ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?
ಸಂಗೀತ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗದಗ, ಕರುನಾಡಿಗೆ ಹಲವು ಮಹನೀಯರನ್ನು ನೀಡಿದೆ.
ಕರ್ನಾಟ ಭಾರತ ಕಥಾಮಂಜರಿ ಕೃತಿಯ ಕವಿ ಕುಮಾರವ್ಯಾಸ ಗದಗದವನು. ಗದುಗಿನ ನಾರಣಪ್ಪ ಎಂಬುದೇ ಅವರ ಹೆಸರಾಗಿತ್ತು. ಗಾನಯೋಗಿ ಪಂಚಾಕ್ಷರಿ ಗವಾಯಿ ಗದಗಕ್ಕೆ ಸೇರಿದವರು.
ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?
ಗದಗಕ್ಕೆ ಒಂದು ಕಲ್ಲು ಹೊಡೆದರೆ, ಅದು ಒಂದೋ ಪ್ರಿಂಟಿಂಗ್ ಪ್ರೆಸ್ಸಿಗೆ ಹೋಗಿ ಬೀಳುತ್ತದೆ, ಇಲ್ಲವೇ ಕೈಮಗ್ಗದ ಕಾರ್ಖಾನೆಗೆ ಹೋಗಿ ಬೀಳುತ್ತದೆ ಎಂಬ ಮಾತು ಒಂದು ಕಾಲದಲ್ಲಿ ಜನಜನಿತವಾಗಿತ್ತು. ಅಷ್ಟರಮಟ್ಟಿಗೆ ಗದಗದ ತುಂಬ ಹಲವಾರು ಪ್ರಿಂಟಿಂಗ್ ಪ್ರೆಸ್ ಗಳು, ಕೈಮಗ್ಗದ ಕಾರ್ಖಾನೆಗಳಿದ್ದವು.
ಹಿಂದೂಸ್ತಾನಿ ಗಾಯಕ, ಭಾರತ ರತ್ನ ಪಂ.ಭೀಮಸೇನ ಜೋಶಿ ಅವರ ಮೂಲ ಊರೂ ಗದಗ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಖ್ಯಾತಿಯ ಹುಯಿಲಗೋಳ ನಾರಾಯಣ ರಾಯರು ಗದುಗಿನವರು. ಭಾರತ ಕಂಡ ಹೆಮ್ಮೆಯ ಕ್ರಿಕೆಟ್ ಪಟು ಸುನಿಲ್ ಜೋಶಿ ಸಹ ಇಲ್ಲಿನವರೇ.
ಇಷ್ಟೆಲ್ಲ ಮಹನೀಯರ ನೆಲೆಯಾದ ಗದಗದಲ್ಲಿ 11 ಮತ್ತು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾದ ಹಲವು ಐತಿಹಾಸಿಕ ಕಟ್ಟಡಗಳು, ಸ್ಮಾರಕಗಳು ಇವೆ. ಇಲ್ಲಿನ ವೀರ ನಾರಾಯಣ ಮತ್ತು ತ್ರಿಕೂಟೇಶ್ವರ ದೇವಾಯ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.
ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿಗಳು ಇಲ್ಲಿನ ಪ್ರಮುಖ ಬೆಳೆಗಳು. ಮಲಪ್ರಭಾ ಮತ್ತು ತುಂಗಭದ್ರಾ ನದಿಗಳು ಇಲ್ಲಿನ ಜನರ ನೀರಿನ ಸಮಸ್ಯೆ ನೀಗಿಸಿವೆ.
ಕಳೆದ ನಾಲ್ಕು ವರ್ಷಗಳಲ್ಲಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ರಾಜ್ಯದ ಇತರೆ ಕ್ಷೇತ್ರಗಳಿಗೆ ಮಾದರಿ. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶವೊಂದರ ಅಭಿವೃದ್ಧಿ ಹೀಗೆ ಆಗಬೇಕೆಂಬ ಹೊಸ ಭಾಷ್ಯ ಬರೆದವರೆಂದರೆ ಎಚ್.ಕೆ.ಪಾಟೀಲ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್.ಕೆ.ಪಾಟೀಲರು ತಮ್ಮ ಪ್ರತಿಸ್ಪರ್ಧಿ ಬಿಎಸ್ ಆರ್ ಕಾಂಗ್ರೆಸ್ ನ ಅನಿಲ್ ಮೆಣಸಿನಕಾಯಿ(36748 ಮತಗಳು) ವಿರುದ್ಧ 70475 ಮತಗಳನ್ನು ಪಡೆದು ಬಾರಿ ಅಂತರದಿಂದ ಗೆದ್ದಿದ್ದರು. ಈಗಾಗಲೇ ಈ ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆ.