ಮೊದಲ ಬಾರಿಗೆ ಮದ್ಯೆ ಸೇವಿಸಿ ಸಿಕ್ಕಿಬಿದ್ದವರಿಗೆ ದಂಡದ ಮೊತ್ತ ಕಡಿಮೆ: ಬಿಹಾರ ಸರ್ಕಾರ
ಪಾಟ್ನಾ ಏಪ್ರಿಲ್ 5: ಕೆಲ ವರ್ಷಗಳ ಹಿಂದೆ ಮದ್ಯವನ್ನು ನಿಷೇಧ ಮಾಡಿದ ಬಿಹಾರ ಸರ್ಕಾರ ಈವರೆಗೆ ಅದರಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಿದೆ. ಸದ್ಯ ಮತ್ತೊಂದು ಬದಲಾವಣೆಯನ್ನು ಮಾಡಲಾಗಿದೆ. ಮೊದಲ ಬಾರಿಗೆ ಮದ್ಯ ಸೇವಿಸಿ ಸಿಕ್ಕಿಬಿದ್ದವರಿಗೆ ದಂಡದ ಮೊತ್ತವನ್ನು ಕಡಿಮೆ ಮಾಡಲಾಗಿದೆ. ತಿದ್ದುಪಡಿ ಪ್ರಕಾರ, ಒಬ್ಬ ವ್ಯಕ್ತಿಯು ಮೊದಲ ಬಾರಿಗೆ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ಅಂಥವರಿಗೆ 2000-ರೂ ನಿಂದ 5000ರೂ ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ದಂಡವನ್ನು ಪಾವತಿಸದಿದ್ದರೆ 30 ದಿನಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಜೊತೆಗೆ ಒಬ್ಬ ವ್ಯಕ್ತಿಯು 2 ನೇ ಬಾರಿಗೆ ಮದ್ಯ ಸೇವಿಸಿ ಸಿಕ್ಕಿಬಿದ್ದರೆ 1 ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ರಾಜ್ಯ ಸಚಿವ ಸಂಪುಟ ಹೊಸ ಮೊತ್ತದ ದಂಡಕ್ಕೆ ಅನುಮೋದನೆ ನೀಡಿದೆ.
ಬಿಹಾರ ನಿಷೇಧ ಮತ್ತು ಅಬಕಾರಿ ತಿದ್ದುಪಡಿ 2022ರ ಪ್ರಕಾರ, ಮೊದಲ ಬಾರಿಗೆ ಅಪರಾಧಿಯು ದಂಡವನ್ನು ಪಾವತಿಸಲು ವಿಫಲವಾದರೆ, ಅಂಥವರು ಒಂದು ತಿಂಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎರಡನೇ ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ ಒಂದು ವರ್ಷ ಜೈಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. 2018 ರಲ್ಲಿ ಮಾಡಿದ ತಿದ್ದುಪಡಿಯ ಪ್ರಕಾರ, ಮೊದಲ ಬಾರಿಗೆ ಅಪರಾಧ ಮಾಡುವವರಿಗೆ 50,000 ರೂ. ದಂಡ ವಿಧಿಸಲಾಗಿತ್ತು.
If a person is caught drinking alcohol for the first time, he/she will be fined Rs 2000-Rs 5000. If he/she doesn't pay fine,he/she to undergo 30-days imprisonment. If a person is caught drinking alcohol for 2nd time,he/she to undergo 1 yr imprisonment:ACS Education &Cabinet,Bihar pic.twitter.com/AI8zTuaZDI
— ANI (@ANI) April 4, 2022
ಮದ್ಯ ನಿಷೇಧ ಕಾನೂನು ಬಿಹಾರದಲ್ಲಿನ ನ್ಯಾಯಾಂಗದ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಪಾಟ್ನಾ ಹೈಕೋರ್ಟ್ನ 14- 15 ನ್ಯಾಯಮೂರ್ತಿಗಳು ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆಯ ಅಡಿ ದಾಖಲಾದ ಪ್ರಕರಣಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮಾತ್ರವೇ ನಡೆಸುತ್ತಿದ್ದಾರೆ ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ಹೇಳಿತ್ತು. ಹೀಗಾಗಿ ಬಿಹಾರದ ಕಾನೂನು ವ್ಯವಸ್ಥೆಯು ಮದ್ಯದ ಪ್ರಕರಣಗಳ ಸಂಖ್ಯೆಯನ್ನು ಮೀರದಂತೆ ದಂಡದ ಮೊತ್ತವನ್ನು ಕಡಿಮೆ ಮಾಡಿದೆ.
ಮಹಿಳೆಯರ ಹಿತದೃಷ್ಟಿಯಿಂದ ಏಪ್ರಿಲ್ 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೆ ಮದ್ಯ ನಿಷೇಧದ ಬಳಿಕ ಕಳ್ಳಭಟ್ಟಿ ಸೇವನೆಯಿಂದ ಹಲವಾರು ಜನ ಸಾವನ್ನಪ್ಪಿದ ಪ್ರಕರಣಗಳು ಬೆಳಕಿಗೆ ಬಂದಿವೆ.
ಮೊದಲ ಬಾರಿಗೆ ಅಪರಾಧಿಗಳಿಗೆ ದಂಡ ಕಡಿಮೆ ಮಾಡಲು ಪ್ರಯತ್ನಿಸುವ ತಿದ್ದುಪಡಿ ಮಸೂದೆಯನ್ನು ಬಿಹಾರ ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಮದ್ಯ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಫಲವಾಗಿರುವ ಕಾರಣ ಬಿಹಾರದಲ್ಲಿ ಕಳ್ಳಭಟ್ಟಿ ಕುಡಿದು ಸಾವನ್ನಪ್ಪುತ್ತಿರುವಂತ ದುರಂತಗಳು ಮುಂದುವರಿದಿವೆ ಎಂದರು. ಜೊತೆಗೆ ಮದ್ಯ ಸೇವಿಸುವ ಜನರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ವಿಷಕಾರಿ ಮದ್ಯ ಸೇವಿಸಿ ಸಾಯುವವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2021ರ ಕೊನೆಯ ಆರು ತಿಂಗಳಲ್ಲಿ 60ಕ್ಕೂ ಹೆಚ್ಚು ಮಂದಿ ಕಳ್ಳಭಟಟಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷ ಆರ್ಜೆಡಿ ಅಲ್ಲದೆ, ತನ್ನ ಮಿತ್ರ ಪಕ್ಷ ಬಿಜೆಪಿಯಿಂದಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಾಗ್ದಾಳಿಗೆ ಒಳಗಾಗಿದ್ದರು.
ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಇದೆ ಹೊರತು ಜಾರಿಯಾಗಿಲ್ಲ ಎಂದು ಪ್ರತಿಪಕ್ಷಗಳು ಸಮರ್ಥಿಸಿಕೊಂಡಿವೆ.