ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ಕೈಜೋಡಿಸಿವೆಯಾ ಬಿಜೆಪಿ-ಜೆಡಿಎಸ್?!
ಮೈಸೂರು, ಏಪ್ರಿಲ್ 28: ಕರ್ನಾಟಕ ವಿಧಾನಸಭೆ ಚುನಾವಣೆತಲ್ಲಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೋ ನಡೆಯುತ್ತಿದೆಯಾ..? ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಯಾ?
ಕೆಲವು ಮೂಲಗಳ ಪ್ರಕಾರ ಜೆಡಿಎಸ್ ನ ಹಲವು ಕಾರ್ಯಕರ್ತರು ಜೆಡಿಎಸ್ ಗೇ ಬೆಂಬಲ ನೀಡಿ ಎಂದು ಇಲ್ಲಿನ ಬಿಜೆಪಿ ಕಾರ್ಯಕರ್ತರನು ಕೇಳುತ್ತಿದ್ದಾರೆ. ನಮ್ಮಿಬ್ಬರ ಗುರಿಯೂ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ಆಗಿರುವುದರಿಂದ ನಮ್ಮನ್ನು ಬೆಂಬಲಿಸಿ ಎಂದು ಕಾರ್ಯಕರ್ತರು ಕೇಳುತ್ತಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಹುರಿಯಾಳು ಗೋಪಾಲ್ ರಾವ್ ಸಂದರ್ಶನ
ಆದರೆ ಇವೆಲ್ಲ ಕಾರ್ಯಕರ್ತರ ಮಟ್ಟದಲ್ಲಿ ಅಷ್ಟೇ. ಬಿಜೆಪಿ-ಜೆಡಿಎಸ್ ನ ಯಾವುದೇ ಮುಖಂಡರು ಈ ಕುರಿತು ಔಪಚಾರಿಕ ಚರ್ಚೆ ಮಾಡಿಲ್ಲ.
ಬಿಜೆಪಿ-ಜೆಡಿಎಸ್ ನಡುವೆ ಒಳ ಒಪ್ಪಂದ ಏರ್ಪಟ್ಟಿದೆಯಾ?
ಮೇಲ್ನೋಟಕ್ಕೆ ಬಿಜೆಪಿ-ಜೆಡಿಎಸ್ ನಡುವೆ ಒಳ ಒಪ್ಪಂದ ಏರ್ಪಟ್ಟಂತಿದೆ ಎಂಬುದು ಸಾಮಾನ್ಯನಿಗೂ ಬರುವ ಅನುಮಾನ. ಅದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿದ್ದರೂ, ಬಿಜೆಪಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಜೆಡಿಎಸ್ ನ ಜಿಟಿ ದೇವೇಗೌಡ ಕಳೆದ ಬಾರಿಯೂ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದವರು. ಒಕ್ಕಲಿಗರಾಗಿರುವ ಕಾರಣಕ್ಕೆ ಅವರಿಗೆ ಲಾಭವಾಗುವ ಸಂಭವ ಜಾಸ್ತಿ. ಆದರೆ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಗೋಪಾಲ ರಾವ್ ಮುಖ್ಯಮಂತ್ರಿ ಮತ್ತು ಜಿಟಿಡಿಯವರಂಥ ಘಟಾನುಘಟಿಗಳಿಗೆ ಸಮರ್ಥ ಸ್ಪರ್ಧೆ ನೀಡಬಲ್ಲರೆ ಎಂಬುದು ಈಗಿರುವ ಪ್ರಶ್ನೆ.
