ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ, ಭಕ್ತರಿಗೆ ಮಹತ್ವದ ಮಾಹಿತಿ
Ashadha Masa: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜುಲೈ 17ರಿಂದ ಆಷಾಢ ಶುಕ್ರವಾರದ ಪೂಜೆ ಆರಂಭ ಆಗಲಿದೆ. ಈ ಹಿನ್ನೆಲೆ ಯಾವುದೇ ಅನಾನುಕೂಲವಾಗಂದಂತೆ ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಸಂಭ್ರಮ ಜೋರಾಗಿದೆ. ವಿವಿಧ ಕಾರ್ಯಕ್ರಮಗಳಿಗೆ ಭಾರಿ ಸಿದ್ಧತೆ ನಡೆದಿದ್ದು, ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಇನ್ನೂ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮೊದಲು ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿದ ಅಲ್ಲಿನ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.

ಆಷಾಢ ಮಾಸಕ್ಕೆ ಸಿದ್ಧತೆ ಹೇಗಿದೆ?
ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಾಡದೇವತೆ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಪೂರ್ವಸಿದ್ಧತಾ ಕಾರ್ಯಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಾಮಾನ್ಯ ಭಕ್ತರ ದರ್ಶನಕ್ಕೆ ಮೊದಲ ಆದ್ಯತೆ
'ಬೆಟ್ಟಕ್ಕೆ ಬರುವ ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಸುಲಭವಾಗಿ ದರ್ಶನ ಕಲ್ಪಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯ ಲೋಪದೋಷಗಳಿಗೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಐಪಿಗಳ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ,' ಎಂದು ಹೇಳಿದರು.
ಸಾರ್ವಜನಿಕರಿಗೆ ಮಹತ್ವದ ಸೂಚನೆ
'ಈಗಾಗಲೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಸಹ ಆಷಾಢ ಮಾಸ ಪೂಜೆ ಸಿದ್ಧತೆ ಪರಿಶೀಲಿಸಿದ್ದಾರೆ. ಜುಲೈ 17, 24, 31 ಆಗಸ್ಟ್ 7ರಂದು ಆಢಾಶ ಶುಕ್ರವಾರ ಮತ್ತು ಆಗಸ್ಟ್ 4ರಂದು ಚಾಮುಂಡೇಶ್ವರಿ ವರ್ಧಂತಿ ಉತ್ಸವ ಇದೆ. 4 ವಾರಗಳ ವಾರಾಂತ್ಯದಂದು ಲಲಿತಮಹಲ್ ಮೈದಾನ ಮತ್ತು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಬಸ್ ಸೌಲಭ್ಯ ಇರಲಿದ್ದು, ರಾತ್ರಿ 8:30ಕ್ಕೆ ಮುಕ್ತಾಯವಾಗಲಿದೆ. ಕಾಲ್ನಡಿಗೆಯಿಂದ ಬರುವವರಿಗೆ ಬೆಳಗ್ಗೆ 5 ಗಂಟೆಯ ನಂತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅದಕ್ಕೂ ಮುನ್ನವೇ ಕಾಯುವುದು ಬೇಡ,' ಎಂದು ತಿಳಿಸಿದರು.
