ಸದ್ಯದಲ್ಲೇ ಕನ್ನಡ ಧ್ವಜವಾಗಲಿದೆ 'ರಾಜ್ಯ ಧ್ವಜ' : ಸಿದ್ದರಾಮಯ್ಯ
ಕನ್ನಡ ಧ್ವಜವನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಸಮಾವೇಶಗಳಲ್ಲಿ, ಕನ್ನಡ ಸಂಸ್ಕೃತಿ ಸಮ್ಮೇಳನಗಳಲ್ಲಿ, ಮತ್ತು ಎಲ್ಲೆಂದರಲ್ಲಿ ಹಾರಿಸುತ್ತಾರಾದರೂ ಅದಕ್ಕೊಂದು ಅಧಿಕೃತ ಮಾನ್ಯತೆ ಸಿಕ್ಕಿಯೇ ಇಲ್ಲ.
ಬೆಂಗಳೂರು, ನವೆಂಬರ್ 08 : ಕರ್ನಾಟಕ ಏಕೀಕರಣಗೊಂಡ 60ನೇ ವರ್ಷಾಚರಣೆ ಸಂಭ್ರಮದಲ್ಲಿರುವಾಗಲೇ, ಮತ್ತೊಂದು ಸಂತಸದ ಸುದ್ದಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಈಗಿರುವ ಕನ್ನಡ ಧ್ವಜ, ರಾಜ್ಯಧ್ವಜವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಘೋಷಿಸಿದರು. ಈ ಸಂಬಂಧ, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.
ಕನ್ನಡ ಧ್ವಜ ರಾಜ್ಯ ಧ್ವಜವಾಗಬೇಕೆಂಬುದು ಹಲವಾರು ದಶಕಗಳ ಆಗ್ರಹವಾಗಿದೆ. ಸುಮಂಗಲಿಯರ ಪಾವಿತ್ರ್ಯದ ಸಂಕೇತವಾಗಿರುವ ಅರಿಷಿಣ ಮತ್ತು ಕುಂಕುಮ ಬಣ್ಣವನ್ನು ಧ್ವಜದಲ್ಲಿ ಮೇಲೆ ಮತ್ತು ಕೆಳಗೆ ಧರಿಸಿರುವ ಕನ್ನಡ ಧ್ವಜ ಕರ್ನಾಟಕ ರಾಜ್ಯದ ಸಮೃದ್ಧಿಯ ಸಂಕೇತವೂ ಆಗಿದೆ. [ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲ]
ಕನ್ನಡ ಧ್ವಜ ಹುಟ್ಟಿದ್ದು ಹೇಗೆ? : ಕನ್ನಡದ ಕಟ್ಟಾಳು, ಬರಹಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮ ರಾಮಮೂರ್ತಿ ಅವರು 1960ರಲ್ಲಿ ಕನ್ನಡ ಧ್ವಜದ ಜನಕ. ರಾಜ್ಯಾದ್ಯಂತ ಪಾದಯಾತ್ರೆ ಮಾಡಿ, ಪಕ್ಕದ ರಾಜ್ಯದವರು ನಮ್ಮ ರಾಜ್ಯದಲ್ಲಿ ಧ್ವಜ ಹಾರಿಸುವುದನ್ನು ವಿರೋಧಿಸಿ, ನಂತರ ನಮ್ಮದೇ ಆದ ಸ್ವತಂತ್ರ ಧ್ವಜವಿರಬೇಕೆಂದು ಪ್ರಸ್ತುತ ಧ್ವಜದ ಜನನಕ್ಕೆ ಕಾರಣರಾದರು.
ಈ ಧ್ವಜವನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಸಮಾವೇಶಗಳಲ್ಲಿ, ಕನ್ನಡ ಸಂಸ್ಕೃತಿ ಸಮ್ಮೇಳನಗಳಲ್ಲಿ, ಮತ್ತು ಎಲ್ಲೆಂದರಲ್ಲಿ ಹಾರಿಸುತ್ತಾರಾದರೂ ಅದಕ್ಕೊಂದು ಅಧಿಕೃತ ಮಾನ್ಯತೆ ಸಿಕ್ಕಿಯೇ ಇಲ್ಲ. ಕನ್ನಡ ಸಿನೆಮಾಗಳಲ್ಲಿ, ಆಟೋಗಳಲ್ಲಿ, ಕನ್ನಡಪರ ಚಳವಳಿಗಳಲ್ಲಿ ರಾರಾಜಿಸುತ್ತಲೇ ಇರುತ್ತದೆ.
ರಾಷ್ಟ್ರಧ್ವಜಕ್ಕೆ ಇರುವಷ್ಟು ಮಾನ್ಯತೆ ಕರ್ನಾಟಕದಲ್ಲಿ ಕನ್ನಡ ಧ್ವಜಕ್ಕೂ ಇದೆ. ಗೋಕಾಕ್ ಚಳವಳಿಯಲ್ಲಿ ಕನ್ನಡ ಧ್ವಜವನ್ನು ಕನ್ನಡಿಗರ ಐಕ್ಯತೆಯ ಸಂಕೇತವಾಗಿ ಬಳಸಲಾಗಿತ್ತು. 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿತ್ತು. ಆದರೆ, ಕಾನೂನು ಅಡಚಣೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಎಲ್ಲ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್ ಇದನ್ನು ಪ್ರಶ್ನಿಸಿದ್ದರಿಂದ ಆದೇಶವನ್ನು ಹಿಂಪಡೆಯಬೇಕಾಗಿತ್ತು.
ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿದರೆ ಯಾವ ರಾಜ್ಯದಲ್ಲೂ ಅಧಿಕೃತವಾಗಿ ರಾಜ್ಯಧ್ವಜವಿಲ್ಲ.