ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
ಬೆಳಗಾವಿ, ಜನವರಿ 21: ಪದೇ ಪದೇ ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಹಾಗೂ ಶಿವಸೇನೆ ಈಗ ಮತ್ತೆ ತನ್ನ ಪುಂಡಾಟ ಮುಂದುವರೆಸಿದೆ.
ಸ್ವತಃ ಅಲ್ಲಿನ ಸಿಎಂ ಕರ್ನಾಟಕದ ಕೆಲ ಭೂಭಾಗವನ್ನು ಶೀಘ್ರದಲ್ಲಿ ವಶಪಡಿಸಿಕೊಳ್ಳುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದರು. ಈಗ ಬೆಳಗಾವಿ ಮಹಾನಗರ ಪಾಲಿಕೆ ಎದುರು ಇರುವ ಕನ್ನಡ ಧ್ವಜ ವಿಚಾರವಾಗಿ ಶಿವಸೇನೆಯ ಕಾರ್ಯಕರ್ತರು ಬೆಳಗಾವಿ ನಗರ ಪ್ರವೇಶಿಸುವ ಯತ್ನ ಮಾಡಿದ್ದಾರೆ.
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಶಿನ್ನೋಳಿ ಗಡಿ ಭಾಗದ ಗ್ರಾಮಕ್ಕೆ ಮಹಾರಾಷ್ಟ್ರದ ಶಿವಸೇನಾ ಕೊಲ್ಲಾಪುರದ ಜಿಲ್ಲಾಧ್ಯಕ್ಷ ವಿಜಯ ಅವರ ನೇತೃತ್ವದಲ್ಲಿ ಬೆಳಗಾವಿ ನಗರಕ್ಕೆ ನುಗ್ಗುವ ಯತ್ನವನ್ನು ಬೆಳಗಾವಿ ಪೊಲೀಸರು ವಿಫಲಗೊಳಿಸಿದರು.

ಈಗಾಗಲೇ ಗಡಿ ಗ್ರಾಮದ ಶಿನ್ನೋಳಿ ಬಳಿಯಲ್ಲಿ ಜಮಾವಣೆಗೊಂಡಿರುವ ನೂರಾರು ಶಿವಸೇನೆ ಕಾರ್ಯಕರ್ತರು, ಪಾಲಿಕೆ ಮುಂದಿನ ಕನ್ನಡ ಧ್ವಜವನ್ನು ತೆರವು ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಬೆಳಗಾವಿ ಮಹಾನಗರ ಪಾಲಿಕೆಗೆ ಮುಂದೆ ಹೋಗಿ ನಾವು ಭಗವಾ ಧ್ವಜವನ್ನು ಹಾಕಿತ್ತೇವೆ ಎಂದು ಪಟ್ಟು ಹಿಡಿದಿರುವ ಶಿವಸೇನಾ ಮುಖಂಡರು ಮತ್ತು ಕಾರ್ಯಕರ್ತರು ಪೊಲೀಸರು ಜೊತೆಗೆ ನೂಕಾಟ- ತಳ್ಳಾಟ ಮಾಡುತ್ತಿದ್ದಾರೆ.
ಕರ್ನಾಟಕ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಳಿಕ ಶಿವಸೇನಾ ಮುಖಂಡರು ರಸ್ತೆ ಮೇಲೆ ಕುಳಿತುಕೊಂಡರು. ಅಲ್ಲದೆ ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಆಗಮಿಸಬೇಕು. ಅವರಿಗೆ ಕನ್ನಡ ಧ್ವಜ ತೆರೆವು ಮಾಡಲು ಹೇಳುತ್ತೇವೆ. ಹಿರಿಯ ಅಧಿಕಾರಿಗಳು ಬರದೆ ಇದ್ದರೆ, ನಾವು ಬೆಳಗಾವಿ ನಗರಕ್ಕೆ ನುಗ್ಗಿ ಪಾಲಿಕೆ ಮುಂದಿನ ಕನ್ನಡ ಧ್ವಜವನ್ನು ಕಿತ್ತು ಹಾಕಿ ನಾವೇ ಭಗವಾ ಧ್ವಜವನ್ನು ಅಲ್ಲಿ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದು, ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಕನ್ನಡ ಧ್ವಜ ತೆರವು ಮಾಡಲು ಆಗಮಿಸಿದ ಕೊಲ್ಲಾಪುರದ ಶಿವಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಗಡಿಯೊಳಗೆ ಬರಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್ ಶಿನ್ನೋಳ್ಳಿ ಗ್ರಾಮಕ್ಕೆ ಮರಳಿದ್ದಾರೆ.
ಅಲ್ಲದೆ ಶಿನ್ನೋಳಿಯಲ್ಲಿ ಕೆಲವು ಸ್ಥಳಗಳಲ್ಲಿ ತಂಗಿದ್ದಾರೆ. ಸಂಜೆಯವರೆಗೆ ಆದರೂ ಬೆಳಗಾವಿಗೆ ನುಗ್ಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದಿದೆ. ಈ ಬಗ್ಗೆ ಗ್ರಾಮದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.












Click it and Unblock the Notifications