ಕೆಪಿಎಂಇ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರ
ಬೆಳಗಾವಿ, ನವೆಂಬರ್ 23 : ನಿನ್ನೆ (ನವೆಂಬರ್ 22)ರಂದು ವಿಧಾನಸಭೆಯಲ್ಲಿ ಅನುಮೋದನೆಯಾಗಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ ಇಂದು ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಯಿತು.
ಅಂಗೀಕಾರಕ್ಕೆ ಮುಂಚೆ ವಿಧಾನಪರಿಷತ್ ನಲ್ಲಿ ಕಾಯ್ದೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಇದು ಯಾರ ವಿರುದ್ಧವೋ ತಂದ ಕಾಯ್ದೆಯಲ್ಲ, ಜನಗಳಿಗಾಗಿ ತಂದ ಕಾಯ್ದೆ. ಜನರಿಗೆ ಇಂತಹಾ ಕಾಯ್ದೆಯೊಂದರ ಅವಶ್ಯಕತೆ ಇತ್ತು ಎಂದು ತಾವು ತಂದ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ನಂತರ ಮಾತನಾಡಿದ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ತಾವು ಕಾಯ್ದೆಯನ್ನು ಸ್ವಾಗತಿಸುವುದಾಗಿ ಹೇಳಿದರಾದರೂ ಕಾಯ್ದೆ ಇನ್ನಷ್ಟು ಗಟ್ಟಿಯಾಗಿರಬೇಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
"ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದ ವೇಳೆ ವೈದ್ಯರ ರಕ್ಷಣೆಗೆ ಅಂತ ಒಂದು ಕಾನೂನು ತಂದಿದ್ದೆ. ಆದರೆ ಈಗ ವಿಧೇಯಕ್ಕೆ ತಿದ್ದುಪಡಿ ಮಾಡಿದ ಮೇಲೆ ವಿಧೇಯಕ ಹಲ್ಲಿಲ್ಲದ ಹಾವಾಗಿದೆ, ಬುಸ್ ಅನ್ನುತ್ತೆ ಆದರೆ ಕಚ್ಚಲ್ಲ' ಎಂದು ಅವರು ಹೇಳಿದರು.
ವೈದ್ಯರ ಪರವಾಗಿ ಮಾತನಾಡಿದ ರಾಮಚಂದ್ರೇಗೌಡ ಅವರು "ನಮ್ಮಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಆಡುವ ವೈದ್ಯರಿಲ್ಲ ಎಂದು ನಂಬಿದ್ದೇನೆ, ಆದರೆ ವೈದ್ಯಕೀಯ ಸಂಸ್ಥೆಗಳು ಕೋಟ್ಯಾಂತರ ಹಣ ವಸೂಲಿ ಮಾಡುತ್ತಿವೆ' ಎಂದರು.
ತಮ್ಮೊಡನೇ ಆಗಿದ್ದ ವೈಯಕ್ತಿಕ ಅನುಭವವನ್ನು ಸದನದ ಮುಂದಿಟ್ಟ ರಾಮಚಂದ್ರೇಗೌಡ ಅವರು "ಒಮ್ಮೆ ಕಾರ್ ಡ್ರೈವರ್ ಗೆ ಅಪಘಾತ ಆಗಿತ್ತು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಧಾಖಲಿಸಿದೆ, ಆಸ್ಪತ್ರೆಯವರು ಡ್ರೈವರ್ ಹೆಲ್ತ್ ಇನ್ಸುರೆನ್ಸ್ ಇದೆಯಾ ಅಂತ ಕೇಳಿದ್ರು, ಇಲ್ಲ ಅಂದಿದ್ದಕ್ಕೆ ಗಾಯಕ್ಕೆ ಔಷದಿ ಹಚ್ಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು' ಎಂದು ಖಾಸಗಿ ಆಸ್ಪತ್ರೆಗಳ ಧನದಾಹಿತನವನ್ನು ಜಾಹೀರು ಮಾಡಿದರು.
ನಂತರ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ ಅವರು 'ವೈದ್ಯರ ಮೇಲೆ ವಿಧೇಯಕ ತರುವುದಕ್ಕಿಂತಲೂ ವೈದ್ಯಕೀಯ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ವಿಧೇಯಕಕ್ಕೆ ತಿದ್ದುಪಡಿ ಮಾಡಿ' ಎಂದು ಸಲಹೆ ನೀಡಿದರು.
ಮುಂದೆ ಮಾತನಾಡಿ, ಮನುಷ್ಯನ ಪ್ರಾಣ ಉಳಿಸಬೇಕಾದವರು ಧನದಾಹಿಗಳಾಗಿದ್ದಾರೆ. ಎಲ್ಲಾ ವೈದ್ಯರನ್ನೂ ಒಂದೇ ಲೆಕ್ಕದಲ್ಲಿ ಅಳೆಯಲು ಆಗಲ್ಲ. ವೈದ್ಯೋ ನಾರಾಯಣೋ ಹರಿ ಎಂಬ ಅನೇಕ ಒಳ್ಳೆ ವೈದ್ಯರಿದ್ದಾರೆ, ಜನ ಖಾಸಗಿ ಆಸ್ಪತ್ರೆಗೆ ಯಾಕೆ ಹೋಗ್ತಾರೆ ಅನ್ನೊದರ ಬಗ್ಗೆ ಒಂದು ಅದ್ಯಯನ ಮಾಡಬೇಕಿದೆ. ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವರ್ತನೆಯಂತೂ ಭಯ ಹುಟ್ಟಿಸುತ್ತೆ. ಸರ್ಕಾರಿ ಆಸ್ಪತ್ರೆ ವೈದ್ಯರೇ ಒಂದೊಂದು ಖಾಸಗಿ ಆಸ್ಪತ್ರೆ ಇಟ್ಟಕೊಂಡಿದ್ದಾರೆ ಎಂದು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.