ಮಂಗಳೂರಲ್ಲಿ ವಿಜಯೋತ್ಸವ ಆಚರಿಸಿದ ಪ್ರಧಾನಿ ಮೋದಿ
ಮಂಗಳೂರು, ಡಿಸೆಂಬರ್ 19: ಗುಜರಾತ್ ಹಾಗು ಹಿಮಾಚಲ ಪ್ರದೇಶದ ಗೆಲುವಿನ ವಿಜಯೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಆಚರಿಸಿದ್ದಾರೆ. ಇಂದು(ಡಿ.19) ಲಕ್ಷದ್ವೀಪಕ್ಕೆ ತೆರಳಲಿರುವ ಮೋದಿ, ನಿನ್ನೆ ಮಾರ್ಗಮಧ್ಯೆ ಮಂಗಳೂರಿಗೆ ಆಗಮಿಸಿದ್ದರು. ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಹಸ್ರಾರು ಬಿಜೆಪಿ ಕಾರ್ಯಕರ್ತರೊಂದಿಗೆ ವಿಜಯೋತ್ಸವದ ಸಂಭ್ರಮದಲ್ಲಿ ಭಾಗಿಯಾದರು. ಗುಜರಾತ್ ಹಾಗು ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಮಂಗಳೂರಿಗೆ ಆಗಮಿಸುವ ಮೂಲಕ ಮುಂದಿನ ಟಾರ್ಗೆಟ್ ಕರ್ನಾಟಕ ಎಂಬುದರ ಮುನ್ಸೂಚನೆ ನೀಡಿದ್ದಾರೆ.
ರಾತ್ರಿ ಸುಮಾರು 11:40 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.ಪ್ರಧಾನಿ ನರೇಂದ್ರ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೇಂದ್ರ ನೌಕಾಯಾನ ರಾಜ್ಯ ಸಚಿವ ಪಿ. ರಾಧಾಕೃಷ್ಣನ್, ಸಂಸದ ನಳಿನ್ ಕುಮಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕ ಎಸ್. ಅಂಗಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತಿತರರು ಸ್ವಾಗತಿಸಿದರು.
In Pics : ಗುಜರಾತ್, ಹಿಮಾಚಲ ಪ್ರದೇಶ ಗೆಲುವು: ಮಂಗಳೂರಿನಲ್ಲಿ ಮೋದಿ ವಿಜಯೋತ್ಸವ

ವಿಮಾನ ನಿಲ್ದಾಣ ದಿಂದ ಮೋದಿ ಹೊರಬರುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಈ ನಡುವೆ ಗುಜರಾತ್ ಹಾಗು ಹಿಮಾಚಲ ಪ್ರದೆಶದ ಚುನಾವಣೆಯ ಗೆಲುವಿನ ವಿಜಯೋತ್ಸವ ಆಚರಣೆಯಲ್ಲಿ ಮೋದಿ ಪಾಲ್ಗೊಂಡರು.
ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಿಮಾನ ನಿಲ್ದಾಣ ಆವರಣದಲ್ಲಿ ಸೇರಿದ್ದರು. ಓಖಿ ಚಂಡಮಾರುತ ಸಂತ್ರಸ್ತರಿಗೆ ಸಾಂತ್ವನ ಹೇಳುವುದಕ್ಕಾಗಿ ಲಕ್ಷದ್ವೀಪಕ್ಕೆ ತೆರಳಲಿದ್ದ ಪ್ರಧಾನಿ, ಮಂಗಳೂರಿಗೆ ಆಗಮಿಸಿ, ತಂಗಿದ್ದು ಬಿಜೆಪಿ ಕಾರ್ಯಕರ್ತರಿಗೆ ಮುಂದಿನ ಟಾರ್ಗೆಟ್ ಕರ್ನಾಟಕ ಚುನಾವಣೆ ಎನ್ನುವ ಸುಳಿವನ್ನು ನೀಡಿದ್ದಾರೆ. ಅತ್ತ ಎರಡು ರಾಜ್ಯಗಳ ಚುನಾವಣೆ ಫಲಿತಾಂಶದಂದೇ ಮೋದಿ ಕರ್ನಾಟಕದ ಮಂಗಳೂರಿಗೆ ಕಾಲಿಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ.












Click it and Unblock the Notifications