'ಹಸಿರು ಸಾರಿಗೆ ಕಾರಿಡಾರ್': ಬೆಂಗಳೂರು ಮೆಟ್ರೋದಿಂದ 2 ಲಕ್ಷ ಸಸಿ ನೆಡುವ ಅಭಿಯಾನ ಆರಂಭ, ಎಲ್ಲೆಲ್ಲಿ?
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ಕಾಮಗಾರಿಗಳಿಗಾಗಿ ಬೆಳೆದು ನಿಂತ ಮರಗಳಿಗೆ ಕೊಡಲಿ ಹಾಕಲಾಗುತ್ತಿದೆ. ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವ ಪರಿಸರಸ್ನೇಹಿ ನಮ್ಮ ಮೆಟ್ರೋ (Namma Metro) ಯೋಜನೆಗೆ ಸಹ ಮರಗಳನ್ನು ಕಡಿಯಲಾಗಿದೆ. ಈ ಸಂಬಂಧ ಮೆಟ್ರೋ 'ಹಸಿರು ಸಾರಿಗೆ ಕಾರಿಡಾರ್' ಪರಿಕಲ್ಪನೆ ಅಡಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಲಕ್ಷಾಂತರ ಸಸಿಗಳನ್ನು ನೆಡಲು ಮುಂದಾಗಿದೆ.
ನಗರದಲ್ಲಿ ಒಟ್ಟು 96 ಕಿಲೋ ಮೀಟರ್ ಮೆಟ್ರೋ ಜಾಲವಿದ್ದು, ಎರಡು ಹೊಸ ಮಾರ್ಗಗಳು ಇದೇ ವರ್ಷ ಲೋಕಾರ್ಪಣೆಗೊಳ್ಳಲಿದೆ. ಆಗ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ. ನಮ್ಮ ಮೆಟ್ರೋ ಹಳದಿ ಮಾರ್ಗ, ನೀಲಿ ಮಾರ್ಗಕ್ಕಾಗಿ ಅನೇಕ ಮರಗಳನ್ನು ಈ ಹಿಂದೆ ಕಡಿಯಲಾಗಿತ್ತು. ಹೀಗಾಗಿ ಇದೀಗ ನಗರಾದ್ಯಂತ ಮೆಟ್ರೋ ಕಾರಿಡಾರ್ ವ್ಯಾಪ್ತಿಯಲ್ಲಿ 2 ಲಕ್ಷ ಸಸಿಗಳನ್ನು ನೆಡುವ ಕಾರ್ಯ ನಡೆಸಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳು ರಸ್ತೆಗೆ ಇಳಿಯುವ ಪ್ರಯಾಣವು ಅದಕ್ಕೆ ತಕ್ಕಂತೆ ಏರಿಕೆ ಆಗುತ್ತಲೇ ಇದೆ. ಇದರಿಂದ ಸಂಚಾರ ದಟ್ಟಣೆ, ಅತೀವ ವಾಯು ಮಾಲಿನ್ಯ ಉಂಟಾಗುತ್ತದೆ. ಇದೆಲ್ಲದರ ತಡೆಗೆ ಮುಖ್ಯವಾಗಿ ಪ್ರಯಾಣಿಕರಿಗೆ ಉಪಯುಕ್ತ, ಅನುಕೂಲಕರ ಸಾರಿಗೆ ಸೇವೆ ನೀಡುವ ಉದ್ದೇಶದಿಂದ ನಮ್ಮ ಮೆಟ್ರೋ ಸಾರಿಗೆ ಅಸ್ತಿತ್ವಕ್ಕೆ ಬಂದಿದೆ.ಅನೇಕ ಮಾರ್ಗಗಳಿಗಾಗಿ ಬೆಳೆದು ನಿಂತ ಮರಗಳನ್ನು ಕಡಿಯಲಾಗಿದೆ. ಅದರ ಪರಿಹಾರಾರ್ಥವಾಗಿ ಸಸಿ ಬೆಳೆಸಲಾಗುತ್ತದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ 19 ಮಾರ್ಗದಲ್ಲಿ ಸಸಿಗಳನ್ನು ನೆಡುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಹಸಿರು ಹೆಚ್ಚಿಸುವುದು ಕಳೆದು ಹೋದ ಹಸಿರು ಮೇಲುಹೊದಿಕೆ ಪುನರ್ ಸ್ಥಾಪಿಸಲಾಗುತ್ತದೆ.