ಬಿಜೆಪಿ ತಮಗೆ ಬಹುದೊಡ್ಡ ಪ್ರತಿಸ್ಪರ್ಧಿ ಅಲ್ಲ ಎಂದ ಜಿಟಿಡಿ
ಬಿಜೆಪಿ ಅಭ್ಯರ್ಥಿಯನ್ನು ನಾವು ಬಹುದೊಡ್ಡ ಪ್ರತಿಸ್ಪರ್ಧಿ ಎಂದು ಭಾವಿಸಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ ಹೇಳಿದ್ದಾರೆ. 2013 ರ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಪಡೆದಿದ್ದು ಕೇವಲ 8000 ಮತಗಳನ್ನು ಮಾತ್ರ. ಆದ್ದರಿಂದ ನಮ್ಮ ಗಮನವೇನಿದ್ದರೂ ಸಿದ್ದರಾಮಯ್ಯ ಅವರನ್ನು ಸೋಲಿಸುವುದರತ್ತ ಎಂದು ಜಿಟಿಡಿ ಹೇಳಿದ್ದಾರೆ. ಜಿಟಿಡಿ ಅವರ ಪರ ಇಲ್ಲಿ ಸಾಕಷ್ಟು ಉತ್ತಮ ಅಭಿಪ್ರಾಯವಿದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ದುಬಾರಿಯಾದೀತು ಎಂದೇ ಅವರು ಬಾದಾಮಿಯನ್ನೂ ಈಗ ಆಯ್ಕೆ ಮಾಡಿಕೊಂಡಿದ್ದಾರೆ.
ಬಿಜೆಪಿಗೆ ಮತ ಬಿದ್ದಷ್ಟೂ ಸಿದ್ದರಾಮಯ್ಯಗೆ ಲಾಭ!
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಬಿದ್ದಷ್ಟೂ ಲಾಭವಾಗುವುದು ಸಿದ್ದರಾಮಯ್ಯನವರಿಗೇ! ಅಕಸ್ಮಾತ್ ಬಿಜೆಪಿ-ಜೆಡಿಎಸ್ ಗಳು ಈ ಕ್ಷೇತ್ರದಲ್ಲಿ ಮೈತ್ರಿ ಮಾಡಿಕೊಂಡು ಬಹಿರಂಗವಾಗಿ 'ನಮ್ಮ ಬೆಂಬಲ ಜಿಟಿಡಿಗೇ' ಎಂದಿದ್ದರೆ ಆಗ ಸಿದ್ದರಾಮಯ್ಯ ಅವರಿಗೆ ನಷ್ಟವಾಗುತ್ತಿತ್ತು. ಆದರೆ ಹಾಗೆ ಹೇಳುವುದರಿಂದ ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂಬುದನ್ನೇ ಇಟ್ಟುಕೊಂಡು ಕಾಂಗ್ರೆಸ್ ಎಲ್ಲೆಡೆ ಪ್ರಚಾರ ಮಾಡುವ ಭೀತಿ ಇದ್ದಿದ್ದರಿಂದ ಬಿಜೆಪಿ ಹಾಗೆ ಮಾಡದೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಬಿಜೆಪಿ ಅಭ್ಯರ್ಥಿಯತ್ತ ಮತದಾರ ಒಲು ತೋರಿಸಿದಷ್ಟೂ ಲಾಭವಾಗುವುದು ಕಾಂಗ್ರೆಸ್ಸಿಗೇ ಆದ್ದರಿಂದ ಜೆಡಿಎಸ್ ಬಿಜೆಪಿ ಬೆಂಬಲವನ್ನು ಒಳಗೊಳಗೇ ಬಯಸುತ್ತಿರುವುದು ಸುಳ್ಳಲ್ಲ.
ಬಿಜೆಪಿ ಪ್ರತಿಕ್ರಿಯೆ ಏನು?
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಗೋಪಾಲ ರಾವ್, 'ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಒಳ ಒಪ್ಪಂದ ಏರ್ಪಟ್ಟಿಲ್ಲ. ಚುನಾವಣೆ ಸಮಯದಲ್ಲಿ ಇಂಥ ವದಂತಿಗಳು ಸಾಮಾನ್ಯ. ನಾನು ಕಳೆದ 55 ವರ್ಷಗಳಿಂದ ಒಂದೇ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ದಾಹಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವವನು ನಾನಲ್ಲ. ನನ್ನದೇನಿದ್ದರೂ ಜನಸೇವೆಯ ದಾಹ. ಈ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಜನರೊಂದಿಗೆ ಒಡನಾಡಿದ್ದೇನೆ. ಜನರು ಮತಹಾಕುತ್ತಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.