ಪಾಲೇಮಾರ್ ಗೆ ಟಿಕೆಟ್ ಕೈ ತಪ್ಪುವ ಹಿಂದೆ ನನ್ನ ಕೈವಾಡವಿಲ್ಲ: ನಳಿನ್
ಮಂಗಳೂರು ಏಪ್ರಿಲ್ 22: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಗೆ ಟಿಕೆಟ್ ಕೈ ತಪ್ಪುವುದರ ಹಿಂದೆ ನನ್ನ ಪಾತ್ರ ಇಲ್ಲ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಜೆ. ಪಾಲೇಮಾರ್ ಹಿರಿಯರು. ಅವರು ಟಿಕೆಟ್ ಕೈತಪ್ಪಿದ ಬೇಸರದಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮನಸ್ಸಿಗೆ ನೋವಾದ ಕಾರಣ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಟಿಕೆಟ್ ನಿರಾಕರಣೆ ಪಕ್ಷದ ವರಿಷ್ಠರ ತೀರ್ಮಾನ . ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಟೀಮ್ ನಡೆಸಿದ ಸರ್ವೆ ಆಧಾರದಲ್ಲಿ ಟಿಕೆಟ್ ಫೈನಲ್ ಆಗಿದೆ. ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಭುಗಿಲೆದ್ದ ಬಂಡಾಯ
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಂಟ ಸಮುದಾಯದ ಟಿಕೆಟ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸಮುದಾಯದ ಜನರು ಬಿಜೆಪಿ ಜೊತೆಗಿದ್ದಾರೆ. ಭಿನ್ನಮತವನ್ನು ಮಾತುಕತೆ ಮೂಲಕ ಶಮನ ಮಾಡಲಾಗುವುದು. ಪಕ್ಷ ಎಲ್ಲರಿಗೆ ಬೇರೆ ಬೇರೆ ಜವಾಬ್ದಾರಿ ಸ್ಥಾನ ನೀಡಿದೆ. ಕೆಲವು ಕಾರಣಕ್ಕಾಗಿ ವ್ಯತ್ಯಾಸ ಆಗುತ್ತದೆ. ಚುನಾವಣೆಯ ತಂತ್ರಗಾರಿಕೆಯ ಕೆಲ ಲೆಕ್ಕಾಚಾರಕ್ಕೆ ಅನುಗುಣವಾಗಿ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.