ಮೈಸೂರು ದಸರಾ: ರೋಮಾಂಚನಕಾರಿ ಜಟ್ಟಿ ಕಾಳಗದಲ್ಲಿ ಗೆಲುವು ಯಾರಿಗೆ?
ಮೈಸೂರು, ಅಕ್ಟೋಬರ್, 05: ಮೈಸೂರು ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ಎರಡು ಜೊತೆ ಜಟ್ಟಿಗಳ ನಡುವೆ ರಕ್ತ ಚಿಮ್ಮಿಸುವ ರೋಮಾಂಚನಕಾರಿ ವಜ್ರಮುಷ್ಠಿ ಕಾಳಗ ಇಂದು ಜಂಬೂ ಸವಾರಿಗೂ ಮುನ್ನ ನಡೆಯಿತು.
ಅರಮನೆಯ ಕಲ್ಯಾಣ ಮಂಟಪದ ಮುಂಭಾಗದ ಕನ್ನಡಿ ತೊಟ್ಟಿ ಆವರಣದಲ್ಲಿ ಕೃತಕವಾಗಿ ಮಟ್ಟಿ ಅಖಾಡವನ್ನು ನಿರ್ಮಿಸಲಾಗಿತ್ತು. ಅಕಾಡದಲ್ಲಿ ಆನೆ ದಂತದಿಂದ ತಯಾರಿಸಿದ 'ವಜ್ರನಖ ಎಂಬ ಆಯುಧವನ್ನು ಕೈಗಳಲ್ಲಿ ಹಿಡಿದ ಜೆಟ್ಟಿಗಳು ಪರಸ್ಪರ ಕದಾಟಕ್ಕಿಳಿದರು. ಎದುರಾಳಿ ಜಟ್ಟಿಯ ತಲೆಯಿಂದ ರಕ್ತ ಬಂದ ಕೂಡಲೇ ಕಾಳಗ ಕೊನೆಗೊಂಡಿತು. ರಕ್ತ ಬಂದವರು ಸೋತರೆ ಅದಕ್ಕೆ ಕಾರಣರಾದವರು ಮೇಲುಗೈ ಸಾಧಿಸಿದರು. ಬಳಿಕ ಸೋತು ಗೆದ್ದವರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೈಮುಗಿದು ನಿಂತು ಸ್ವಾಮಿ ನಿಷ್ಠೆ ಪ್ರದರ್ಶಿಸಿದರು.
ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲು ಬಿಡುಗಡೆ ಮಾಡಿದ ನೈರುತ್ಯ ರೈಲ್ವೆ
ಚೆನ್ನಪಟ್ಟಣದ ಮನೋಜ್ ಜೆಟ್ಟಿ, ಚಾಮರಾಜ ನಗರದ ಅಚ್ಯುತ್ ಜೆಟ್ಟಿ ನಡುವೆ ಹಾಗೂ ಮೈಸೂರಿನ ವಿಷ್ಣು ಬಾಲಾಜಿ ಜೆಟ್ಟಿ ಬೆಂಗಳೂರಿನ ತಾರಾನಾಥ ಜೆಟ್ಟಿ ನಡುವೆ ಜಟ್ಟಿ ಕಾಳಗ ನಡೆಯಿತು. ಬೆಳಗ್ಗೆ 11 ಗಂಟೆಗೆ ಅಖಾಡದಲ್ಲಿ ಎರಡು ಜೋಡಿಗಳು ರಾಜ ವಂಶಸ್ಥರ ಅನುಮತಿಗಾಗಿ ಕೈ ಮುಗಿದು ಕಾಯುತ್ತಿದ್ದರು. 11:10ರ ಸುಮಾರಿಗೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅರಮನೆಯ ಕಲ್ಯಾಣ ತೊಟ್ಟಿಯಿಂದ ಕೂಸ್ಮಾಂಡ ಹಾಗೂ ಉತ್ತರ ಪೂಜೆ ನೆರವೇರಿಸಿದ ಬಳಿಕ ಹೊರ ಬಂದು ಕಾಳಗ ನಡೆಸುವಂತೆ ಸೂಚನೆ ನೀಡಿದ್ದರು. ಅದನ್ನು ಗಮನಿಸಿದ ಜಟ್ಟಿಗಳು ಕಾಳಗ ಆರಂಭಿಸಿದ್ದರು. ಇದಕ್ಕೂ ಮುನ್ನ ಕುಲದೇವತೆ ನಿಂಬುಜಾಂಬೆ ದೇವಿಗೆ ಪೂಜೆ ಸಲ್ಲಿಸಿ ಜಟ್ಟಿಗಳು ಅರಮನೆಗೆ ಆಗಮಿಸಿದ್ದರು. ಕೇಶಮುಂಡನ ಮಾಡಿಸಿಕೊಂಡು ಬಂದಿದ್ದ ಅವರು ಮೈ ತುಂಬಾ ಕೆಂಪು ಮಣ್ಣು ಬಳಿದುಕೊಂಡಿದ್ದರು.
