ಮೈಸೂರಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ 15 ಹೊಸ ಹುರಿಯಾಳುಗಳು
ಮೈಸೂರು, ಏಪ್ರಿಲ್ 30 : ಈ ಬಾರಿ ಮೂರು ಪಕ್ಷಗಳು ಪ್ರತಿಷ್ಠಿತ ಮೈಸೂರಿನಲ್ಲಿ ಹೊಸ ಚುನಾವಣೆ ಪಾಲಿಟಿಕ್ಸ್ ಶುರುವಿಟ್ಟುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ 15 ಅಭ್ಯರ್ಥಿಗಳು ಇದೇ ಮೊದಲ ಬಾರಿ ತಮ್ಮ ಅದೃಷ್ಟ ಪಣಕ್ಕೊಡ್ಡಿದ್ದಾರೆ.
ಬಿಜೆಪಿ ವತಿಯಿಂದಲೇ ಈ ಬಾರಿ ಅಧಿಕ ಹೊಸಮುಖಗಳನ್ನು ಕಾಣಬಹುದು. ಈ ಪಕ್ಷವು 7 ಅಭ್ಯರ್ಥಿಗಳನ್ನು ಇದೇ ಮೊದಲ ಬಾರಿ ಕಣಕ್ಕಿಳಿಸಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷವು ಕೇವಲ ಮೂರು ಹೊಸ ಮುಖಗಳಿಗೆ ಹಾಗೂ ಜೆಡಿಎಸ್ ಪಕ್ಷವು ಐವರು ಹೊಸಬರಿಗೆ ಮಣೆ ಹಾಕಿವೆ.
ಮೈಸೂರಲ್ಲಿ ಗೆಲ್ಲಬೇಕಿರುವುದು 11 ಜನ: 197 ನಾಮಪತ್ರ ಸಲ್ಲಿಕೆ!
ವರುಣಾ ಕ್ಷೇತ್ರದಲ್ಲಿ ಮೂರೂ ಪಕ್ಷಗಳು ಹೊಸಬರನ್ನು ಕಣಕ್ಕಿಳಿಸಿದ್ದರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಡಿ.ರವಿಶಂಕರ್, ಎಂ.ಅಶ್ವಿನ್ ಕುಮಾರ್, ಸಿ.ಅನಿಲ್ಕುಮಾರ್, ಎಚ್.ಎಸ್.ದಯಾನಂದ ಮೂರ್ತಿ, ಪಾಲಿಕೆ ಸದಸ್ಯರಾದ ಕೆ.ವಿ.ಮಲ್ಲೇಶ್, ಸಂದೇಶ್ ಸ್ವಾಮಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಸಂದೇಶ್ ಸ್ವಾಮಿ ಇದೇ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರು. ಕಾಂಗ್ರೆಸ್ನಲ್ಲಿ 8 ಹಾಲಿ ಶಾಸಕರು ಮತ್ತೊಮ್ಮೆ ತಮ್ಮ ಅದೃಷ್ಟ ಪಣಕ್ಕಿಟ್ಟಿದ್ದಾರೆ. ಈ ಹಿಂದೆ ಕಾಂಗ್ರೆಸ್ನಿಂದ ಎಂಟು ಸಲ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್, ಇದೇ ಮೊದಲ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಇಲ್ಲಿದೆ ಅಭ್ಯರ್ಥಿಗಳ ಓದಿನ ವಿವರ : ವಿಧಾನಸಭೆ ಚುನಾವಣೆ ಯಲ್ಲಿ ಈ ಬಾರಿ ತಮ್ಮ ಅದೃಷ್ಟ ಪಣಕ್ಕೊಡ್ಡಿರುವ ಜಿಲ್ಲೆಯ ಬಿಜೆಪಿ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಬಹುತೇಕ ಅಭ್ಯರ್ಥಿಗಳು ಪದವೀಧರರು ಎಂಬುದು ಸಂತಸಕಾರಿ. 11 ಕ್ಷೇತ್ರಗಳಲ್ಲಿ ಈ ಪಕ್ಷಗಳ 33 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವ ರಲ್ಲಿ 25 ಅಭ್ಯರ್ಥಿಗಳು ವಿವಿಧ ಪದವಿ ಪಡೆದಿದ್ದಾರೆ. ಐವರು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿಲ್ಲ. ಮೂವರು ಪಿಯುವರೆಗೆ ಓದಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?!
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಅವರು ಎಂಬಿಬಿಎಸ್ ಓದಿದ್ದಾರೆ. ಯತೀಂದ್ರ ಅವರು ಒಂದು ಹೆಜ್ಜೆ ಮುಂದೆ ಹೋಗಿ ಎಂ.ಡಿ ಪದವಿ ಪುರಸ್ಕೃತರು. ಡಾ.ಮಹದೇವಪ್ಪ ಅವರು ಸಚಿವರಾದ ಮೇಲೆ ಎಂಬಿಬಿಎಸ್ ಪೂರ್ಣಗೊಳಿಸಿದ್ದು ವಿಶೇಷ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ವಿಶ್ವನಾಥ್, ಕೆ. ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಕಾನೂನು ಪದವಿ ಪಡೆ ದಿದ್ದಾರೆ. ಐವರು ವಿವಿಧ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ಹಾಗೂ ತಿ.ನರಸೀಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಎಂ.ಟೆಕ್ ಪದವೀಧರರು.
ಶಾಸಕ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಓದಿರುವುದು ಕೇವಲ ಎಂಟನೇ ತರಗತಿ. ಅವರು ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿ ವರೂ ಆಗಿದ್ದರು. ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಅವರು 9ನೇ ತರಗತಿ ಓದಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
ಪಿಎಚ್.ಡಿ ಪದವಿ ಪಡೆದಿರುವ ಏಕೈಕ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ. ಇನ್ನುಳಿದವರು ಬಿ.ಎ., ಬಿ.ಕಾಂ ಪದವೀಧರರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಬಿಬಿಎಂ ಓದಿದ್ದಾರೆ. ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಅವರು ಬಿ.ಇ ಜೊತೆಗೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಆಮ್ ಆದ್ಮಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಲವಿಕ ಗುಬ್ಬಿವಾಣಿ ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ ವ್ಯಾಸಂಗ ಮಾಡಿದ್ದಾರೆ.
ಪಿರಿಯಾಪಟ್ಟಣದಿಂದ ಜೆಡಿ ಯು ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹದೇವಸ್ವಾಮಿ ಆಯುರ್ವೇದ ವೈದ್ಯ. ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಎಂಇಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಬಸವರಾಜು ಮನೋ ವಿಜ್ಞಾನದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಮಾಜವಾದಿ ಪಕ್ಷದಿಂದ ಎನ್.ಆರ್.ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿ.ಎಂ.ನಟರಾಜ್ ಸಿವಿಲ್ ಎಂಜಿನಿಯರ್ನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಇದೇ ಕ್ಷೇತ್ರದಿಂದ ಎಂಇಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಂಗಳಗೌರಿ ಅವರು ಕೆಎಸ್ಒಯುನಲ್ಲಿ ಬಿ.ಎ.ದ್ವಿತೀಯ ಪದ ವಿವರೆಗೆ ವ್ಯಾಸಂಗ ಮಾಡಿದ್ದಾರೆ. ಒಟ್ಟಾರೆ ನಮ್ಮನ್ನಾಳುವ ಅಭ್ಯರ್ಥಿಗಳು ವಿಧ್ಯಾವಂತರಾಗಿರುವುದು ನಮ್ಮ ಹೆಮ್ಮೆ.