ಅಷ್ಟಮಂಗಲ ಪರಿಹಾರ, ಫೆ.7 ಮತ್ತು 8 ಹೋಮ-ಹವನ
ಮೈಸೂರು, ಫೆಬ್ರವರಿ,03: ಅಷ್ಟಮಂಗಲ ಪ್ರಶ್ನೆ ದೋಷ ಪರಿಹಾರಕ್ಕಾಗಿ ಫೆಬ್ರವರಿ 7 ಮತ್ತು 8 ರಂದು ಕಪಿಲಾ ನದಿ ತೀರದಲ್ಲಿರುವ ಶ್ರೀ ದತ್ತಾತ್ರೇಯ ಸ್ವಾಮಿ ದೇವಾಲಯದಲ್ಲಿ ಮಹಾರುದ್ರ ಹಾಗೂ ಚಂಡಿಕಾ ಹೋಮ ನಡೆಸಲಾಗುತ್ತಿದೆ. ಬಳಿಕ ಅಷ್ಟಬಂಧನ ಪೂಜೆ ನೆರವೇರಲಿದೆ ಎಂದು ತಿಳಿದು ಬಂದಿದೆ.
ಅಷ್ಟಮಂಗಲ ದೋಷಾ ಪರಿಹಾರ ಕುರಿತು ನಡೆಯುತ್ತಿರುವ ಪೂಜಾ ಕೈಂಕರ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್ ಅವರು, 'ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಕ್ಕಾಗಿ ಕೈಗೊಂಡಿರುವ ಧಾರ್ಮಿಕ ಪೂಜೆಯ ಪ್ರಾಯೋಜಕತ್ವವನ್ನು ಟಿವಿಎಸ್ ಸಂಸ್ಥೆ ವಹಿಸಿದ್ದು, ಇದರ ಖರ್ಚು ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ' ಎಂದು ತಿಳಿಸಿದ್ದಾರೆ.[ನಂಜನಗೂಡಲ್ಲಿ ಅಷ್ಟಮಂಗಲ ಪರಿಹಾರ ಪೂಜೆ]
'ದಕ್ಷಿಣ ಕಾಶಿ' ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ನಂಜುಂಡೇಶ್ವರ ಮುನಿದಿದ್ದಾನೆಯೇ? ಈ ಪ್ರಶ್ನೆಗಳು ಭಕ್ತರನ್ನು ಕಾಡುತ್ತಿದ್ದು, ಇದೀಗ ನಂಜುಂಡೇಶ್ವರನ ಸನ್ನಿಧಾನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆಗಳ ಪರಿಹಾರ ಸಂಬಂಧದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಪುಷ್ಠಿ ನೀಡುತ್ತಿವೆ.
ಕೆಲವು ತಿಂಗಳ ಹಿಂದೆ ಕೇರಳ ಮೂಲದ ನಾರಾಯಣ ನಂಬೂದಿರಿ ತಂತ್ರಿ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ಈ ಸಂದರ್ಭ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಧಾರ್ಮಿಕ ಕೈಂಕರ್ಯಗಳು, ಪೂಜಾ ಪುರಸ್ಕಾರಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂಬುದು ಸೇರಿದಂತೆ ಹಲವು ದೋಷಗಳು ಕಂಡು ಬಂದಿತ್ತಾದರೂ ಕೆಲವು ಸಂಗತಿಯನ್ನು ಗೌಪ್ಯವಾಗಿಡಲಾಗಿತ್ತು.[ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]
ಈ ಹಿನ್ನಲೆಯಲ್ಲಿ ನಾರಾಯಣ ನಂಬೂದಿರಿ ತಂತ್ರಿ ನೇತೃತ್ವದಲ್ಲಿ ಐವರು ಪುರೋಹಿತರ ಮಾರ್ಗದರ್ಶನದೊಂದಿಗೆ ಅಷ್ಟಮಂಗಲ ದೋಷ ನಿವಾರಣಾ ಧಾರ್ಮಿಕ ಪೂಜಾಕಾರ್ಯವನ್ನು ಅಷ್ಟಮಂಗಲ ಪ್ರಶ್ನೆಗಳಿಗೆ ಪರಿಹಾರದ ಸಲುವಾಗಿ ಮಾಡಲಾಗುತ್ತಿದೆ ಎನ್ನಲಾಗಿದೆ.
ಧಾರ್ಮಿಕ ಪೂಜಾ ಕಾರ್ಯದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್, ನೀಲಕಂಠ ದೀಕ್ಷಿತ್, ಕೃಷ್ಣ ದೀಕ್ಷಿತ್, ನರಸಿಂಹ ಅಯ್ಯಂಗಾರ್, ಮುರಳಿ ಶ್ರೀವತ್ಸ ಮುಂತಾದವರು ಪಾಲ್ಗೊಂಡಿದ್ದಾರೆ.