"ಪ್ರತಿಭಟನೆ ಸಾಂವಿಧಾನಿಕ ಹಕ್ಕು ಹೌದು, ಆದರೆ... "
ನವದೆಹಲಿ, ಡಿಸೆಂಬರ್ 17: ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿ ಗಡಿ ಪ್ರದೇಶದಲ್ಲಿ ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಗಡಿಯಿಂದ ರೈತರನ್ನು ತೆರವುಗೊಳಿಸುವಂತೆ ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿಗಳು ಬಂದಿದ್ದು, ಬುಧವಾರ ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಗುರುವಾರ ವಿಚಾರಣೆಯನ್ನು ಮುಂದುವರೆಸಿದ ಸಿಜೆಐ ಎಸ್.ಎ.ಬೊಬ್ಡೆ, "ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವ ರೈತರು ನಗರವನ್ನು ನಿರ್ಬಂಧಿಸುವುದು ಸರಿಯಲ್ಲ" ಎಂದಿದ್ದಾರೆ.
ರಾಜಧಾನಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆಯಿಂದ ಅನನುಕೂಲತೆ ಉಂಟಾಗಿದ್ದು, ಕೊರೊನಾ ಸೋಂಕು ಹರಡುವ ಸಾಧ್ಯತೆಯೂ ವ್ಯಾಪಕವಾಗಿದೆ. ಈ ನೆಲೆಯಲ್ಲಿ ರೈತರನ್ನು ಗಡಿಗಳಿಂದ ತೆರವುಗೊಳಿಸಬೇಕು ಎಂದು ಮನವಿ ಮಾಡಿ ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿ ಕೈಗೆತ್ತಿಕೊಂಡ ಅವರು, "ರೈತರು ಈ ರೀತಿ ಗಡಿಗಳಲ್ಲಿ ಕುಳಿತು ನಗರವನ್ನು ನಿರ್ಬಂಧಿಸಬಾರದು" ಎಂದಿದ್ದಾರೆ.

"ಎಲ್ಲಿಯವರೆಗೂ ಜೀವ ಹಾಗೂ ಆಸ್ತಿ ಪಾಸ್ತಿಗೆ ಹಾನಿಯಾಗದೇ ಇರುವುದೋ ಅಲ್ಲಿಯವರೆಗೂ ಪ್ರತಿಭಟನೆ ಸಾಂವಿಧಾನಿಕ ಎನಿಸಿಕೊಳ್ಳುತ್ತದೆ. ಆದರೆ ಕೇಂದ್ರ ಹಾಗೂ ರೈತರು ಕುಳಿತು ಚರ್ಚೆ ಮಾಡಬೇಕು. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡೂ ಕಡೆಯವರು ತಮ್ಮ ತಮ್ಮ ನೆಲೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪಕ್ಷಪಾತವಲ್ಲದ ಹಾಗೂ ಸ್ವತಂತ್ರ ಸಮಿತಿ ರಚನೆ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ" ಎಂದು ಬೊಬ್ಡೆ ತಿಳಿಸಿದ್ದಾರೆ.
ಈ ಸಮಿತಿ ಪಿ ಸಾಯಿನಾಥ್, ಭಾರತೀಯ ಕಿಸಾನ್ ಯೂನಿಯನ್ ಹಾಗೂ ಇನ್ನಿತರ ಸದಸ್ಯರನ್ನು ಒಳಗೊಳ್ಳಲಿದೆ. ರೈತರು ಹಿಂಸಾಚಾರವನ್ನು ಪ್ರಚೋದಿಸುವಂತಿಲ್ಲ. ನಗರವನ್ನು ನಿರ್ಬಂಧಿಸುವಂತಿಲ್ಲ. ಪ್ರತಿಭಟನೆ ವೇಳೆ ಏನನ್ನು ಅನುಸರಿಸಬೇಕು ಎಂಬುದನ್ನು ಸಮಿತಿ ತಿಳಿಸುತ್ತದೆ" ಎಂದು ಹೇಳಿದ್ದಾರೆ.
ಈ ಸಂದರ್ಭ ಮಾತನಾಡಿದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, "ರೈತರು ಕೋವಿಡ್ 19 ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ರೈತರಲ್ಲಿ ಯಾರೊಬ್ಬರೂ ಮಾಸ್ಕ್ ಧರಿಸಿಲ್ಲ. ಒಟ್ಟೊಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತುಕೊಂಡಿದ್ದಾರೆ. ಇಲ್ಲಿಂದ ಹಿಂದಿರುಗುವ ಅವರು ತಮ್ಮ ಗ್ರಾಮಗಳಲ್ಲಿ ಕೊರೊನಾ ಸೋಂಕು ಹರಡುವಿಕೆಗೆ ಕಾರಣವಾಗಬಹುದು. ಮತ್ತೊಬ್ಬರ ಮೂಲಭೂತ ಹಕ್ಕುಗಳನ್ನು ರೈತರು ಉಲ್ಲಂಘಿಸುವಂತಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಮಯ, ಈ ವಿವಾದಿತ ಕೃಷಿ ಕಾಯ್ದೆಗಳನ್ನು ಸದ್ಯಕ್ಕೆ ತಡೆಹಿಡಿಯುವ ವಿಷಯವನ್ನು ಪರಿಗಣಿಸುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿದೆ. ವಿಚಾರಣೆ ಸಂದರ್ಭ ರೈತ ಸಂಘ ಗೈರುಹಾಜರಾದ ಕಾರಣ ವಿಚಾರಣೆಯನ್ನು ರಜಾಕಾಲದ ಪೀಠವು ಮತ್ತೆ ಕೈಗೊಳ್ಳಲಿದೆ. ಸದ್ಯಕ್ಕೆ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದಿದೆ.












Click it and Unblock the Notifications