ಪ್ರತಿಮೆ ಅನಾವರಣದಿಂದ ಮತ ಸಿಗಲ್ಲ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ
ರಾಮನಗರ, ನವೆಂಬರ್ 12: ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಆಹ್ವಾನ ಮಾಡಿದ್ದೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಆದರೆ ಕಾರ್ಯಕ್ರಮದ ಹಿಂದಿನ ದಿನ ರಾತ್ರಿ ಮುಖ್ಯಮಂತ್ರಿಗಳು 9:30ಕ್ಕೆ ಕರೆ ಮಾಡಿ ಕಾಟಾಚಾರಕ್ಕೆ ಆಹ್ವಾನ ನೀಡಿದ್ದಾರೆ ಎಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿಯಲ್ಲಿ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆಸಿದ್ದು, ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರನ್ನ ಆಹ್ವಾನ ಮಾಡಿದ್ದೆವು. ಅವರು ಕರ್ನಾಟಕದ ಅಸ್ಮಿತೆ ಎಂದೆಲ್ಲಾ ಬಿಜೆಪಿ ನಿನ್ನೆ ಒಂದು ಟ್ವೀಟ್ ಮಾಡಿದೆ. ಜೊತೆಗೆ ದೇವೇಗೌಡರು ಕುಟುಂಬ ಬಿಟ್ಟರೆ ಬೇರೋನೂ ನೋಡುವುದಿಲ್ಲ, ಕರ್ನಾಟಕ ಅಸ್ಮಿತೆ ವಿಷಯದಲ್ಲಿ ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿಯವರು ಹೇಳಿದ್ದಾರೆ. ಬಿಜೆಪಿ ಪಕ್ಷದವರಿಗೆ ನಾಗರಿಕತೆ ಇದೆಯೇ? ನಿನ್ನೆಯ ಕಾರ್ಯಕ್ರಮಕ್ಕೆ ಮೊನ್ನೆ ರಾತ್ರಿ 9: 30 ಗಂಟೆ ಸುಮಾರಿಗೆ ಮುಖ್ಯಮಂತ್ರಿಗಳು ದೇವೇಗೌಡರಿಗೆ ಕರೆ ಮಾಡಿದ್ದರು. ದೇವೇಗೌಡರು ಮಲಗಿದ್ದಾಗ ರಾತ್ರಿ 12.45ರ ಹೊತ್ತಿಗೆ ಯಾರ ಮುಖಾಂತರವೋ ಮನೆ ಕಂಪೌಂಡ್ನಲ್ಲಿ ಪೊಲೀಸರ ಕೈಯಲ್ಲಿ ಪತ್ರ ನೀಡಿ ಹೋಗಿದ್ದರು. ಪತ್ರದಲ್ಲಿ ಮಾನ್ಯರೇ ಎಂದು ಆರಂಭಿಸಿ ವಿಷಯ ಬರೆದು ಕೊನೆಯಲ್ಲಿ ಕೆಳಭಾಗದಲ್ಲಿ ದೇವೇಗೌಡರ ಹೆಸರು ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್
ಕರ್ನಾಟಕ ಅಸ್ಮಿತೆ ಎಂದು ಹೇಳುವ ಬಿಜೆಪಿ ಕನ್ನಡಿಗರನ್ನು ಗುಲಾಮರನ್ನಾಗಿ ಮಾಡಲು ಹೋಗಿದ್ದಾರೆ. ಪ್ರತಿನಿತ್ಯ ಹಿಂದಿ ಭಾಷೆ ಹೇರಿಕೆ ಮಾಡಿ ಹುನ್ನಾರ ಮಾಡುತ್ತಿದ್ದಾರೆ. ಅಂತಾದ್ರಲ್ಲಿ ಇವರೇನು ಕರ್ನಾಟಕದ ಅಸ್ಮಿತೆಯನ್ನು ಕಾಪಾಡುತ್ತಾರೆ. ಇವತ್ತು ರಾಜ್ಯ ಬಿಜೆಪಿ ನಾಯಕರು ನರೇಂದ್ರ ಮೋದಿಯವರ ಮುಂದೆ ಕೈಕಟ್ಟಿ ಗುಲಾಮರಂತೆ ನಿಲ್ಲುವ ಪರಿಸ್ಥಿತಿಯಿದೆ ಇವರು ಕರ್ನಾಟಕದ ಅಸ್ಮಿತೆ ಕಾಪಾಡುತ್ತಾರಾ.? ಎಂದು ಎಚ್ಡಿಕೆ ಕಿಡಿ ಕಾರಿದರು.