'ಹಸಿರು ಸಾರಿಗೆ ಕಾರಿಡಾರ್' ವ್ಯಾಪಕ ಮೆಚ್ಚುಗೆ
ಪರಿಸರ ಪ್ರೇಮಿಗಳಿಂದ ಮೆಟ್ರೋವಿನ ಈ 'ಹಸಿರು ಸಾರಿಗೆ ಕಾರಿಡಾರ್' ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಳದಿ ಮಾರ್ಗದುದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಗಿಡ ನೆಡುವ ಕಾರ್ಯ ಆರಂಭಿಸಲಾಗಿದೆ. ಮೆಟ್ರೋ ಮಾರ್ಗ, ಮೆಟ್ರೋ ನಿಲ್ದಾಣಗಳ ಸುತ್ತಮತ್ತ ಹಸಿರು ಹೆಚ್ಚಿಸಲಾಗುತ್ತದೆ. ಸದ್ಯ ಜೆಪಿ ನಗರ ಮೆಟ್ರೋ ನಿಲ್ದಾಣ, ಆರ್.ವಿ.ರಸ್ತೆ, ಬಿಟಿಎಂ ಬಡಾವಣೆ, ರಾಗಿಗುಡ್ಡ ನಿಲ್ದಾಣ, ಜಯದೇವ ಆಸ್ಪತ್ರೆ ನಿಲ್ದಾಣದ ಸುತ್ತಮುತ್ತಲಿನ ಖಾಲಿ ಜಾಗವನ್ನು ಸಸಿ ನೆಡಲು ಗುರುತಿಸಲಾಗಿದೆ.
ಬೃಹತ್ ನಗರ ಬೆಂಗಳೂರಿನಲ್ಲಿ ನಿತ್ಯ ಸುಮಾರು 2000 ವಾಹನಗಳು ಸೇರ್ಪಡೆಯಾಗುತ್ತವೆ. ಇದರಿಂದ ನಗರದಲ್ಲಿ ಕ್ರಮೇಣ ಇಂಗಾಲ ಡೈಆಕ್ಸೈಡ್ ಹೊಸ ಸೂಸುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಇದು ವಾಹನ ಸವಾರರು, ನಗರ ನಿವಾಸಿಗಳ ಆರೋಗ್ಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇತ್ತ ಮೆಟ್ರೋ ಹೊಸ ಲೈನ್ನಂತ ಹೊಸ ಹೊಸ ಯೋಜನೆಗಳಿಗಾಗಿ ಮರಗಳ ಪ್ರಮಾಣ, ಕಡಿಮೆ ಆಗುತ್ತಿದೆ. ಮಳೆ ಗಾಳಿಗೂ ಮರಗಳು ಉರುಳಿ ಬೀಳುತ್ತಿವೆ. ಇದೆಲ್ಲದ್ದರಿಂದ ನಗರ ಹಸಿರು ಹೊದಿಕೆ ಕಡಿಮೆ ಆಗುತ್ತಿದ್ದು, ಅದನ್ನು ಹೆಚ್ಚಿಸಲು ನಮ್ಮ ಮೆಟ್ರೋ ಮುಂದಾಗಿದೆ.
ಮರ ಸಮೀಕ್ಷೆಗೆ 30,000 ರೂ. ವೆಚ್ಚ: ಜಿಬಿಎ
ಬೆಂಗಳೂರಿನಲ್ಲಿ ಮಳೆ, ಬಿರುಗಾಳಿಗೆ ಮರಗಳು ಧರೆಗುರುಳುತ್ತಿವೆ. ಕೊಂಬೆ ಮುರಿದು ಬಿದ್ದು, ಕೆಲವು ಮರ ಒಣಗುತ್ತಿಗೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ವಿಶೇಷ ಕಾರ್ಯಕ್ರಮ ಕೈಗೊಂಡಿದೆ. ಈಗಾಗಲೇ ನಗರಾದ್ಯಂತ ಒಟ್ಟಾರೆ 15 ಲಕ್ಷ ಮರಗಳು ಇರಬಹುದೆಂದು ಗಣತಿ ಮೂಲಕ ಪತ್ತೆ ಮಾಡಲಾಗಿದೆ. ಪ್ರತಿ ಮರ ಸಮೀಕ್ಷೆಗೆ ಸರಾಸರಿ 30,000 ರೂಪಾಯಿ ವೆಚ್ಚವಾಗುತ್ತಿದೆ. ಇದು ಅತ್ಯಂತ ದುಬಾರಿ ಎಂಬ ದೂರುಗಳು ಕೇಳಿ ಬಂದಿವೆ.
ಮಳೆ, ಗಾಳಿಗೆ ಉರಳಿ ಬೀಳುವ ಮರಗಳ ಆರೋಗ್ಯ ಸರ್ವೇ ನಡೆಸಲು ಸರ್ಕಾರ ಜರ್ಮನ್ ತಂತ್ರಜ್ಞಾನ ಬಳಸಲಾಗುತ್ತಿದೆ. ಒಟ್ಟು 4.5 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮೂಲಕ ಬೀಳುವಂತಹ ಮರ ತೆರವಿಗೆ ಅನುಕೂಲವಾಗುತ್ತದೆ. ಮನೆ, ವಾಹನಗಳ ಹಾನಿ, ಜೀವ ಹಾನಿ ತಪ್ಪಿಸಬಹುದೆಂಬುದು ಸರ್ಕಾರ ಉದ್ದೇಶ.













Click it and Unblock the Notifications