Chanakya Niti: ಕೌಟುಂಬಿಕ ಮೋಹದಿಂದ ದೂರವಾದ್ರೆ ಭಯ, ದುಃಖ ಹೋಗುತ್ತೆ
ಕೌಟಿಲ್ಯ ಅಥವಾ ವಿಷ್ಣುಗುಪ್ತ ಎಂದೂ ಕರೆಯಲ್ಪಡುವ ಚಾಣಕ್ಯ , ಪ್ರಾಚೀನ ಭಾರತೀಯ ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ರಾಜನ ಸಲಹೆಗಾರರಾಗಿದ್ದರು. ಕ್ರಿ.ಪೂ 4ನೇ ಶತಮಾನದ ಸುಮಾರಿಗೆ ವಾಸಿಸುತ್ತಿದ್ದ ಅವರು, ಮೌರ್ಯ ಸಾಮ್ರಾಜ್ಯದ ಉದಯದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಚಂದ್ರಗುಪ್ತ ಮೌರ್ಯನಿಗೆ ಭಾರತದ ಶ್ರೇಷ್ಠ ರಾಜವಂಶಗಳಲ್ಲಿ ಒಂದನ್ನು ಸ್ಥಾಪಿಸಲು ಮಾರ್ಗದರ್ಶನ ನೀಡಿದವರು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಮಿಲಿಟರಿ ಕಾರ್ಯತಂತ್ರ ಕುರಿತಾದ ಗ್ರಂಥವಾದ ಅರ್ಥಶಾಸ್ತ್ರವನ್ನು ಬರೆದಿರುವ ಕಾರಣ ಚಾಣಕ್ಯನನ್ನು ಇಂದಿಗೂ ಸ್ಮರಿಸಲಾಗುತ್ತದೆ. ಆಡಳಿತ, ರಾಜತಾಂತ್ರಿಕತೆ ಮತ್ತು ಮಾನವ ನಡವಳಿಕೆಯ ಬಗ್ಗೆ ಅವರು ಬೀರಿರುವ ಒಳನೋಟಗಳು ಇಂದಿಗೂ ರಾಜಕೀಯ ಮತ್ತು ತಾತ್ವಿಕ ಚಿಂತನೆಯ ಮೇಲೆ ಪ್ರಭಾವ ಬೀರುತ್ತಿವೆ.
ಚಾಣಕ್ಯನ ನೀತಿ: "ತನ್ನ ಕುಟುಂಬ ಸದಸ್ಯರೊಂದಿಗೆ ಅತಿಯಾದ ಪ್ರೀತಿ, ಮೋಹ ಇಟ್ಟುಕೊಂಡಂಥಹ ವ್ಯಕ್ತಿ ಯಾವಾಗಲೂ ಭಯ ಮತ್ತು ದುಃಖವನ್ನು ಅನುಭವಿಸುತ್ತಾನೆ.ಏಕೆಂದರೆ ಎಲ್ಲಾ ದುಃಖದ ಮೂಲ ಬಂಧವೇ ಆಗಿದೆ. ಆದ್ದರಿಂದ ವ್ಯಕ್ತಿ ಸಂತೋಷವಾಗಿರಬೇಕೆಂದರೆ ಬಾಂಧವ್ಯವನ್ನು ಬಿಟ್ಟು ಹೊರ ಬರಬೇಕು".

ಚಾಣಕ್ಯ ಹೇಳಿದ್ದೇನು?: ಚಾಣಾಕ್ಯನ ಈ ಮಾತುಗಳು, ಅವರ ಪ್ರಾಯೋಗಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಭಾವನಾತ್ಮಕ ಬಾಂಧವ್ಯವೇ ದೌರ್ಬಲ್ಯದ ಮೂಲ ಎಂದು ಹೇಳಲಾಗಿದೆ. ಅವರ ತತ್ವದ ಪ್ರಕಾರ ಬಾಂಧವ್ಯವನ್ನು ತ್ಯಜಿಸುವುದು ಎಂದರೆ ಸಂಬಂಧಗಳನ್ನು ನಿರ್ಲಕ್ಷಿಸುವುದಲ್ಲ, ಬದಲಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮತೋಲನ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳುವುದು ಎಂದು.
ಅತಿಯಾದ ಬಾಂಧವ್ಯವಿದ್ದರೆ ಕಳೆದುಕೊಳ್ಳುವ ಭಯ ಇರುತ್ತದೆ. ಈ ಭಯ ದುಃಖಕ್ಕೆ ಕಾರಣವಾಗಬಹುದು ಎಂದು ಚಾಣಕ್ಯನ ಮಾತುಗಳು ಸೂಚಿಸುತ್ತವೆ. ಬಾಂಧವ್ಯದಿಂದ ದೂರ ಇರುವ ಮೂಲಕ ಒಬ್ಬ ವ್ಯಕ್ತಿ ಆಂತರಿಕ ಮಾನಸಿಕ ಶಾಂತಿಯನ್ನು ಉಳಿಸಿಕೊಳ್ಳಬಹುದು. ಭಾವನೆಗಳ ತೊಳಲಾಟದಿಂದ ಮುಕ್ತವಾಗಿರಬಹುದು.
ಚಾಣಾಕ್ಯ ಹೇಳಿದ ಮಾತುಗಳು ಹಲವಾರು ನಿರಂತರ ಜೀವನ ಪಾಠಗಳನ್ನು ಎತ್ತಿ ತೋರಿಸುತ್ತದೆ. ಭಾವನಾತ್ಮಕ ಸ್ವಾತಂತ್ರ್ಯದ ಮೂಲಕ ಚೇತರಿಸಿಕೊಂಡು ಬೆಳೆಯಬಹುದು ಎಂಬುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲ ಹೆಚ್ಚಿನ ಶಕ್ತಿ ಮತ್ತು ಆತ್ಮ ವಿಶ್ವಾಸದಿಂದ ಪ್ರತಿಕೂಲ ಸ್ಥಿತಿ ನಿಭಾಯಿಸಲು ಅನುವು ಮಾಡಿಕೊಡುತ್ತದೆ . ಪ್ರೀತಿ ಮತ್ತು ನಿರ್ಲಿಪ್ತತೆಯ ನಡುವೆ ಆರೋಗ್ಯಕರ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯತೆಯನ್ನು ಇದು ಒತ್ತಿ ಹೇಳುತ್ತದೆ. ದುಃಖ ಅಥವಾ ಜೀವನ ನಷ್ಟ ಆಗುವುದನ್ನು ಇದು ತಡೆಯುತ್ತದೆ.
ನಿರ್ಲಿಪ್ತತೆಯನ್ನು ಬೆಳೆಸುವ ಮೂಲಕ, ಜನರು ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಸ್ಪಷ್ಟತೆಯನ್ನು ಹೊಂದಬಹುದು. ಇತರರ ಮೇಲಿನ ಅತಿಯಾದ ಅವಲಂಬನೆ ಆಂತರಿಕ ಶಾಂತಿ ಮತ್ತು ಶಾಶ್ವತ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಸ್ವಾವಲಂಬನೆ ಮೂಲಕ ಬದುಕಿದರೆ ತಮ್ಮೊಳಗೆ ತೃಪ್ತಿಯನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications