ಈ ಗೆಲುವು ಅಭಿವೃದ್ಧಿ ರಾಜಕೀಯಕ್ಕೆ ಸಿಕ್ಕ ಮನ್ನಣೆ: ಮೋದಿ
ನವದೆಹಲಿ, ಡಿಸೆಂಬರ್ 18: ಗುಜರಾತ್, ಹಿಮಾಚಲ ಪ್ರದೇಶದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಹೇಳಿದರು.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನ ಬದಲಾವಣೆಗೆ ತೆರೆದುಕೊಳ್ಳುತ್ತಿದೆ, ಜನರಿಗೆ ಬಿಜೆಪಿಯ ವಿಕಾಸವಾದದಲ್ಲಿ ನಂಬಿಕೆ ಇದೆ ಎನ್ನುವುದಕ್ಕೆ ಈ ಗೆಲುವು ಸಾಕ್ಷಿ ಎಂದು ಅವರು ಹೇಳಿದರು.
ಅಮಿತ್ ಷಾ, ಸುಷ್ಮಾ ಸ್ವರಾಜ್, ರಾಜನಾಥ ಸಿಂಗ್, ಅರುಣ್ ಜೇಟ್ಲಿ, ಕರ್ನಾಟಕದ ಅನಂತ್ ಕುಮಾರ್ ಅವರುಗಳಂತಹಾ ಪ್ರಮುಖ ನಾಯಕರು ಹಾಜರಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಎಸ್ಟಿ ನಂತರ ಬಿಜೆಪಿ ಮುಳುಗುತ್ತದೆ ಎಂದೇ ಬುದ್ಧಿಜೀವಿಗಳು, ವಿಪಕ್ಷಗಳು ಎಲ್ಲೆಡೆ ಪ್ರಚಾರ ಮಾಡಿದ್ದರು ಆದರೆ ಜನಕ್ಕೆ ಗೊತ್ತು ಯಾರು ವಿಕಾಸದ ಪರ ಇದ್ದಾರೆ ಎಂದು ಅವರಿಗೇ ಮತ ಹಾಕಿದ್ದಾರೆ ಎಂದರು.

ಜನರ ಒಪ್ಪಿಗೆಯ ಮುದ್ರೆ ಇದು
ಜಿಗ್ನೇಶ್ ಮೆವಾನಿ, ಹಾರ್ದಿಕ್ ಪಟೇಲ್, ಅಲ್ಪೇಶ್ ಅವರುಗಳ ಹೆಸರು ಹೇಳದೇ ಟಾಂಗ್ ನೀಡಿದ ಮೋದಿ, ಕಾಂಗ್ರೆಸ್ ಈ ಭಾರಿ ಜಾತಿ ರಾಜಕೀಯದಂತಹಾ ಹೀನ ರಾಜಕೀಯಕ್ಕೆ ಇಳಿದಿತ್ತು, ಆದರೆ ವಿಕಾಸ ರಾಜಕಾರಣದ ಮುಂದೆ ಅದರ ತಂತ್ರ ಫಲಿಸಲಿಲ್ಲ. ಈ ಗೆಲುವು ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಜನ ಒತ್ತಿರುವ ಒಪ್ಪಿಗೆಯ ಮುದ್ರೆ ಎಂದರು.
ಗುಜರಾತಿಗಳೇ ಹುಷಾರಾಗಿರಿ, ಕೆಲವು ಜನ ನಿಮ್ಮ ನಡುವೆ ಜಾತೀವಾದ ಬಿತ್ತಲು ಬಂದಿದ್ದಾರೆ ಅವರ ಷಡ್ಯಂತ್ರಕ್ಕೆ ಬಲಿಯಾಗಬೇಡಿ. ಬಿಜೆಪಿ ವಿರುದ್ಧ ಅವರು ಮಾಡಿದ ಷಡ್ಯಂತ್ರ ವಿಫಲವಾಗಿದೆ ಆದರೆ ಅವರು ಸುಮ್ಮನಿರುವುದಿಲ್ಲ ಮತ್ತೆ ಬರುತ್ತಾರೆ ನೀವು ಜಾಗೃತರಾಗಿರಿ ಎಂದು ಜಾತಿ ಹಕ್ಕು ಹೋರಾಟವನ್ನು ಮುಂದಿಟ್ಟುಕೊಂಡಿರುವ ಹಾರ್ದಿಕ್ ಪಟೇಲ್ ಹಾಗೂ ಜಿಗ್ನೇಶ್ ಮೆವಾನಿ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಮತ
ಹಿಮಾಚಲ ಪ್ರದೇಶದ ಜನ ಭ್ರಷ್ಟಾಚಾರದ ವಿರುದ್ಧ ಮತ ಹಾಕಿದ್ದಾರೆ, ಹೇಗಾದರೂ ಆಡಳಿತ ಮಾಡಬಹದು ಎಂಬ ಯುಗ ಹಿಂದಿತ್ತು ಈಗಿಲ್ಲ, ಜನಗಳ ಆಶೋತ್ತರಗಳಿಗೆ ಸ್ಪಂದಿಸದ ಸರ್ಕಾರಗಳನ್ನು ಜನ ಕಿತ್ತೊಗೆಯುತ್ತಾರೆ ಎಂಬುದು ಹಿಮಾಚಲ ಪ್ರದೇಶದಲ್ಲಿ ಸಾಬೀತಾಗಿದೆ ಎಂದರು.