ಕೆಂಪೇಗೌಡರ ಪ್ರತಿಮೆಯಿಂದ ನಮಗೆ ನಷ್ಟವಿಲ್ಲ
ಬಿಜೆಪಿಯವರು ಜೆಡಿಎಸ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ, ಇವರೇನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತಿದ್ದಾರಾ.? ಎಲ್ಲವನ್ನೂ ಸರ್ವನಾಶ ಮಾಡುತ್ತಿದ್ದಾರೆ .ನಮ್ಮ ಕುಟುಂಬ ಅಂದರೆ ದೇವೇಗೌಡರು ಜನ್ಮ ನೀಡಿರುವ ಆರು ಜನ ಮಾತ್ರ ಅಲ್ಲ. ರಾಜ್ಯದ ಪ್ರತೀ ಕುಟುಂಬವೂ ನಮ್ಮ ಕುಟುಂಬವೇ. ನನ್ನ ಬಳಿ ಸಂಕಷ್ಟ ಹೇಳಿಕೊಂಡು ಬರುವ ಜನರ ಸಮಸ್ಯೆ ಬಗೆಹರಿಸುತ್ತಿದ್ದೇವೆ.
ಆದರೆ ನಿಮ್ಮ ನಡವಳಿಕೆ ಏನು.? ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಲೂಟಿ ಮಾಡಿಕೊಂಡು ಕೂತಿದ್ದೀರಿ. ನಿನ್ನೆ ದಿನ ರಾಜಕಾರಣಕ್ಕೋಸ್ಕರ ಕಾರ್ಯಕ್ರಮ ಮಾಡಿದ್ದೀರಿ. ಇದರಿಂದ ನನಗೇನು ಆತಂಕ ಇಲ್ಲ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಜನ ಕೆಂಪೇಗೌಡರ ಪ್ರತಿಮೆ ಮಾಡಿದ್ದಾರೆ. ನೀವು ಸರ್ಕಾರದ ಹಣ ಖರ್ಚು ಮಾಡಿ ಪ್ರತಿಮೆ ಮಾಡಿದ್ದೀರಿ. ಹಾಗಾಗಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾಗಿದ್ದು ನಿಮ್ಮ ಧರ್ಮ ಅದೇನು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ಲ, ಪಕ್ಷದ ಕಾರ್ಯಕ್ರಮ ಆಗಿದಿದ್ದರೆ ನಮ್ಮದೇನು ತಕರಾರಿಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಗುಡುಗಿದರು.
ಒಕ್ಕಲಿಗ ಅಸ್ಮಿತೆ ರಾಜಕಾರಣ: ಜೆಡಿಎಸ್- ಬಿಜೆಪಿ ನಡುವೆ ಭುಗಿಲೆದ್ದ ಸಂಘರ್ಷ
ಪ್ರತಿಮೆ ಅನಾವರಣದಿಂದ ಮತ ಸಿಗಲ್ಲ
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಿಂದ ಬಿಜೆಪಿಗೆ ರಾಜಕೀಯ ಲಾಭವಾಗಿದೆ ಎಂದೆಲ್ಲಾ ಚರ್ಚೆ ನಡೆಯುತ್ತಿದೆ. ಒಂದು ಕಲ್ಲಲ್ಲಿ ನಾಲ್ಕು ಹಕ್ಕಿ ಉದುರಿಸಿದ್ದಾರೆ.
