ಮಂಗಳೂರಿನಲ್ಲಿ ಅಂಡರ್ ಪಾಸ್ ಉದ್ಘಾಟನೆಗೆ ಮುನ್ನವೇ ಕುಸಿದ ರಸ್ತೆ
ಮಂಗಳೂರು, ಜೂನ್ 10: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಡೀಲ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡನೇ ರೈಲ್ವೆ ಅಂಡರ್ಪಾಸ್ ಇನ್ನೇನು ಉದ್ಘಾಟನೆಗೊಂಡು ಜನರ ಬಳಕೆಗೆ ತೆರೆದುಕೊಳ್ಳುವುದಿತ್ತು. ಆದರೆ ಅದಕ್ಕೂ ಮೊದಲೇ, ರಸ್ತೆಯ ಮಧ್ಯದಲ್ಲಿ ಒಂದು ದೊಡ್ಡ ಹೊಂಡ ನಿರ್ಮಾಣವಾಗಿದೆ. ಅಂಡರ್ ಪಾಸ್ ಉದ್ಘಾಟನೆಗೊಳ್ಳದಿರುವುದು ಭಾರೀ ಅನಾಹುತವನ್ನೇ ತಪ್ಪಿಸಿದೆ.
ಕಳೆದ ಎರಡು ವರ್ಷಗಳಿಂದ ಅಂಡರ್ಪಾಸ್ನ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇನ್ನು ಎರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಹೀಗಾಗಿ ಉದ್ಘಾಟನೆಗೆಂದು ತಯಾರಿ ನಡೆದಿತ್ತು. ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿತ್ತು. ಈ ಸಮಯ ರೋಲರ್ ನಲ್ಲಿ ರಸ್ತೆ ಮೇಲ್ಮೈಯನ್ನು ಸಮತಟ್ಟುಗೊಳಿಸುವ ವೇಳೆ ಡಾಂಬರು ಕುಸಿದು ರಸ್ತೆಯಲ್ಲಿ ಸುಮಾರು ಮೂರು ಅಡಿ ಆಳದ ಹೊಂಡ ನಿರ್ಮಾಣವಾಗಿದೆ.
ಭುಗಿಲೆದ್ದ ವಿವಾದ; ಯಲಹಂಕ ಫ್ಲೈ ಓವರ್ ಉದ್ಘಾಟನೆ ಮೂಂದೂಡಿಕೆ
ಅಂಡರ್ ಪಾಸ್ ನ ಒಳಗೆ ಒಳಚರಂಡಿ ಹಾದುಹೋಗಿರುವುದನ್ನು ಗಮನಿಸದೆ ರಸ್ತೆ ಕಾಮಗಾರಿ ನಡೆಸಿದ್ದರಿಂದ ರಸ್ತೆ ಕುಸಿತವಾಗಿದೆ ಎನ್ನಲಾಗಿದೆ. ರಸ್ತೆಯಲ್ಲಿ ಕುಸಿತ ಉಂಟಾಗಿರುವುದರಿಂದ ಅಂಡರ್ಪಾಸ್ ಉದ್ಘಾಟನೆಯನ್ನು ಮುಂದೂಡಲಾಗಿದೆ. ಸಮಸ್ಯೆಯ ಮೂಲವನ್ನು ಕಂಡುಹಿಡಿಯಲು ಮತ್ತೆ ರಸ್ತೆಯನ್ನು ಅಗೆಯಬೇಕಾಗಿದ್ದು, ಒಳಚರಂಡಿ ಮೇಲೆ ಚಪ್ಪಡಿಗಳನ್ನು ಸರಿಪಡಿಸಿ ಮತ್ತೆ ಡಾಂಬರು ಹಾಕಿ ಕಾಮಗಾರಿ ನಡೆಸಬೇಕಿದೆ.
ರಾಷ್ಟ್ರೀಯ ಹೆದ್ದಾರಿ 75ರ ಪಡೀಲ್ ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಾಣವಾಗುತ್ತಿದೆ. ಈ ಅಂಡರ್ ಪಾಸ್ ಕಾಮಗಾರಿ ನಿರ್ವಹಿಸಿದವರು ಯಾರು ಎಂಬ ಬಗ್ಗೆಯೇ ಗೊಂದಲವಿದೆ. ರೈಲ್ವೆ ಅಧಿಕಾರಿಗಳು ಈ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದರೆ, ರೈಲ್ವೇ ಇಲಾಖೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಮಾಡಿದೆ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿವೆ.