ರಾಮನಗರದಲ್ಲಿ ಅಚ್ಚರಿ ಘಟನೆ: ಉಸಿರು ನಿಂತಿದ್ದ ವ್ಯಕ್ತಿ ಅಂತಿಮ ಸಂಸ್ಕಾರ ವೇಳೆ ಮತ್ತೆ ಜೀವಂತ
ರಾಮನಗರ, ಏಪ್ರಿಲ್ 08: ಮೃತಪಟ್ಟಿದ್ದಾರೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ ವ್ಯಕ್ತಿ ಮತ್ತೆ ಜೀವಂತವಾದ ವಿಚಿತ್ರ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ನಡೆದಿದೆ. ಶಿವರಾಮ್ (55) ಮೃತಪಟ್ಟಿದ್ದಾರೆ ಎಂದು ತಿಳಿದು ಮತ್ತೆ ಬದುಕಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಚನ್ನಪಟ್ಟಣದ ಹುಚ್ಚಯ್ಯನದೊಡ್ಡಿಯಲ್ಲಿ ಶಿವರಾಮು ಕೂಲಿ ಕೆಲಸ ಮಾಡುತ್ತಿದ್ದರು. ಇಂದು (ಏಪ್ರಿಲ್ 08) ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಶಿವರಾಮು ಏಕಾಏಕಿ ಕುಸಿದು ಬಿದ್ದಿದ್ದಾರೆ. ಉಸಿರು ನಿಂತಿದ್ದನ್ನು ಗಮನಸಿದ್ದ ಸ್ಥಳೀಯರು ಕೂಡಲೇ ಸ್ಥಳೀಯ ವೈದ್ಯರಿಗೆ ಕರೆ ಮಾಡಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವೈದ್ಯರು ತಪಾಸಣೆ ನಡೆಸಿದ್ದಾರೆ.

ಈ ವೇಳೆ ವೈದ್ಯರು ಶಿವರಾಮು ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಕುಟುಂಬಸ್ಥರು ಶಿವರಾಮು ಮೃತಪಟ್ಟಿರುವ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದು, ನೂರಾರು ಜನರು ಶಿವರಾಮು ಮೃತದೇಹ ದರ್ಶನ ಪಡೆಯಲು ಬಂದಿದ್ದರು. ಅಲ್ಲದೇ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಕೂಡ ಎಲ್ಲವೂ ಆಗಿತ್ತು.
ಇನ್ನೇನು ಅಂತಿಮ ಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಶಿವರಾಮು ಅಚ್ಚರಿ ಎಂಬಂತೆ ಎಚ್ಚರಗೊಂಡಿದ್ದಾರೆ. ಶಿವರಾಮು ಎಚ್ಚರವಾಗುತ್ತಿದ್ದಂತೆ ಕುಟುಂಬಸ್ಥರು ಕೂಡಲೇ ವೈದ್ಯರಿಗೆ ತಿಳಿಸಿದ್ದಾರೆ. ಬೆಳಗ್ಗೆ 6:30ಕ್ಕೆ ಕುಸಿದು ಬಿದ್ದಿದ್ದ ಶಿವರಾಮು ಮಧ್ಯಾಹ್ನ 12 ಗಂಟೆಯವರೆಗೂ ಉಸಿರಾಡಲೇ ಇಲ್ಲ ಎನ್ನಲಾಗಿದೆ. ಶಿವರಾಮು ಅವರನ್ನು ಮತ್ತೆ ಜೀವಂತವಾಗಿ ಕಂಡ ಕುಟುಂಬಸ್ಥರು ನಿಜಕ್ಕೂ ಇದೊಂದು ಪವಾಡ ಎಂದು ಖುಷಿಪಟ್ಟಿದ್ದಾರೆ.











Click it and Unblock the Notifications