"ಉಚಿತ ಆರೋಗ್ಯ ಸೇವೆಯ 'ಸಾರ್ವತ್ರಿಕ ಆರೋಗ್ಯ' ಶೀಘ್ರದಲ್ಲೇ ಜಾರಿ"
ಮೈಸೂರು, ನವೆಂಬರ್ 25: ರಾಜ್ಯದ ಪ್ರತಿಯೊಬ್ಬರಿಗೂ ಸರ್ಕಾರದಿಂದ ಉಚಿತ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ 'ಸಾರ್ವತ್ರಿಕ ಆರೋಗ್ಯ' ಯೋಜನೆಯನ್ನು ಅನುಷ್ಠಾನಗೊಳಿಸಲು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕೆಪಿಎಂಇ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರ
ನ.24 ರಂದು ಕಣಿಯನಹುಂಡಿಯಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಕಾರ್ಗಳ್ಳಿ ಬಸವೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಅರೋಗ್ಯ ಸೇವೆ ನೀಡಲು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬಿ.ಪಿ.ಎಲ್ ಕಾರ್ಡುದಾರರಿಗೆ ಯಾವುದೇ ಹಣ ಪಾವತಿಸುವ ಅವಶ್ಯಕತೆ ಇಲ್ಲ.ಇನ್ನುಳಿದವರು ಗ್ರಾಮೀಣ ಭಾಗದವರು ರೂ. 300/- ಹಾಗೂ ನಗರ ಪ್ರದೇಶದವರು ಪ್ರತಿ ವರ್ಷ ರೂ. 700/- ಪಾವತಿಸಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರಗಳಲ್ಲೂ ಉಚಿತ ಸೇವೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಬಡತನವನ್ನು ನೀಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿ, ಪ್ರತಿ ಲೀಟರ್ ಹಾಲಿಗೆ 5 ರೂ. ಸಬ್ಸಿಡಿ, ವಾರದಲ್ಲಿ 5 ದಿನ ಶಾಲಾ ಮಕ್ಕಳಿಗೆ ಹಾಲು, ಮೈತ್ರಿ , ಮನಸ್ವಿನಿ, ಕೃಷಿ ಭಾಗ್ಯ, ಪಶು ಭಾಗ್ಯ ಸೇದಿದಂತೆ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು.
ರೈತರ ಕಷ್ಟಗಳನ್ನು ನೀಗಿಸುವ ಉದ್ದೇಶದಿಂದ ರೈತರ 50,000/- ರೂ ಸಾಲವನ್ನು ಸರ್ಕಾರದಿಂದ ಮನ್ನಾ ಮಾಡಲಾಗಿದೆ. ಇದಕ್ಕಾಗಿ 8155 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರತಿ ಹೋಬಳಿಯಲ್ಲೂ ಮೊರಾರ್ಜಿ ದೇಸಾಯಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು, ಹಂಪಾಪುರ ಹೋಬಳಿಯಲ್ಲೂ ಸಹ ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಕಾವೇರಿ ನೀರಾವರಿ ನಿಗಮದ ವತಿಯಿಂದ ಹಂಪಾಪುರ ಹೋಬಳಿ ಸೇರಿದಂತೆ ಮೈಸೂರಿನಲ್ಲಿ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದು ಟೆಂಡರ್ ಕರೆದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಅದಕ್ಕೆ ಆಸ್ಪತ್ರೆ ಕಟ್ಟಿಸ್ತಾ ಇದ್ದೀನಿ : ಸಿಎಂ
ನಂಬಿಕೆ, ಮೂಢನಂಬಿಕೆ, ಅಪನಂಬಿಕೆ ಎಂದು ಮೂರು ವಿಧಗಳಿವೆ. ದೇವರಲ್ಲಿ ನಂಬಿಕೆ ಇರಬೇಕು, ದೇವರು ಎಲ್ಲೆಲ್ಲೂ ನೆಲೆಸಿರುತ್ತಾನೆ. ಪ್ರತಿಯೊಬ್ಬರನ್ನೂ ಪ್ರೀತಿಸುವ ಪ್ರವೃತ್ತಿ ಬೆಳಸಿಕೊಳ್ಳಿ. ಮೂಢನಂಬಿಕೆ ಒಳ್ಳೆಯದಲ್ಲ , ಅಪನಂಬಿಕೆ ಅದಕ್ಕಿಂತ ಕೆಟ್ಟದ್ದು, ಇವೆರಡನ್ನು ದೂರವಿಡಿ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ದ್ರುವನಾರಾಯಣ್, ಶಾಸಕ ವಾಸು, ಮಾಜಿ ಶಾಸಕ ಸತ್ಯನಾರಾಯಣ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೀತಾರಾಂ, ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. (ಕರ್ನಾಟಕ ವಾರ್ತೆ)