ಉಡುಪಿಯ ಕೃಷ್ಣನ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?
ಉಡುಪಿ, ಆಗಸ್ಟ್ 12: ಆಗಸ್ಟ್ 23ರಂದು ನಡೆಯಲಿರುವ ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣ ನಗರಿ ಸಜ್ಜುಗೊಳ್ಳುತ್ತಿದೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಟಮಠಗಳಲ್ಲಿ ತಯಾರಿ ಭರದಿಂದ ಸಾಗಿದ್ದು, ಹಬ್ಬದ ಕಳೆ ಬಂದಿದೆ. ಶುಕ್ರವಾರ ಅಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಮತ್ತು ರಾತ್ರಿ ಅಘ್ರ್ಯ ಪ್ರಧಾನ ಇದ್ದರೆ, ಮರುದಿನ ವಿಟ್ಲಪಿಂಡಿ ಉತ್ಸವ ಸಂಪನ್ನಗೊಳ್ಳಲಿದೆ.
ಈ ಪ್ರಯುಕ್ತ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಸಾವಿರಾರು ಚಕ್ಕುಲಿ -ಉಂಡೆಪ್ರಸಾದ ತಯಾರಿಸಲಾಗುತ್ತಿದೆ. ಉಂಡೆ ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತಿದೆ.

ರಂಗೇರಲಿದೆ ಅಷ್ಟಮಿ ಉತ್ಸವ
ಸದಾ ಉತ್ಸವಗಳಿಂದ ಮಿಂದೇಳುವ ಕೃಷ್ಣಮಠಕ್ಕೆ ಈಗ ಉತ್ಸವಗಳ ರಾಜ ಕೃಷ್ಣಜನ್ಮಾಷ್ಠಮಿ ಬಂದಿದೆ. ಪರ್ಯಾಯ ಮಹೋತ್ಸವದ ಬಳಿಕ ಕೃಷ್ಣಮಠಕ್ಕೆ ದೊಡ್ಡ ಹಬ್ಬ ಅಷ್ಟಮಿ. ಈಗಾಗಲೇ ಅಷ್ಟಮಿ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಮತ್ತು ಶನಿವಾರ ಉತ್ಸವ ರಂಗೇರಲಿದೆ. ಅಷ್ಟಮಿ ಪ್ರಯುಕ್ತ ಕೃಷ್ಣಮಠ ಮತ್ತು ರಥಬೀದಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿ
ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿ ತಯಾರಿಸುವ ಕಾರ್ಯ ಕೃಷ್ಣಮಠದಲ್ಲಿ ನಡೆಯುತ್ತಿದೆ. ಸುಮಾರು ಒಂದು ಲಕ್ಷದಷ್ಟು ಚಕ್ಕುಲಿ ಮತ್ತು ಅಷ್ಟೇ ಪ್ರಮಾಣದ ಉಂಡೆ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಕೃಷ್ಣಮಠದಲ್ಲಿ ನುರಿತ ಬಾಣಸಿಗರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಾಯಲ್ಲಿ ನೀರೂರಿಸುವ ಚಕ್ಕುಲಿ ಮತ್ತು ಉಂಡೆ ಪ್ರಸಾದವನ್ನು ಅಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲಾಗುತ್ತದೆ; ಬಳಿಕ ಕೃಷ್ಣಮಠಕ್ಕೆ ಬಂದ ಭಕ್ತಗಣಕ್ಕೆ ವಿತರಿಸಲಾಗುತ್ತದೆ.

30 ವರ್ಷಗಳಿಂದಲೂ ರುಚಿರುಚಿಯಾದ ಪ್ರಸಾದ ತಯಾರಿ
ಉಂಡೆ ಚಕ್ಕುಲಿ ಪ್ರಸಾದ ತಯಾರಿಸುವುದು ಕೃಷ್ಣಜನ್ಮಾಷ್ಟಮಿಯ ಪ್ರಮುಖ ತಯಾರಿಗಳಲ್ಲೊಂದು. ಇದಕ್ಕಾಗಿಯೇ ಮಠದಲ್ಲಿ 50ಕ್ಕೂ ಹೆಚ್ಚು ನುರಿತ ಬಾಣಸಿಗರು ಹಗಲಿರುಳೂ ಶ್ರಮವಹಿಸುತ್ತಿದ್ದಾರೆ. ಉಂಡೆ ಮತ್ತು ಚಕ್ಕುಲಿ ಕೃಷ್ಣನಿಗೂ ಪ್ರಿಯವಾದ ಭಕ್ಷ್ಯವಾದ್ದರಿಂದ ಈ ಕಾರ್ಯವನ್ನು ಅತ್ಯಂತ ಭಕ್ತಿಯಿಂದ ಮಾಡಲಾಗುತ್ತಿದೆ. ಈಗಾಗಲೇ ಮಠದಲ್ಲಿ ಸಾವಿರಾರು ಚಕ್ಕುಲಿಗಳು ಮತ್ತು ಉಂಡೆಗಳು ಸಿದ್ಧಗೊಂಡಿವೆ. ನಾಳೆಯ ತನಕವೂ ಈ ಕಾರ್ಯ ಮುಂದುವರೆಯಲಿದ್ದು; ಕೃಷ್ಣನಿಗೆ ಸಮರ್ಪಿಸಿದ ಬಳಿಕವಷ್ಟೇ ಭಕ್ತರ ಬಾಯಿಗೆ ಲಭ್ಯ. ರುಚಿರುಚಿಯಾದ ಈ ಉಂಡೆ ಚಕ್ಕುಲಿಗಳನ್ನು ಕಳೆದ ಮೂವತ್ತು ವರ್ಷಗಳಿಂದಲೂ ನುರಿತ ಬಾಣಸಿಗರೇ ಸಿದ್ಧಪಡಿಸುತ್ತಿದ್ದಾರೆ.

ಉತ್ಸವಪ್ರಿಯನ ಸಂತುಷ್ಠಿಗೆ ಎಲ್ಲಾ...
ಕೃಷ್ಣಮಠಕ್ಕೆ ಬರುವ ಭಕ್ತರಿಗೆ ಮಾತ್ರವಲ್ಲದೆ ಕೃಷ್ಣಮಠದಿಂದ ಪ್ರತಿನಿತ್ಯ ಅನ್ನಪ್ರಸಾದ ನೀಡಲಾಗುವ ಶಾಲಾ ವಿದ್ಯಾರ್ಥಿಗಳಿಗೂ ಈ ಪ್ರಸಾದ ಸಿಗಲಿದೆ. ಅಂದಾಜು ಈ ಬಾರಿ ಮೂವತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಈ ರುಚಿರುಚಿಯಾದ ಪ್ರಸಾದ ತಿನ್ನುವ ಭಾಗ್ಯ ಸಿಗುತ್ತದೆ. ಒಟ್ಟಾರೆ ಉತ್ಸವಪ್ರಿಯ, ಪೊಡವಿಗೊಡೆಯ, ಕಡೆಗೋಲು ಕೃಷ್ಣನನ್ನು ಜನ್ಮಾಷ್ಟಮಿ ಸಂದರ್ಭ ಸಂತುಷ್ಠಗೊಳಿಸಲು ಎಲ್ಲ ಪ್ರಯತ್ನಗಳೂ ಕೃಷ್ಣಮಠದಲ್ಲಿ ನಡೆದಿದೆ.












Click it and Unblock the Notifications