ಸಾಮಾನ್ಯ ಗೆಲುವಲ್ಲ ಇದು
ಯಾವುದಾದರು ಒಂದು ಪಕ್ಷ 5 ವರ್ಷ ಅಧಿಕಾರ ಪೂರೈಸಿ ಮತ್ತೆ ಅಧಿಕಾರಕ್ಕೆ ಬಂದರೆ ಅದೇ ದೊಡ್ಡ ಸಾಹಸವೆಂಬಂತೆ ಸಂಪಾದಕೀಯಗಳು ಬರೆಯಲಾಗುತ್ತದೆ. ಆದರೆ ಗುಜರಾತ್ ನಲ್ಲಿ ಸತತ 6 ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅದೂ ಕೂಡ ಪ್ರತಿ ಬಾರಿ ವಿಕಾಸ, ಅಭಿವೃದ್ಧಿಗಳನ್ನು ಧ್ಯೇಯವಾಗಿರಿಸಿಕೊಂಡೇ ಅಧಿಕಾರಕ್ಕೆ ಬಂದಿದೆ ಎಂದರು.
ಗುಜರಾತ್ ರಾಜ್ಯ ಇಡೀಯ ದೇಶಕ್ಕೆ ವಿಕಾಸವಾದದ ಬಾಗಿಲು ತೆರೆದಿದೆ, ನಮ್ಮ ಹೋರಾಟ ಪ್ರಾರಂಭವಾಗಿದ್ದು ಇಲ್ಲಿಂದಲೇ, ದೇಶದಲ್ಲಿ ಬದಲಾವಣೆಗೆ ಶ್ರೀಕಾರ ಹಾಕಿದ್ದು ಗುಜರಾತ್ನಿಂದಲೇ ಎಂದರು.

ನನ್ನ ನಂತರವೂ ಅಭಿವೃದ್ಧಿ ಕುಂಠಿತವಾಗಿಲ್ಲ
ಮನೆಯ ಮುಖ್ಯಸ್ಥ ಹೋದ ಮೇಲೆ ಮನೆ ಮುರಿಯುತ್ತದೆ ಎಂದೆಲ್ಲಾ 3 ವರ್ಷದ ಹಿಂದೆ ಮಾತನಾಡಿದ್ದರು. ಮೋದಿ ಇಲ್ಲದ ಗುಜರಾತ್ ನಲ್ಲಿ ಬಿಜೆಪಿ ಜಾಗವಿಲ್ಲ ಎಂದೆಲ್ಲಾ ಮಾತನಾಡಿದ್ದರು. ಆದರೆ ನನ್ನ ಗೆಳೆಯರು ಗುಜರಾತ್ನಲ್ಲಿ ಬಿಜೆಪಿಯ ಬೇರು ಇನ್ನೂ ಗಟ್ಟಿ ಮಾಡಿದ್ದಾರೆ ಇದು ನನಗೆ ಡಬಲ್ ಖುಷಿ ಒದಗಿಸಿದೆ ಎಂದರು.
ನನ್ನ ನಂತರ ಬಂದ ನಾಯಕರು ಪಕ್ಷಕ್ಕೆ ನಾಯಕತ್ವ ಒದಗಿಸಿದರು, ಎಲ್ಲ ಕಾರ್ಯಕರ್ತರನ್ನೂ ಒಗ್ಗಟ್ಟಾಗಿ ಅಭಿವೃದ್ಧಿಯ ಕಡೆಗೆ ಕರೆದುಕೊಂಡು ಹೋದರು. ಜನರ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿದರು ಎಂದರು.

ಬಿಜೆಪಿ ಇನ್ನೂ ಶಕ್ತಿ ಹೆಚ್ಚಿಸಿಕೊಳ್ಳಲಿದೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಹಾಡಿ ಹೊಗಳಿದ ಮೋದಿ ಅವರು "ಅಮಿತ್ ಷಾ ಅವರ ಕೌಶಲ್ಯ, ಯೋಜನೆ, ಶಕ್ತಿಶಾಲಿ, ಮುಂದಾಲೋಚನೆ, ಸಂಘಟನಾ ಚತುರತೆ, ಅವಿರತ ದುಡಿತದಿಂದಾಗಿ ದೇಶದಲ್ಲಿ ಬಿಜೆಪಿ ತನ್ನ ಹರಿವು ಹೆಚ್ಚಿಸಿಕೊಳ್ಳುತ್ತಿದೆ ಎಂದರು.












Click it and Unblock the Notifications