ಕಾಳಗ ಚಾಲನೆಗೆ ಯದುವೀರ್ ಸೂಚನೆ
ಮೈಸೂರಿನ ಮಾಧವ ಜೆಟ್ಟಿ, ಚಾಮರಾಜನಗರದ ಚೆನ್ನಕುಟ್ಟಿ ಜೆಟ್ಟಿ, ಬಾಲಾಜಿ, ಚೆನ್ನಪಟ್ಟಣದ ಪುರುಷೋತ್ತಮ್, ಬೆಂಗಳೂರಿನ ಕೃಷ್ಣ ಜೆಟ್ಟಿ ಸೇರಿದಂತೆ ಐದು ಜನ ವಸ್ತಾರ್ಗಳಾಗಿ ಕಾರ್ಯನಿರ್ವಹಿಸಿದರು. ಒಂದೇ ಮಟ್ಟಿಯಲ್ಲಿ ಎರಡು ಜೊತೆ ಕುಸ್ತಿ ನಡೆಯುವುದನ್ನು ಗಮನಿಸಲಾಗಿತ್ತು. ಜಗಜಟ್ಟಿಗಳ ನಡುವಿನ ಕುಸ್ತಿ ರೋಚಕತೆಯನ್ನು ಸವಿಯುತ್ತಿದ್ದಂತೆ ಕೇವಲ 30 ಸೆಕೆಂಡುಗಳಲ್ಲಿ ಕುಸ್ತಿ ಪೂರ್ಣಗೊಂಡಿತು.
ಜಟ್ಟಿ ಕಾಳಗ ಮುಕ್ತಾಯ ಆಗಿದ್ದು ಹೇಗೆ?
ಬಳಿಕ ಜಗ ಜಟ್ಟಿಗಳಂತೆ ಕಾದಾಡಿದ ಜಟ್ಟಿಗಳು ರಾಜರ ಆಗಮನವನ್ನು ನಿರೀಕ್ಷಿಸುತ್ತಾ ಮಟ್ಟಿಯೊಳಗೆ ಕೈ ಮುಗಿದು ನಿಂತರು. ನಂತರ ಕಲ್ಯಾಣಿ ತೊಟ್ಟಿಯಿಂದ ಹೊರಬಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜಿಟ್ಟಿಗಳಿಗೆ ಶುಭಕೋರಿ ವಿಜಯ ಯಾತ್ರೆಗೆ ಹೊರಟರು. ಅಲ್ಲಿಗೆ ಜಟ್ಟಿಕಾಳಗ ಮುಕ್ತಾಯವಾಯಿತು.
ಗಮನ ಸೆಳೆದ ಕೆಲವು ಸ್ತಬ್ಧಚಿತ್ರಗಳು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯ ದಶಮಿಯ ಜಂಬೂ ಸವಾರಿಗೂ ಮುನ್ನ ರಾಜ್ಯದ ಎಲ್ಲಾ ಜಿಲ್ಲೆಗಳ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತು. ನೆಲದ ಸಂಸ್ಕೃತಿಯನ್ನು ಬಿಂಬಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕಂಬಳ, ಹುಲಿ ಕುಣಿತ, ಭೂತಾರಾಧನೆಯ್ನು ಬಿಂಬಿಸುವ ಸ್ತಬ್ಧ ಗಮನ ಸೆಳೆಯಿತು. ಇನ್ನು ಚಾಮರಾಜನಗರದಿಂದ ಏರ್ಪಡಿಸಿದ್ದ ಪುನೀತ್ ರಾಜ್ಕುಮಾರ್ ಅವರ ಸ್ತಬ್ದಚಿತ್ರ ಗಮನ ಸೆಳೆಯಿತು. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಆನೆಗಳ ಹಾಗೂ ಹುಲಿಯ ಬೃಹತ್ ಚಿತ್ರ ಅಳವಡಿಸಲಾಗಿತ್ತು. ಹಿಂಭಾಗದಲ್ಲಿ ಪುನೀತ್ ಅವರ ಭಾವಚಿತ್ರ ಗಮನ ಸೆಳೆಯಿತು.
ಜಂಬೂ ಸವಾರಿ ವೀಕ್ಷಣೆಗೆ ನೆರೆದಿದ್ದ ಜನಸಾಗರ
ನಾಡಹಬ್ಬ ದಸರಾ ಜಂಬೂ ಸವಾರಿ ಮೆರವಣಿಗೆ ಈಗಾಗಲೇ ರಾಜಬೀದಿಯಲ್ಲಿ ಸಾಗಿದ್ದು, ಇದನ್ನು ನೋಡಲು ಜನಸಾಗರವೇ ನೆರೆದಿತ್ತು. ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ 47 ಸ್ತಬ್ಧಚಿತ್ರಗಳು ಭಾಗಿ ಆಗಿದ್ದು, ಕೆಲವೊಂದು ಸ್ತಬ್ಧಚಿತ್ರಗಳು ಗಮನ ಸೆಳೆದಿವೆ. 31 ಜಿಲ್ಲೆಗಳ ಸ್ತಬ್ಧಚಿತ್ರಗಳ ಜೊತಗೆ ಸ್ತಬ್ಧಚಿತ್ರ ಉಪ ಸಮಿತಿಯ 3 ಸ್ತಬ್ದ ಚಿತ್ರಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.