ಡಿಸೇಲ್ ದರ ಏರಿಕೆ; ದಡದಲ್ಲಿ ನಿಂತ ಶೇ 70ರಷ್ಟು ಮೀನುಗಾರಿಕೆ ಬೋಟ್
ಮಂಗಳೂರು, ಮೇ 01; ಏಪ್ರಿಲ್, ಮೇ ತಿಂಗಳು ವಿಫುಲವಾಗಿ ಮೀನುಗಾರಿಕೆ ನಡೆಸುವ ಸಮಯವಾಗಿದೆ. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳು ಕಡಿಮೆ ಇದ್ದು ಉಳಿದೆಲ್ಲ ಸಮಯಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಆದರೆ ಗಗನಕ್ಕೇರುತ್ತಿರುವ ಡೀಸೆಲ್ ಬೆಲೆ ಈ ಅವಧಿಯಲ್ಲಿ ಮೀನುಗಾರಿಕೆಗೆ ತಡೆಯೊಡ್ಡಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ.
Breaking; ಪೆಟ್ರೋಲ್, ಡೀಸೆಲ್ ಹೊರೆ ಇಳಿಸಿದ್ದೇವೆ ಎಂದ ತಮಿಳುನಾಡು
ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಬೋಟ್, ಪರ್ಷಿಯನ್ ಬೋಟ್ಗಳಿಗೆ ಡೀಸೆಲ್ ಅತ್ಯಗತ್ಯ. ಈ ಬೋಟ್ಗಳು ಸಮುದ್ರಕ್ಕೆ ತೆರಳುವ ಮುನ್ನ ಲಕ್ಷಾಂತರ ರೂಪಾಯಿಗಳ ಡೀಸೆಲ್ ತುಂಬಿಸಿಕೊಂಡು ಮೀನುಗಾರಿಕೆಗೆ ಹೋಗುತ್ತವೆ. ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು 5 ಲಕ್ಷ ರೂ. ವರೆಗೆ ಒಂದು ಟ್ರಿಪ್ಗೆ ಖರ್ಚಾಗುತ್ತದೆ.
ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆ
ಆದರೆ ಮೀನುಗಾರಿಕೆಗೆ ತೆರಳುತ್ತಿರುವ ಬೋಟ್ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ. ನಷ್ಟದ ಭೀತಿಯ ಹಿನ್ನೆಲೆಯಲ್ಲಿ ಬೋಟ್ಗಳ ಮಾಲೀಕರು ಮೀನುಗಾರಿಕೆಗೆ ಬೋಟ್ಗಳನ್ನು ಕಳುಹಿಸದೆ ಧಕ್ಕೆಯಲ್ಲಿಯೇ ಲಂಗರು ಹಾಕಿದ್ದಾರೆ.
ಉಡುಪಿ; 1.81 ಲಕ್ಷಕ್ಕೆ ಮಾರಾಟವಾದ ಒಂದೇ ಮೀನು!
ಎಷ್ಟು ಮೀನುಗಳು ಸಿಗುತ್ತದೆ?
ಬೋಟ್ ಮೀನುಗಾರಿಕೆಗೆ ತೆರಳಿದರೆ ಇಷ್ಟೇ ಪ್ರಮಾಣದ ಮೀನುಗಳು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಮೀನುಗಳ ಲಭ್ಯತೆ ಮತ್ತು ಯಾವ ಮೀನು ಎಂಬುದರ ಮೇಲೆ ಒಂದು ಬೋಟ್ನಲ್ಲಿ ಎಷ್ಟು ಮೌಲ್ಯದ ಮೀನು ಸಿಗುತ್ತದೆ? ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಸುಮಾರು 4 ಲಕ್ಷ ರೂ. ನಿಂದ 7-8 ಲಕ್ಷ ವರೆಗೆ ಮೀನುಗಳು ಸಿಗುತ್ತವೆಯಾದರೂ ಇದು ಬೋಟ್ ಮಾಲೀಕರಿಗೆ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ.
ಈ ಉದ್ಯಮದಲ್ಲಿ ಲಾಭ-ನಷ್ಟ
ಈ ರೀತಿಯ ಪರಿಸ್ಥಿತಿ ಇರುವುದರಿಂದ ಲಾಭ- ನಷ್ಟ ಎರಡೂ ಈ ಉದ್ಯಮದಲ್ಲಿದೆ. ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದು ನಷ್ಟವನ್ನು ಮತ್ತಷ್ಟು ಹೆಚ್ಚಿಸಿದರೆ, ಲಾಭಾಂಶವನ್ನು ಕಡಿಮೆ ಮಾಡಿದೆ. ಮೀನುಗಾರಿಕಾ ಬೋಟ್ಗೆ ಸರ್ಕಾರ ನೀಡುವ ಡೀಸೆಲ್ ಸಬ್ಸಿಡಿ ಸಕಾಲದಲ್ಲಿ ಕೈಸೇರುತ್ತಿಲ್ಲ. ಮೀನು ಮಾರಾಟದ ಹಣವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕಾರ್ಮಿಕರ ವೇತನ, ನಿರ್ವಹಣೆ ಸೇರಿದಂತೆ ಮಾಡಲಾಗುವ ಖರ್ಚಿನಿಂದ ಲಾಭ ಸಿಗುತ್ತಿಲ್ಲ. ಲೋನ್ಗಳನ್ನು ಕಟ್ಟಲಾಗದೆ ಮಾಲೀಕರು ಬೋಟ್ಗಳನ್ನು ಮೀನುಗಾರಿಕೆಗೆ ಕಳುಹಿಸುತ್ತಿಲ್ಲ.
6-7 ಲಕ್ಷ ರೂ. ಸಿಗುತ್ತಿತ್ತು
ಮಂಗಳೂರಿನ ಮೀನುಗಾರಿಕಾ ಬೋಟ್ ಮಾಲೀಕ ರಾಜೇಶ್ ಹೇಳುವ ಪ್ರಕಾರ, "ಈ ಹಿಂದೆ ಆಳ ಸಮುದ್ರಕ್ಕೆ ಹೋಗುತ್ತಿದ್ದ ಬೋಟ್ಗಳಲ್ಲಿ ಆರೇಳು ಲಕ್ಷ ಆದರೂ ಬರುತಿತ್ತು. ಆದರೆ ಈಗ ಆಳಸಮುದ್ರಕ್ಕೆ ಹೋದರೆ ನಿರೀಕ್ಷಿತ ಅಸಲೂ ಬರುತ್ತಿಲ್ಲ. ಮೀನುಗಾರರಿಗೆ ಒಟ್ಟು ಆದಾಯದ ಶೇ 25ರಷ್ಟು ನೀಡಬೇಕು. ಮೀನು ಇಳಿಸುವವರು, ಬಲೆ, ಡಿಸೇಲ್ ಅಂತಾ ಆಗುವ ಅಸಲಿ ಹಣಕ್ಕಿಂತಲೂ ಹೆಚ್ಚಿನ ಹಣ ಬೇಕಾಗುತ್ತದೆ" ಎಂದರು.
ಶೇ 70ರಷ್ಟು ಬೋಟ್ ಲಂಗರು ಹಾಕಿದೆ
"ಈಗ ಬೋಟ್ ಗಳ ಸಂಖ್ಯೆ ಜಾಸ್ತಿಯಾಗಿ ಸಮುದ್ರದಲ್ಲಿ ಮತ್ಸ್ಯಗಳ ಸಂಖ್ಯೆಯೂ ಕ್ಷೀಣ ಆಗುತ್ತಿದೆ. ಹೀಗಾಗಿ ಮಂಗಳೂರು ಬಂದರಿನ ಶೇ 70ರಷ್ಟು ಬೋಟ್ಗಳು ದಡದಲ್ಲಿ ಲಂಗರು ಹಾಕಿದೆ. ಬೋಟ್ಗಳು ಉಪ್ಪು ನೀರಿನಲ್ಲಿ ಇರೋದರಿಂದ ಮುಂದಿನ ಬಾರಿ ಬೋಟ್ ಇಳಿಸುವಾಗಲೂ ಸಂಪೂರ್ಣ ರಿಪೇರಿ ಮಾಡಿಯೇ ಇಳಿಸಬೇಕಾಗುತ್ತದೆ" ಎಂದು ರಾಜೇಶ್ ಹೇಳಿದ್ದಾರೆ.
ಇನ್ನು ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಪ್ರತಿದಿನ ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಾರೆ. ಆದರೆ ಈಗ ಬಹುಪಾಲು ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರ ಮೀನುಗಾರರು ಮತ್ತು ಕಾರ್ಮಿಕರ ಬಗ್ಗೆ ಗಮನಹರಿಸಬೇಕು ಅಂತಾ ಕಾರ್ಮಿಕರು ಮನವಿ ಮಾಡಿದ್ದಾರೆ.