ನವರಾತ್ರಿ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ
ಉಡುಪಿ, ಅಕ್ಟೋಬರ್ 4: ಉಡುಪಿಯ ಶ್ರೀ ಕೃಷ್ಣನನ್ನು ಉತ್ಸವಪ್ರಿಯ ಎಂದು ಕರೆಯುತ್ತಾರೆ. ಆದರೆ ಕೃಷ್ಣ ಅಲಂಕಾರ ಪ್ರಿಯನೂ ಹೌದು. ಆದ್ದರಿಂದ ಈ ನವರಾತ್ರಿ ಸಂದರ್ಭ ಪರ್ಯಾಯ ಶ್ರೀಗಳು ಒಂಬತ್ತೂ ದಿನ ಕೃಷ್ಣನಿಗೆ ಬಗೆಬಗೆಯ ಸ್ತ್ರೀ ಅಲಂಕಾರ ಮಾಡುವ ಸಂಕಲ್ಪ ಮಾಡಿದ್ದಾರೆ.
ಸಾಮಾನ್ಯವಾಗಿ ಕೃಷ್ಣ ಎಂದ ತಕ್ಷಣ ಎಲ್ಲರ ಕಣ್ಮುಂದೆ ಸುಳಿಯುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣನದ್ದು. ಆದರೆ ಶ್ರೀ ಕೃಷ್ಣ ಈಗ ನಿತ್ಯ ಒಂದೊಂದು ಅವತಾರ ಎತ್ತುತ್ತಿದ್ದಾನೆ. ಪರ್ಯಾಯ ಶ್ರೀಗಳು ಕೃಷ್ಣನಿಗೆ ನಿತ್ಯ ಒಂದೊಂದು ಅಲಂಕಾರ ಮಾಡಿ ಪೂಜಿಸುತ್ತಿದ್ದಾರೆ. ಪರ್ಯಾಯ ಮಠಾಧೀಶರು ಬದಲಾದಂತೆಯೇ ಕೃಷ್ಣನ ಅಲಂಕಾರಗಳೂ ಬದಲಾಗುತ್ತಾ ಸಾಗಿವೆ.
ಉಡುಪಿಯ ಕೃಷ್ಣನ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?
ಈ ಬಾರಿ ಕೃಷ್ಣ ಪೂಜಾ ಕೈಂಕರ್ಯ ಮಾಡುತ್ತಿರುವವರು ಪರ್ಯಾಯ ಪಲಿಮಾರು ಶ್ರೀಗಳು. ನವರಾತ್ರಿ ಶುರುವಾಗಿ ಇವತ್ತಿಗೆ ಐದನೇ ದಿನ. ಅದರಂತೆ ಪ್ರತಿನಿತ್ಯ ಕೃಷ್ಣನಿಗೆ ದೇವಿ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಒಂಬತ್ತು ದಿನ ಒಂಬತ್ತು ದೇವಿಗಳ ಅಲಂಕಾರ ಮಾಡಿ ಕೃಷ್ಣನನ್ನು ಖುಷಿಪಡಿಸಲಾಗುತ್ತಿದೆ. ತೊಟ್ಟಿಲಲ್ಲಿ ತೂಗುವ ಯಶೋಧೆ, ಅಂತಃಪುರದಲ್ಲಿರುವ ರುಕ್ಮಿಣಿ, ಮಹಿಷಾಸುರ ಮರ್ದಿನಿ, ವೀಣಾಪಾಣಿ ಶಾರದೆ, ಲಕ್ಷ್ಮೀ ರೂಪ ಸಹಿತ ಒಂಬತ್ತು ದೇವಿಯರ ಅಲಂಕಾರದಲ್ಲಿ ಕೃಷ್ಣ ರಾರಾಜಿಸುತ್ತಿದ್ದಾನೆ. ಭಕ್ತರು ಇದನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ಉಡುಪಿ ಶ್ರೀಕೃಷ್ಣನ ವಿಗ್ರಹ ಅಲಂಕರಿಸುವ ತುಳಸಿ ದಳ ಔಷಧಿಗೆ ಬಳಕೆ
ಕಳೆದ ವರ್ಷ ಅಗಲಿದ ಶೀರೂರು ಶ್ರೀಗಳು ಕೃಷ್ಣನಿಗೆ ಮುನ್ನೂರಕ್ಕೂ ಹೆಚ್ಚು ಅಲಂಕಾರಗಳನ್ನು ಮಾಡಿದ್ದರು. ಈ ಬಾರಿಯ ಪರ್ಯಾಯ ಮಠಾಧೀಶರಾದ ಪಲಿಮಾರು ಶ್ರೀಗಳೂ ಕೃಷ್ಣನಿಗೆ ವೈವಿಧ್ಯಮಯ ಅಲಂಕಾರಗಳ ಮೂಲಕ ಕೃಷ್ಣನನ್ನು ಸಂತುಷ್ಟಗೊಳಿಸುತ್ತಿದ್ದಾರೆ.