ಭಕ್ತರ ವಿಶೇಷ ದರ್ಶನಕ್ಕೆ ಇದ್ದ 300 ರೂಪಾಯಿ ಟಿಕೆಟ್ ಅನ್ನು ಈ ಬಾರಿ ರದ್ದು ಮಾಡಲಾಗಿದೆ. 2 ಸಾವಿರ ರೂಪಾಯಿ ಟಿಕೆಟ್ ಖರೀದಿ ಮಾಡಿದರೆ ಸರತಿಯಲ್ಲಿ ನಿಲ್ಲದೆ ನೇರವಾಗಿ ದೇವರ ದರ್ಶನ ಪಡೆಯಬಹುದು. ಈ ಟಿಕೆಟ್ ಜೊತೆಗೆ ಚಾಮುಂಡೇಶ್ವರಿ ಫೋಟೊ, ಲಾಡು ಪ್ರಸಾದ ಒಳಗೊಂಡ ವಿಶೇಷ ಕಿಟ್ ಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ವಿಐಪಿ, ವಿವಿಐಪಿಗಳ ದರ್ಶನದ ವಿವರ
'ಬೆಳಗ್ಗೆ ಮುಂಜಾನೆ 5.30ರಿಂದ 9.30ರ ವರೆಗೆ ಮಾತ್ರ ವಿಐಪಿ ಹಾಗೂ ವಿವಿಐಪಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಇದನ್ನ ಹೊರತುಪಡಿಸಿ ಶಿಷ್ಟಾಚಾರದ ನಿಯಮಕ್ಕೆ ಒಳಪಟ್ಟವರು ಇದ್ದರೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಶಿಫಾರಸು ಪತ್ರಗಳನ್ನು ತಂದವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಇಲ್ಲ. ವಿಐಪಿ ಮತ್ತು ವಿವಿಐಪಿಗಳ ವಾಹನಗಳು ಮಹಿಷಾಸುರನ ಪ್ರತಿಮೆ ವೃತ್ತದ ಬಳಿ ಪಾರ್ಕಿಂಗ್ ಮಾಡಬೇಕು. ಕಾಲ್ನಡಿಗೆಯಲ್ಲಿ ಬರುವ ಭಕ್ತಾಧಿಗಳಿಗೆ ಬಾದಾಮಿ ಹಾಲು, ಬಿಸ್ಕೆಟ್ ಮತ್ತು ನೀರು ಸಿಗುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ,' ಎಂದು ತಿಳಿದರು.
ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ
'ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದಲ್ಲಿ ಭಕ್ತಸಾಗರವೇ ಹರಿದುಬರುತ್ತದೆ. ಆದ್ದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಬಾರದೆಂದು ಲಲಿತ ಮಹಲ್ ಪ್ಯಾಲೇಸ್ ಮೈದಾನದಿಂದ ಸರ್ಕಾರಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ,' ಎಂದು ತಿಳಿಸಿದ್ದಾರೆ.
ಯಾರ ವಾಹನಗಳಿಗೆ ಅವಕಾಶ?
ಸಚಿವರು, ಶಾಸಕರು, ನ್ಯಾಯಾಧೀಶರು ಹಾಗೂ ಅವರ ಕುಟುಂಬದವರ ವಾಹನಗಳಿಗೆ ಮಾತ್ರ ಬೆಟ್ಟಕ್ಕೆ ಹೋಗಲು ಅನುಮತಿ ನೀಡಲಾಗಿದೆ. ಶಿಫಾರಸು ಪತ್ರಗಳನ್ನು ಹೊಂದಿರುವವರ ಖಾಸಗಿ ವಾಹನಗಳಿಗೂ ಪ್ರವೇಶ ಇರುವುದಿಲ್ಲ. ಇನ್ನು ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಪ್ಯಾಲೇಸ್ ಮೈದಾನದ ಬಳಿ ಪಾರ್ಕಿಂಗ್ ಮಾಡಬೇಕು. ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ತೆರಳಲು ಸರ್ಕಾರದ ವತಿಯಿಂದ ಉಚಿತ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.
ಬಿಸಿಲು ಇರುವ ಹಿನ್ನೆಲೆ ಭಕ್ತರಿಗಾಗಿ ಮಹಿಷಾಸುರ ಪ್ರತಿಮೆಯಿಂದ ಹಿಡಿದು ಚಾಮುಂಡೇಶ್ವರಿ ದೇವಸ್ಥಾನದ ಸಮೀಪದವರೆಗೂ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಮತ್ತು ವ್ಯವಸ್ಥಿತವಾಗಿ ದರ್ಶನ ಪಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications