ವೃತ್ತಿಯಾಧರಿತವಾಗಿ ಲಸಿಕೆಯಲ್ಲಿ ಆದ್ಯತೆ ನೀಡಲಾಗದು; ಕೇಂದ್ರ
ನವದೆಹಲಿ, ಮಾರ್ಚ್ 15: ವೃತ್ತಿಯನ್ನಾಧರಿಸಿ ಕೊರೊನಾ ಲಸಿಕೆಯಲ್ಲಿ ಆದ್ಯತೆ ನೀಡಲು ಸಾಧ್ಯವಿಲ್ಲ ಎಂದು ಸೋಮವಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಕೊರೊನಾ ಲಸಿಕೆ ನೀಡುವಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಗೆ ಆದ್ಯತೆ ನೀಡಬೇಕು. ಆದರೆ ಇವರನ್ನು ಆದ್ಯತಾ ವಲಯದಿಂದ ಕೈಬಿಡಲಾಗಿದೆ ಎಂದು ಪ್ರಶ್ನಿಸಿ ಅರವಿಂದ್ ಸಿಂಗ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಹಿರಿಯ ನಾಗರಿಕರಿಗಾಗಿ ಕೋವಿಡ್ ರಕ್ಷಾ ಸಹಾಯವಾಣಿ ಆರಂಭಿಸಿದ ತೇಜಸ್ವಿ ಸೂರ್ಯ
ಈ ಅರ್ಜಿ ಸಂಬಂಧ ಉತ್ತರಿಸಿರುವ ಕೇಂದ್ರ, ವಕೀಲರು ಹಾಗೂ 45 ವರ್ಷ ಕೆಳಗಿನವರಿಗೆ ವಿಶೇಷ ವರ್ಗ ರೂಪಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಕೊರೊನಾ ಲಸಿಕೆ ನೀಡುವ ಕುರಿತು 2020ರ ಆಗಸ್ಟ್ನಲ್ಲಿ ಪರಿಣತರ ತಂಡ ರೂಪಿಸಲಾಗಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60ವರ್ಷ ಮೇಲ್ಪಟ್ಟವರು, ಆರೋಗ್ಯ ಸಮಸ್ಯೆಯುಳ್ಳ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಬೇಕು ಎಂದು ಈ ತಂಡ ಸಲಹೆ ನೀಡಿದೆ. ಅದರಂತೆ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ ಎಂದು ಕೇಂದ್ರ ತಿಳಿಸಿದೆ.
ಜನವರಿ 16ರಿಂದ ಭಾರತದಾದ್ಯಂತ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಆರೋಗ್ಯ ಕಾಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದ್ದು, ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.
ದೇಶದ ಹಿತದೃಷ್ಟಿಯಿಂದ ಆದ್ಯತಾ ವಲಯದಲ್ಲಿ ಉಪವರ್ಗವನ್ನು ಅವರ ಉದ್ಯೋಗ ಆಧರಿಸಿ ಈ ಹಂತದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಮಾರ್ಚ್ 18ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಗಿದೆ.