ಗಡಿಯಲ್ಲಿ ಕನ್ನಡ ಧ್ವಜ ಸ್ತಂಭ ತೆರವು: ಕಿಡಿಗೇಡಿಗಳ ವಿರುದ್ಧ ಕ್ರಮವಹಿಸಿ: ಕಸಾಪ ಆಗ್ರಹ
ಬೆಂಗಳೂರು, ಸೆಪ್ಟಂಬರ್ 20: ಕರ್ನಾಟಕದ ಗಡಿ ಪ್ರದೇಶದಲ್ಲಿ ಕನ್ನಡಕ್ಕೆ ಅಪಮಾನಿಸುವ ಕೆಲಸ ಮುಂದುವರಿದಿದೆ. ಇತ್ತೀಚೆಗೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಕನ್ನಡ ಧ್ವಜಸ್ತಂಭ ತೆರವು ಮಾಡಿರುವುದು ಖಂಡನೀಯ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು, ಕನ್ನಡ ಧ್ವಜ ಸ್ತಂಭ ಮರು ಸ್ಥಾಪಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯು ರಾಜ್ಯ ಗಡಿ ಪ್ರದೇಶವಾಗಿದೆ. ಅಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಹಿನ್ನೆಲೆಯಲ್ಲಿ ಶತ ಶತಮಾನಗಳಿಂದ ಆ ಭಾಗದ ಕನ್ನಡಾಭಿಮಾನಿಗಳು ಅಪಾರವಾದ ಕನ್ನಡ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಅಲ್ಲಿ ಕನ್ನಡದ ಅಸ್ಮಿತೆಯ ಪ್ರತೀಕವಾಗಿ ಕನ್ನಡ ಧ್ವಜ ಹಾಗೂ ಧ್ವಜ ಸ್ತಂಭ ಸ್ಥಾಪಿಸಲಾಗಿತ್ತು. ಆದರೆ ಕೆಲವು ವಿಕೃತ ಮನಸ್ಸಿನ ಸಮಾಜಘಾತುಕರು, ನಾಡದ್ರೋಹಿಗಳು ಸೆಪ್ಟಂಬರ್ 16ರಂದು ರಾತ್ರೋ ರಾತ್ರಿ ಕನ್ನಡ ಬಾವುಟ ಹಾಗೂ ಧ್ವಜ ಸ್ತಂಭವನ್ನು ತೆರವು ಮಾಡಿದ್ದಾರೆ.
ಕನ್ನಡ ಭಾಷೆಗೆ ಅಪಮಾನಗೈದ ಕಿಡಿಗೇಡಿಗಳ ಕುಕೃತ್ಯ ಖಂಡನೀಯ. ಈ ಕೃತ್ಯ ಎಸಗಿದವರನ್ನು ಕೂಡಲೆ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಸಚಿವರು, ಜಿಲ್ಲಾಧಿಕಾರಿಗಳಿಗೆ ಪರಿಷತ್ತು ಪತ್ರ
ಈ ಧ್ವಜ ಸ್ತಂಭವನ್ನು ಭಾಲ್ಕಿ ನಗರದಲ್ಲಿರುವ ಶ್ರೀ ಚನ್ನಬಸವೇಶ್ವರ ಪಟ್ಟದ ದೇವರ ಆಶ್ರಮದ ಎದುರಿಗೆ ಹತ್ತಾರು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಭಾಲ್ಕಿ ಪಟ್ಟಣ ಕನ್ನಡ ಕಟ್ಟಿ ಬೆಳೆಸುವಲ್ಲಿ ಅಪಾರ ಕೊಡುಗೆ ನೀಡಿದೆ. ಉರ್ದು ಭಾಷೆಯ ಪ್ರಾಬಲ್ಯ ಇದ್ದ ಕಾಲದಲ್ಲಿ ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಪಟ್ಟದದೇವರ ಮಠದೊಳಗೆ ಕನ್ನಡ ಕಲಿಸಲಾಗಿತ್ತು. ಅಂತಹ ದಿವ್ಯ ಇತಿಹಾಸ ಇರುವ ಸ್ಥಳದಲ್ಲಿ ಈ ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ವಿರುದ್ಧ ಭಾಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಈ ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪರಿಷತ್ತು ಮತ್ತಿತರ ಕನ್ನಡಪರ ಸಂಸ್ಥೆಗಳು ಆಗ್ರಹಿಸಿವೆ. ಅಲ್ಲದೇ ಈ ಸಂಬಂಧ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮತ್ತು ಬೀದರ್ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಧ್ವಜ ಸ್ತಂಭ ಮರುಸ್ಥಾಪಿಸಲು ಆಗ್ರಹ
ಘಟನೆ ನಡೆದ ಸ್ಥಳದಲ್ಲಿ ಈಗಾಗಲೇ ಇದ್ದ ಕನ್ನಡ ಧ್ವಜ ಸ್ತಂಭವನ್ನು ತಕ್ಷಣವೇ ಮರುಸ್ಥಾಪಿಸಿ ಕನ್ನಡ ಧ್ವಜವನ್ನು ಹಾರಿಸಬೇಕು. ಈ ಮೂಲಕ ಗಡಿಯಲ್ಲಿ ಕನ್ನಡ ಕಟ್ಟುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಸ್ಥಳೀಯ ಯಾವುದೇ ವಿವಾದಗಳಿದ್ದರೂ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.












Click it and Unblock the Notifications