ಹಳೇ ಮೈಸೂರಿನ ಭದ್ರಕೋಟೆನಾ ಛಿದ್ರ ಮಾಡಿದರು ಅಂತೆಲ್ಲಾ ಚರ್ಚೆ ಆಗಿದೆ. ಆದರೆ ಇದ್ಯಾವುದೂ ಸಾಧ್ಯವಿಲ್ಲ. ಇಲ್ಲಿ ಕೇವಲ ಪ್ರತಿಮೆ ಅನಾವರಣ ಮಾಡಿ ಪುಷ್ಪಾರ್ಚನೆ ಮಾಡುವುದಲ್ಲ. ಜೀವಂತ ಪ್ರತಿಮೆಗಳಿಗೆ(ಜನ) ನಿಮ್ಮ ಕೊಡುಗೆ ಏನು.? ಅವರ ಬದುಕು ಕಟ್ಟಿಕೊಡಲು ನಿಮ್ಮ ಪಾತ್ರ ಏನು.? ಮೊದಲು ಈ ಕೆಲಸ ಮಾಡಿ ಮತ ಬ್ಯಾಂಕ್ ಹೊಡೆಯಿರಿ. ಕೇವಲ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮತ ಬ್ಯಾಂಕ್ ಹೊಡೆಯಲು ಸಾಧ್ಯವಾ.? ಯಾರ ಕಲ್ಲಿಗೆ ಯಾವ ಹಕ್ಕಿ ಬೀಳುತ್ತೆ ಎನ್ನುವುದನ್ನ ಜನ ತೀರ್ಮಾನ ಮಾಡುತ್ತಾರೆ. ಇದಕ್ಕೆ ನಾನು ಹೆಚ್ಚು ಆದ್ಯತೆ ಕೊಡಲ್ಲ ಎಂದರು.
ಅಭಿವೃದ್ಧಿ ಯೋಜನೆಗಳು ಸರಕಾರ ಕೆಲಸ, ಪಕ್ಷದ್ದಲ್ಲ
ನರೇಂದ್ರ ಮೋದಿ ಇಲ್ಲಿಗೆ ಬಂದು ಪ್ರತಿಮೆ ಉದ್ಘಾಟನೆ ಮಾಡಿ ಹೋಗಿದ್ದಾರೆ. ಆದರೆ ಅವರು ರಾಜ್ಯದ ಜನತೆಗೆ ಏನಾದರೂ ಸಂದೇಶ ಕೊಟ್ಟಿದ್ದರಾ? ನಾನು ಮುಂದೆ ರಾಜ್ಯಕ್ಕೆ ಏನು ಕೊಡುತ್ತೀನಿ ಎಂದು ತಿಳಿಸಿದ್ರಾ? ನಿನ್ನೆ ಎರಡು ರೈಲಿಗೆ ಚಾಲನೆ ಕೊಟ್ಟಿದ್ದೀರಿ, ಇವೆಲ್ಲಾ ಆನ್ ಗೋಯಿಂಗ್ ಸ್ಕೀಂ, ಯಾವುದೇ ಸರ್ಕಾರ ಬಂದರೂ ಇದನ್ನ ಮಾಡುತ್ತವೆ. ಹೊಸ ರೈಲ್ವೆ, ವಿಮಾನ, ಯೋಜನೆ ತರುವುದು ಅಧಿಕಾರದಲ್ಲಿರುವವರ ಕೆಲಸ. ಇದೇನು ರಾತ್ರೋರಾತ್ರಿ ಜಂತರ್ ಮಂಥರ್ ಮಾಡಿ ತಂದಿಲ್ಲ. ನಾನು ಸಿಎಂ ಆಗಿದ್ದಾಗ ಮೆಟ್ರೋ ಮೊದಲ ಕಾಮಗಾರಿಗೆ ಚಾಲನೆ ನೀಡಿದ್ದೆ, ಹಾಗಂತ ನಾನೇ ಮೆಟ್ರೋ ತಂದೆ ಎನ್ನುವುದಕ್ಕಾಗುತ್ತದೆಯೇ? ನಮ್ಮನೆ ದುಡ್ಡು ತಂದು ಇದಕ್ಕೆ ಹಾಕಿಲ್ಲ. ನರೇಂದ್ರ ಮೋದಿ ಒಬ್ಬರೇನಾ ಕೆಲಸ ಮಾಡ್ತಿರೋದು? ರಾಜ್ಯ ನಾಯಕರ ಯೋಗ್ಯತೆಗೆ ಇವರ ಸರ್ಕಾರ ಇಟ್ಕೊಂಡು ಇಲ್ಲಿ ಓಟ್ ಕೇಳೋಕಾಗುತ್ತಿಲ್ಲ. ಮೋದಿ ಕರ್ಕೊಂಡ್ ಬಂದು ಓಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನ ಜನ ತೀರ್ಮಾನ ಮಾಡಲಿದ್ದಾರೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು
ನಾನು ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 59 ಸೀಟ್ ಗೆದ್ದಿದ್ದೆ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ 59 ಸೀಟ್ ಆಗ ಬಂದಿತ್ತು. ಅದು ಅವರೊಬ್ಬರ ಕೊಡುಗೇನಾ..?
ನಾನು ಒಬ್ಬನೆ 2013 ರಲ್ಲಿ 40 ಸೀಟ್ ಗೆಲ್ಲಲಿಲ್ವಾ.? 2023 ಚುನಾವಣೆಯಲ್ಲಿ ನಾವು 123 ಸೀಟ್ ಗುರಿ ಇದೆಯಲ್ಲ ಅದನ್ನ ಜನ ತೀರ್ಮಾನ ಮಾಡುತ್ತಾರೆ. ನಾವು ಏನು ಸುಳ್ಳು ಹೇಳಿದ್ದೀವಿ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ.. ಮಾಡಿಲ್ವಾ..? ಸುಳ್ಳು ಹೇಳುವುದರಿಂದ ನನಗೇನು ಪ್ರಯೋಜನ. ಅದರ ಬಗ್ಗೆ ಚರ್ಚೆ ಬೇಡ. 2023 ಕ್ಕೆ ಕಾಂಗ್ರೆಸ್ ಯಾವ ಸ್ಥಾನದಲ್ಲಿ ಇರುತ್ತೆ, ಜೆಡಿಎಸ್ ಯಾವ ಸ್ಥಾನದಲ್ಲಿ ಇರುತ್ತೆ ಎಂಬುದನ್ನ ಅವಾಗ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.
ಇನ್ನು ಮಾಜಿ ಸಚಿವ ನಿಖಿಲ್ ಕುಮಾರಸ್ವಾಮಿಯನ್ನು ಸಿ.ಪಿ.ಯೋಗೇಶ್ವರ್ ಮರಿಯಾನೆ ಎಂದು ಕರೆದಿರುವ ಹೇಳಿಕೆ ಬಗ್ಗೆ ಮಾತನಾಡಿ, ದೊಡ್ಡಾನೆಯೋ, ಮರಿಯಾನೆಯೋ ಜನರು ತೀರ್ಮಾನ ಮಾಡಲಿದ್ದಾರೆ. ನಾನು ಇದೇ 14 ರಿಂದ ಮುಂದಿನ ಮಾರ್ಚ್ 15 ರವರೆಗೆ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ಇವತ್ತು ಚನ್ನಪಟ್ಟಣದ ಮುಖಂಡರ ಮನೆಗಳಿಗೆ ಭೇಟಿ ಕೊಡುತ್ತಿದ್ದೇನೆ . ಸಣ್ಣಪುಟ್ಟ ಅಸಮಾಧಾನ ಇದ್ದರೆ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.