ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾಗಿದ್ದ ವಿದ್ಯಾರ್ಥಿನಿಯರು ಪತ್ತೆ; ಇದೇ ಕಾರಣವಂತೆ?
ಮಂಗಳೂರು, ಸೆಪ್ಟೆಂಬರ್ 24: ನಗರದ ಖಾಸಗಿ ಕಾಲೇಜಿನ ಹಾಸ್ಟೆಲ್ನ ಕಿಟಕಿ ಮುರಿದು ಪರಾರಿಯಾಗಿರುವ ಮೂವರು ವಿದ್ಯಾರ್ಥಿನಿಯರನ್ನು ಕುಡ್ಲದ ಖಾಕಿ ಪಡೆ ಪತ್ತೆಹಚ್ಚಿದೆ. ಮೂರು ದಿನಗಳ ಬಳಿಕ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಆದರೆ ಆ ವಿದ್ಯಾರ್ಥಿಯರು ಪರಾರಿಯಾಗಿದ್ದಕ್ಕೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದದ್ದೇ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 21ರಂದು ನಸುಕಿನ ವೇಳೆ 3.09ಕ್ಕೆ ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಯಶಸ್ವಿನಿ, ದಕ್ಷತಾ, ಸಿಂಚನಾ ಎಂಬ ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿದ್ದರು. ತಮ್ಮ ಲಗೇಜು ಸಹಿತ ಹಾಸ್ಟೆಲ್ ಕಿಟಕಿ ಮುರಿದು ಇವರು ಪರಾರಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆದರೆ ಆ ಬಳಿಕ ಈ ವಿದ್ಯಾರ್ಥಿನಿಯರು ಎಲ್ಲಿ ಹೋಗಿದ್ದಾರೆಂಬ ಸುಳಿವು ಪತ್ತೆಯಾಗಿರಲಿಲ್ಲ. ನಾವು ಹೋಗುತ್ತಿದ್ದೇವೆ, ಕ್ಷಮಿಸಿ' ಎಂದು ಪತ್ರ ಬರೆದಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಈ ವಿದ್ಯಾರ್ಥಿನಿಯರು ಹೋಗಿರುವುದೆಲ್ಲಿಗೆ?, ಯಾಕಾಗಿ ಹೋಗಿರುವುದು ಕಾಲೇಜಿನವರಿಗೆ ಮತ್ತು ಪೋಷಕರಿಗೆ ದೊಡ್ಡ ತಲೆನೋವು ತಂದಿತ್ತು.
ಕಿಟಕಿ ಮುರಿದು ಹಾಸ್ಟೆಲ್ ನಿಂದ ರಾತ್ರೋರಾತ್ರಿ ಪರಾರಿಯಾದ ವಿದ್ಯಾರ್ಥಿನಿಯರು!
ಇದೀಗ ಮಂಗಳೂರು ಪೊಲೀಸರ ಪ್ರಯತ್ನದಿಂದ ಮೂವರು ವಿದ್ಯಾರ್ಥಿನಿಯರು ಚೆನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನಿಂದ ರೈಲಿನ ಮೂಲಕ ಕೊಯಂಬತ್ತೂರು ತೆರಳಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ಬಸ್ ನಲ್ಲಿ ಪಾಂಡಿಚೇರಿಗೆ ಪ್ರಯಾಣಿಸಿದ್ದಾರೆ. ಅಲ್ಲಿಂದ ವಾಪಾಸ್ ಪಾಂಡಿಚೇರಿಯಿಂದ ಚೆನೈಗೆ ಬಂದಿದ್ದಾರೆ. ಇವರು ತಮ್ಮ ಪ್ರಥಮ ಪಿಯುಸಿಯ ಯುನಿಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವುದರಿಂದ ಮನನೊಂದು, ತಮ್ಮ ಶೈಕ್ಷಣಿಕ ಒತ್ತಡವನ್ನು ನಿರ್ವಹಿಸಲಾಗದೆ ಹಾಸ್ಟೆಲ್ ನಿಂದ ಓಡಿ ಹೋಗಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧಿಕರ ಮನೆಗೆ ಹೋಗಲು ನಿರ್ಧರಿಸಿದ್ದ ವಿದ್ಯಾರ್ಥಿನಿಯರು
ರಾತ್ರಿ ವೇಳೆ ಎಲ್ಲೂ ತಂಗಲು ಆಗದ ವಿದ್ಯಾರ್ಥಿನಿಯರು ಸಂಚಾರದಲ್ಲಿಯೇ ಇದ್ದರು. ಆದರೆ ಎಲ್ಲಿಗೂ ಹೋಗಲು ತಿಳಿಯದೆ ಓರ್ವ ವಿದ್ಯಾರ್ಥಿನಿಯ ಸಂಬಂಧಿಕರ ಮನೆಗೆ ಹೋಗಲು ನಿಶ್ಚಯಿಸಿದ್ದರು. ಈ ವೇಳೆ ನಮ್ಮನ್ನು ಪೊಲೀಸರು ಹುಡುಕುತ್ತಿದ್ದಾರೆ. ಹೆತ್ತವರು ಆತಂಕಗೊಂಡಿದ್ದಾರೆ ಎಂಬುದು ತಿಳಿದು ಸಮೀಪದ ಪೊಲೀಸ್ ಠಾಣೆಗೆ ಕರೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮಂಗಳೂರು ಪೊಲೀಸರು ಅವರನ್ನು ಕರೆ ತಂದಿದ್ದಾರೆ. ಈ ಮೂಲಕ ಯಾವುದೇ ತೊಂದರೆಯಿಲ್ಲದೆ ಮತ್ತೆ ಮನೆಯವರನ್ನು ಸೇರಿರುವ ವಿದ್ಯಾರ್ಥಿನಿಯರ ಪರಾರಿ ಪ್ರಹಸನ ಸುಖಾಂತ್ಯಗೊಂಡಿದೆ.
ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ!
ಮಕ್ಕಳಿಗೆ ಕೌನ್ಸಿಲಿಂಗ್ ನೀಡಲು ಸೂಚನೆ
ವಿದ್ಯಾರ್ಥಿನಿಯರ ಪೋಷಕರು, ಅವರ ಹೆತ್ತವರು, ಕಾಲೇಜಿನ ಆಡಳಿತ ಮಂಡಳಿಯವರನ್ನು ಕಚೇರಿಗೆ ಕರೆಯಿಸಿಕೊಂಡು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕ್ಲಾಸ್ ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿಗೆ ಸರಿಯಾದ ಸಮಯಕ್ಕೆ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಬೇಕು. ಹಾಸ್ಟೆಲ್ಗಳಲ್ಲಿ ಭದ್ರತೆ ಜಾಸ್ತಿ ಮಾಡಬೇಕು. ಮಕ್ಕಳಿಗೆ ಹೆತ್ತವರ ಜೊತೆ ಬೆರೆಯಲು ಬಿಡಬೇಕು. ಮಾನಸಿಕವಾಗಿ ಕುಗ್ಗಿರುವ ವಿದ್ಯಾರ್ಥಿನಿಯವರನ್ನು ಗುರುತಿಸಿ ಅವರಿಗೆ ಸೂಕ್ತ ಕೌನ್ಸಿಲಿಂಗ್ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಾಲೇಜು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಕ್ಕಳು ಸಿಕ್ಕಿರುವುದಕ್ಕೆ ಖುಷಿಯಾಗಿದೆ
ವಿದ್ಯಾರ್ಥಿನಿಯರು ಪರಾರಿಯಾದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿಯೋರ್ವಳ ಪೋಷಕ ಮಹಾದೇಶ್ವರನ್, ವಿದ್ಯಾರ್ಥಿನಿಯರಯ ಮಾನಸಿಕವಾಗಿ ಕುಗ್ಗಿರುವ ವಿಚಾರ ನಮಗೆ ಗೊತ್ತಿರಲಿಲ್ಲ..ನಮ್ಮ ಜೊತೆ ಯೂ ಈ ಬಗ್ಗೆ ಹಂಚಿಕೊಂಡಿಲ್ಲ. ಮೂರು ದಿನ ತುಂಬಾ ಗಾಬರಿಗೆ ಒಳಗಾಗಿದ್ದೆವು. ಈಗ ಮಕ್ಕಳು ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಮಕ್ಕಳಿಗೆ ಕೌನ್ಸಿಲಿಂಗ್ ನೀಡುತ್ತೇವೆ ಅಂತಾ ಹೇಳಿದ್ದಾರೆ..
ಮಕ್ಕಳ ಜೊತೆಗೆ ಸಮಾಲೋಚನೆ ಮಾಡುತ್ತೇವೆ
ಇನ್ನು ಕಾಲೇಜಿನ ಪ್ರಾಂಶುಪಾಲರಾದ ಮೋಹನ ಮಾತನಾಡಿ, "ನಮ್ಮ ಕಾಲೇಜಿನಲ್ಲಿ ಯಾವುದೇ ಒತ್ತಡ ನೀಡಿಲ್ಲ. ಮಕ್ಕಳಿಗೆ ಅವರ ಹೆತ್ತವರ ಜೊತೆಗೆ ಬೆರೆಯಲೂ ಅವಕಾಶ ನೀಡುತ್ತೇವೆ. ಹಾಸ್ಟೆಲ್ ಮಕ್ಕಳಿಗೆ ಜಿಗುಪ್ಸೆ ಬರಬಾರದೆಂದು ಪ್ರವಾಸವನ್ನೂ ಕರೆದುಕೊಂಡು ಹೋಗಿದ್ದೆವು. ಮಕ್ಕಳು ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆಂದು ಅವರ ಜೊತೆ ಸಮಾಲೋಚನೆ ಮಾಡುತ್ತೇವೆ," ಅಂತಾ ಹೇಳಿದ್ದಾರೆ.