ಉಡುಪಿ ಶ್ರೀಕೃಷ್ಣನ ವಿಗ್ರಹ ಅಲಂಕರಿಸುವ ತುಳಸಿ ದಳ ಔಷಧಿಗೆ ಬಳಕೆ
ಉಡುಪಿ, ಜುಲೈ 17: ಹಿಂದೂ ಧರ್ಮದಲ್ಲಿ ಒಳಗೊಳ್ಳುವ ವಿವಿಧ ಸಮುದಾಯದವರ ಪ್ರತಿಯೊಂದು ಪೂಜೆ- ಪುನಸ್ಕಾರಗಳಲ್ಲಿ ಶುದ್ಧತೆ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಸಮಸ್ಯೆಗಳು ನಿರ್ಮೂಲನೆಯಾಗುತ್ತದೆ. ನೆಮ್ಮದಿ ಸಿಗುತ್ತದೆ. ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ.
ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ. ಅಂದಹಾಗೆ, ಉಡುಪಿ ಶ್ರೀಕೃಷ್ಣನಿಗೆ ನಿತ್ಯವೂ ಅರ್ಪಿಸಲು ಲಕ್ಷ ತುಳಸಿ ಅರ್ಚನೆ ನಡೆಯುತ್ತದೆ. ಉಡುಪಿ ಕೃಷ್ಣನಿಗೆ ಅರ್ಚಿಸಿದ ಲಕ್ಷ ತುಳಸಿ ಈಗ ಜನರ ಆರೋಗ್ಯಕ್ಕೆ ಔಷಧಿಯಾಗಿ ಪರಿವರ್ತನೆಗೊಳ್ಳುತ್ತಿದೆ.
ಪರ್ಯಾಯ ಪಲಿಮಾರು ಶ್ರೀಗಳ ಲಕ್ಷ ತುಳಸಿ ಅರ್ಚನೆಯ ಸಂಕಲ್ಪದ ತುಳಸಿ ದಳಗಳು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ಮನೋ ಸಂಕಲ್ಪದಂತೆ ಔಷಧಕ್ಕೆ ಬಳಕೆಯಾಗುತ್ತಿದೆ.

ಪಲಿಮಾರು ವಿದ್ಯಾಧೀಶ ತೀರ್ಥರಿಂದ ತುಳಸಿ ಅರ್ಚನೆಯ ಸಂಕಲ್ಪ
ಉಡುಪಿಯ ಶ್ರೀ ಕೃಷ್ಣನಿಗೆ ಬಗೆ ಬಗೆ ಅಲಂಕಾರ, ನಾನಾ ಬಗೆ ಸೇವೆಗಳು ಸರ್ವೇ ಸಾಮಾನ್ಯ. ಪ್ರತಿ ಪರ್ಯಾಯ ಮಠಾಧೀಶರೂ ತಮ್ಮ ಇಷ್ಟದೇವರು ಕೃಷ್ಣನಿಗೆ ವಿಶೇಷ ಸೇವೆಯನ್ನು ಪರ್ಯಾಯ ಸಂದರ್ಭದಲ್ಲಿ ಕೈಗೊಳ್ಳುವುದು ನಡೆದು ಬಂದ ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಪರ್ಯಾಯ ಪೀಠಾಧೀಶರಾಗಿರುವ ಪಲಿಮಾರು ವಿದ್ಯಾಧೀಶ ಶ್ರೀ ಪಾದರು ಕೃಷ್ಣನಿಗೆ ಪ್ರತಿ ನಿತ್ಯ ತುಳಸಿ ಅರ್ಚನೆಯ ಸಂಕಲ್ಪ ಕೈಗೊಂಡಿದ್ದರು.

ತುಳಸಿ ದಳಗಳಿಂದ ಔಷಧ ತಯಾರಿ
ಅದರಂತೆ ನಿತ್ಯವೂ ಕಡೆಗೋಲು ಕೃಷ್ಣನಿಗೆ ಕೋಟಿ ಕೋಟಿ ತುಳಸಿದಳ ಅರ್ಚನೆಯು ನಡೆಯುತ್ತದೆ. ನೂರಾರು ಭಕ್ತರು ಕೂಡ ತುಳಸಿದಳಗಳನ್ನು ಅರ್ಚನೆಗಾಗಿ ಸಲ್ಲಿಸುತ್ತಾರೆ. ಮಠದ ವತಿಯಿಂದ ತುಳಸಿ ತೋಟವನ್ನು ನಿರ್ಮಿಸಲಾಗಿದೆ. ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ನಿತ್ಯ ಶ್ರೀ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯಾಗುತ್ತದೆ. ಹೀಗೆ ಶ್ರೀಕೃಷ್ಣನಿಗೆ ಅರ್ಚನೆಯಾಗುವ ತುಳಸಿದಳಗಳು ವ್ಯರ್ಥ ಆಗಬಾರದು ಎನ್ನುವ ಚಿಂತನೆಯೊಂದಿಗೆ ರಾಶಿ ರಾಶಿ ತುಳಸಿ ದಳಗಳನ್ನು ಔಷಧ ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ.

ಉದ್ಯಾವರದ ಆಯುರ್ವೇದಿಕ್ ಕಾಲೇಜಿನಲ್ಲಿ ಬಳಕೆ
ಪಲಿಮಾರು ಶ್ರೀಗಳ ಆಶಯದಂತೆ ಪಡುವಿಗೊಡೆಯ ಕೃಷ್ಣನ ವಿಗ್ರಹಕ್ಕೆ ಅರ್ಪಣೆಗೊಂಡ ರಾಶಿ ರಾಶಿ ತುಳಸಿದಳಗಳು ಪ್ರತಿನಿತ್ಯ ಸಂಗ್ರಹಗೊಳ್ಳುತ್ತದೆ. ಕೃಷ್ಣ ಅರ್ಚನೆಗೆ ಬಳಕೆಯಾದ ತುಳಸಿಯನ್ನು ಔಷಧಿಯಾಗಿ ಬಳಕೆ ಮಾಡುವುದಕ್ಕಾಗಿಯೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಸಂಕಲ್ಪ ನಡೆಸಿದ್ದಾರೆ. ಉಡುಪಿಯ ಉದ್ಯಾವರ ಎಸ್ ಡಿಎಂ ಅಯರ್ವೇದಿಕ್ ಕಾಲೇಜಿನಲ್ಲಿ ತುಳಸಿಯ ದಳಗಳನ್ನು ಔಷಧ ಗುಳಿಗೆಗಳಾಗಿ ಮಾಡಲಾಗುತ್ತದೆ.

ಶೀತ ಜ್ವರ, ಮಾನಸಿಕ ಒತ್ತಡಕ್ಕೆ ಮದ್ದು
ಕೋಟಿ ರೂಪಾಯಿ ವೆಚ್ಚದಲ್ಲಿ ಯಂತೋಪಕರಣಗಳಿಂದ ತುಳಸಿದಳಗಳನ್ನು ಲ್ಯಾಬ್ ಗಳಲ್ಲಿ ಬೇಯಿಸಿ, ಕುದಿಸಿ, ಬಾಯ್ಲರ್, ಡ್ರೈಯರ್ ಯಂತ್ರಗಳ ಸಹಾಯದಿಂದ ಔಷಧಿಯ ಗುಳಿಗಳನ್ನು ತಯಾರು ಮಾಡಲಾಗುತ್ತಿದೆ. ಈ ಮಾತ್ರೆಯು ಶೀತ ಜ್ವರ, ಮಾನಸಿಕ ಒತ್ತಡ ಸೇರಿದಂತೆ ನಾನಾ ಬಗೆ ಕಾಯಿಲೆಗೆ ಔಷಧಿಯ ರೂಪದಲ್ಲಿ ಜನರ ಕೈ ಸೇರುತ್ತಿದೆ.












Click it and Unblock the Notifications