Udupi: ಲೋಕಸಭಾ ಚುನಾವಣೆ ಮತದಾನ ಮಾಡಿ ಪ್ರಾಣಬಿಟ್ಟ ವೃದ್ಧೆ
ಉಡುಪಿ, ಏಪ್ರಿಲ್ 17: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ವಯೋವೃದ್ಧೆ ಮೃತಪಟ್ಟ ಘಟನೆ ನಡೆದಿದೆ.
ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಎನ್ನುವವರು, ಲೋಕಸಭಾ ಚುನಾವಣೆಯಲ್ಲಿ ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.

ಮತದಾನದ ದಿನ ಪಿ.ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಯಶೋಧಾ ನಾರಾಯಣ ಅವರು, ಮತದಾನ ಮಾಡಿಯೇ ಆಸ್ಪತ್ರೆ ತೆರಳುತ್ತೇನೆ ಎಂದು ಕುಟುಂಬಸ್ಥರ ಬಳಿ ತಿಳಿಸಿದ್ದರು. ಹೀಗಾಗಿ ಉಡುಪಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಸಹಾಯದಿಂದ ಯಶೋಧಾ ಅವರು ಮನೆಯಿಂದಲೇ ಮತದಾನ ಮಾಡಿದ್ದಾರೆ.
ಮತದಾನ ಮಾಡಿದ ಬಳಿಕ ಎದೆನೋವು ಹೆಚ್ಚಾದ ಕಾರಣ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚಿತ್ರದುರ್ಗ: 3536 ಮತದಾರರಿಂದ ಮನೆಯಿಂದಲೇ ಮತದಾನ
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ 16 ವರೆಗೆ ಜರುಗಿದ ಮನೆಯಿಂದ ಮತದಾನ ಕಾರ್ಯ ಪೂರ್ಣಗೊಂಡಿದೆ. 85 ವರ್ಷ ಮೇಲ್ಪಟ್ಟ 2,601 ನಾಗರಿಕರು ಮತ್ತು 1475 ವಿಶೇಷ ಚೇತನರು ಸೇರಿ ಒಟ್ಟು 3,536 ಜನರು ಮನೆಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಭಾರತ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರು ಇಚ್ಚಿಸಿದ್ದಲ್ಲಿ ತಮ್ಮ ಮನೆಯಿಂದಲೇ ಅಂಚೆ ಮತದ ಮೂಲಕ ಮತದಾನ ಮಾಡಲು ಕಲ್ಪಿಸಿತ್ತು.
ವಿಧಾನಸಭಾ ಕ್ಷೇತ್ರವಾರು ವಿವರ ಇಲ್ಲಿದೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 137 ಹಿರಿಯ ನಾಗರಿಕರು ಮತ್ತು 55 ಜನ ವಿಶೇಷ ಚೇತನರು ಮತ ಚಲಾಯಿಸಿದರು. ಇದೇ ಮಾದರಿಯಲ್ಲಿ ಅನುಕ್ರಮವಾಗಿ, ಹಿರಿಯೂರು ಕ್ಷೇತ್ರ ವ್ಯಾಪ್ತಿಯಲ್ಲಿ 191 ಮತ್ತು 122, ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 84 ಮತ್ತು 81, ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 200 ಹಾಗೂ 254, ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 184 ಮತ್ತು 55, ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ 167 ಮತ್ತು 117, ಪಾವಗಡ ಕ್ಷೇತ್ರದಲ್ಲಿ 472 ಮತ್ತು 202, ಶಿರಾ ಕ್ಷೇತ್ರದಲ್ಲಿ 1065 ಮತ್ತು 589 ಜನರು ಮತ ಚಲಾಯಿಸಿದ್ದಾರೆ.












Click it and Unblock the Notifications