ಶಬರಿಮಲೆ ಸ್ವಾಮಿ ಅಯ್ಯಪ್ಪ: 41 ದಿನಗಳ ಪೂಜೆ ಮುಕ್ತಾಯ
ತಿರುವನಂಯಪುರಂ, ಡಿಸೆಂಬರ್ 28: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನದ ಪ್ರಸಕ್ತ ಅವಧಿಯ ಪೂಜಾ ಕ್ರಮಗಳು ಒಂದು ಹಂತಕ್ಕೆ ತಲುಪಿವೆ. ಶನಿವಾರ ನಡೆದ ಮಂಡಲ ಪೂಜೆ ಬಳಿಕ ಈ ಉತ್ಸವದ ಅವಧಿಯಲ್ಲಿನ ಸತತ 41 ದಿನಗಳ ಮಂಡಲ ಪೂಜೆ ಮುಕ್ತಾಯಗೊಂಡಂತಾಗಿದೆ.
ಮುಖ್ಯ ಅರ್ಚಕ (ತಂತ್ರಿ) ಕಂಡರಾರು ರಾಜೀವರು ಅವರ ನೇತೃತ್ವದಲ್ಲಿ ಶನಿವಾರವಿಡೀ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ರಾತ್ರಿ 11.40ರಿಂದ 12.20ರ ನಡುವೆ ಮಂಡಲಪೂಜೆ ನಡೆಯಿತು. ಪೂಜೆಗೂ ಮುನ್ನ ಪವಿತ್ರ ಅಯ್ಯಪ್ಪನ ವಿಗ್ರಹವನ್ನು ಚಿನ್ನದ ದಿರಿಸು 'ತಂಕ ಅಂಕಿ'ಯಿಂದ ಅಲಂಕರಿಸಲಾಯಿತು. ಅದಕ್ಕೂ ಮುನ್ನ ಮೆರವಣಿಗೆ ಮೂಲಕ ತಂಕ ಅಂಕಿಯನ್ನು ಶಬರಿಮಲೆಗೆ ತರಲಾಗಿತ್ತು.
ಶಬರಿಮಲೆ ದೇಗುಲ ಆದಾಯ ಗಳಿಕೆಯಲ್ಲಿ ಗಣನೀಯ ಇಳಿಕೆ
ಇನ್ನು ಡಿ. 30ರ ಸಂಜೆ 5 ಗಂಟೆಯವರೆಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಚ್ಚಿರಲಿದೆ. ಡಿಸೆಂಬರ್ 31ರ ಬಳಿಕ ಭಕ್ತರು ಭೇಟಿ ನೀಡಲು ಅವಕಾಶವಿದೆ. ಅಲ್ಲಿಂದ 21 ದಿನಗಳವರೆಗಿನ ಮಕರವಿಳಕ್ಕು ಅವಧಿಯಲ್ಲಿ ಪೂಜಾ ಕಾರ್ಯಗಳು ಪುನಃ ನಡೆಯಲಿದೆ. ಜನವರಿ 11ರಂದು ಎರುಮೇಲಿಯಲ್ಲಿ ಪೆಟ್ಟ ತುಳ್ಳಾಲ್ ನಡೆಯಲಿದೆ. ಮರುದಿನ ಪಂಡಲಂನಿಂದ ಶಬರಿಮಲೆಗೆ ತಿರುವಾಭರಣಂ ಸಾಗಿಸುವ ಮೆರವಣಿಗೆ ನಡೆಯಲಿದೆ.
ಜನವರಿ 14ರಂದು ಮಕರವಿಳಕ್ಕು ನಡೆಯಲಿದ್ದು, ಅಂದು ಗುರುತಿ ಸಂಪ್ರದಾಯಗಳು ಜರುಗಲಿದೆ. ಜನವರಿ 19ರ ಸಂಜೆ ಮಲಿಕಾಪ್ಪರಂ ದೇವಿ ದೇವಸ್ಥಾನದ ಆವರಣದಲ್ಲಿ ವಾರ್ಷಿಕ ಮಕರವಿಳಕ್ಕು ಉತ್ಸವ ನಡೆಯಲಿದೆ. ಜನವರಿ 20ರ ಬೆಳಿಗ್ಗೆ ರಾಜಮನೆತನದ ಪ್ರತಿನಿಧಿಗಳಿಗೆ ಪ್ರತ್ಯೇಕವಾಗಿ ಪವಿತ್ರ ದರ್ಶನ ಅವಕಾಶ ನೀಡಿದ ಬಳಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಲಿದೆ.