಮೇಲೆ ಅಪಾರ ಗೌರವ ಇದೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಅವರು ಪತ್ನಿಯೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ಈ ಭಕ್ತಿ ಮಾರ್ಗ ಮತ್ತು ಕರಾವಳಿಯೊಂದಿಗಿನ ಅವರ ಬಾಂಧವ್ಯ ಈಗ ಅಭಿಮಾನಿಗಳಲ್ಲಿ ಅಚ್ಚುಮೆಚ್ಚಿನ ವಿಷಯವಾಗಿದೆ.
ಸೂರ್ಯ ನಾಯಕತ್ವದಲ್ಲಿ ಟ್ರೋಫಿ ಎತ್ತಿಹಿಡಿದ ಭಾರತ
ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಭಾರತ ತಂಡವು 2026ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ನಾಯಕತ್ವದ ಹಾದಿ ಸೂರ್ಯಕುಮಾರ್ಗೆ ಸುಲಭವಾಗಿರಲಿಲ್ಲ. ವೈಯಕ್ತಿಕವಾಗಿ ಬ್ಯಾಟಿಂಗ್ನಲ್ಲಿ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದರೂ, ಮೈದಾನದಲ್ಲಿ ಅವರು ತೋರಿದ ಶಾಂತಿಯುತ ಮತ್ತು ಚಾಣಾಕ್ಷ ನಾಯಕತ್ವ ಎಲ್ಲರ ಗಮನ ಸೆಳೆಯಿತು.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸೂರ್ಯಕುಮಾರ್, ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೆಚ್ಚಿನ ಸ್ವಾತಂತ್ರ್ಯ ನೀಡಿದರು. ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಟ್ಟ ಸಂದರ್ಭದಲ್ಲಿನ ವಿವಾದದ ಬಗ್ಗೆ ಮುಕ್ತವಾಗಿ ಮಾತನಾಡಿ ತಂಡದ ಒಗ್ಗಟ್ಟನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಭರ್ಜರಿ ಜಯ ಸಾಧಿಸಿತು. ಸಂಜು ಸ್ಯಾಮ್ಸನ್ ಅವರ ಸ್ಪೋಟಕ ಬ್ಯಾಟಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ತಂಡದ ಗೆಲುವಿಗೆ ಪ್ರಮುಖ ಕಾರಣವಾದರೆ, ಸೂರ್ಯಕುಮಾರ್ ಅವರ ನಿರ್ವಹಣೆ ಪ್ರಶಂಸನೀಯವಾಗಿತ್ತು. ಟೀಂ ಇಂಡಿಯಾ ಸತತ ಎರಡನೇ ಬಾರಿ ವಿಶ್ವಕಪ್ ಗೆದ್ದ ದಾಖಲೆ ಮಾಡಿತು. ಅದರಲ್ಲೂ, ಈ ಬಾರಿ ತವರು ನೆಲದಲ್ಲಿ ಟ್ರೋಫಿ ಎತ್ತಿ ಹಿಡಿದ ಮೊದಲ ತಂಡದ ನಾಯಕ ಎಂಬ ಕೀರ್ತಿಗೆ ಪಾತ್ರರಾದರು. ಟೂರ್ನಿ ಮುಗಿದ ಬೆನ್ನಲ್ಲೇ ತಮ್ಮ ಮುಂದಿನ ಗುರಿ 2028ರ ಒಲಿಂಪಿಕ್ಸ್ ಎಂದು ಸೂರ್ಯಕುಮಾರ್ ಘೋಷಿಸಿ ಗಮನ ಸೆಳೆದಿದ್ದಾರೆ.












Click it and Unblock the Notifications