ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ: ಪರಿಷತ್ತಿನಲ್ಲಿ ಹೇಗಿರಲಿದೆ ಕನ್ನಡ ರಾಜ್ಯೋತ್ಸವ
ಬೆಂಗಳೂರು, ಅಕ್ಟೋಬರ್ 19: ಕನ್ನಡ ನಾಡಿನಾದ್ಯಂತ ಹಳದಿ-ಕೆಂಪು ಬಣ್ಣ ರಾರಾಜಿಸುವಂತೆ ಮಾಡುವ ನಿಟ್ಟಿನಲ್ಲಿ ನವೆಂಬರ್ 1ರಂದು ಎಲ್ಲರ ಮನೆಗಳಲ್ಲಿ 'ಕನ್ನಡ ಧ್ವಜ' ಹಾರಿಸಲು ಕನ್ನಡ ಸಾಹಿತ್ಯ ಪರಿಷತ್ತು ಕರೆ ನೀಡಿದೆ. ಜೊತೆಗೆ ಇದೇ ಮೊದಲ ಬಾರಿಗೆ ಪರಿಷತ್ತಿನ ಆವರಣದಲ್ಲಿ ಕನ್ನಡ ತಾಯಿ 'ಭುವನೇಶ್ವರಿ ದೇವಿಯ' ಪುತ್ಥಳಿಯನ್ನು ರಾಜ್ಯೋತ್ಸವದಂತೆ ಸ್ಥಾಪಿಸುವ ಗುರಿ ಇಟ್ಟುಕೊಂಡಿದೆ.
ಕನ್ನಡ ನಾಡಿನಾದ್ಯಂತ ಸ್ಫೂರ್ತಿಯ ಸೆಲೆ ಪಸರಿಸಲು ಮತ್ತು ಕನ್ನಡ ಹಬ್ಬದಲ್ಲಿ ಕನ್ನಡಿಗರೆಲ್ಲರೂ ಪಾಲ್ಗೊಳ್ಳಬೇಕು ಎಂಬ ಮಹತ್ತರ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಹೇಶ ಜೋಶಿ ಮನೆಗಳಲ್ಲಿ ಕನ್ನಡ ಭಾವುಟ ಹಾರಿಸಲು ಕರೆ ನೀಡಿದ್ದಾರೆ. ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಧ್ಯೇಯ ವಾಕ್ಯದಡಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನವೆಂಬರ್ 1ರಂದೇ ತಾಯಿ ಭುವನೇಶ್ವರಿ ದೇವಿಯ 6.5ಅಡಿ ಎತ್ತರದ ಪುತ್ಥಳಿ ಸ್ಥಾಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.
ಬೆಂಗಳೂರಿನಲ್ಲೇ ಕಲಾವಿದರಿಂದ ಭುವನೇಶ್ವರಿ ದೇವಿಯ ಮೂರ್ತಿ ಸಿದ್ಧವಾಗುತ್ತಿದೆ. ಕನ್ನಡ ರಾಜ್ಯೋತ್ಸವದಂದು ಮೂರ್ತಿ ಸ್ಥಾಪಿಸಿ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲು ಪರಿಷತ್ತು ಯೋಜನೆ ರೂಪಿಸಿದೆ. ಎಲ್ಲವು ಅಂದುಕೊಂಡಂತಾದರೆ ನವೆಂಬರ್ 1ರಂದೇ ಇಲ್ಲವೇ ನವೆಂಬರ್ ಮೊದಲ ವಾರ ಪುತ್ಥಳಿ ಪ್ರತಿಷ್ಠಾಪನೆ ಜುರಗಲಿದೆ.

ಕಸಾಪದಲ್ಲಿ 3 ಮಹನೀಯರ ಮೂರ್ತಿ ಸ್ಥಾಪನೆಗೆ ಚಿಂತನೆ
ಇಷ್ಟೇ ಅಲ್ಲದೇ ಶತಮಾನದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಕಾರಣಿಭೂತರಾದ ಅಂದಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್, ಮತ್ತವರ ಕಾಲದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸರ್.ಮಿರ್ಜಾ ಇಸ್ಮಾಯಿಲ್ ಸೇರಿ ಈ ಮೂರು ಮಹನೀಯರ ಮೂರ್ತಿಗಳನ್ನು ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಲು ಪರಿಷತ್ತು ಚಿಂತನೆ ನಡೆಸಿದೆ. ಮೂರ್ತಿಗಳ ತಯಾರಿಕೆ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರವೇ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ ಎಂದು ಪರಿಷತ್ತಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಏಕೀಕರಣ ಕುರಿತು ಗೋಷ್ಠಿಗಳು, ಧ್ವಜಾರೋಹಣ ಸೇರಿದಂತೆ ಹಲವು ಕನ್ನಡದ ಕಂಪಿನ ಕಾರ್ಯಕ್ರಮಗಳು ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ನೇತೃತ್ವದಲ್ಲಿ ಅದ್ಧೂರಿಯಾಗಿ ಜರುಗಲಿವೆ.

ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದಂದು ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸಬೇಕು. ಈ ಮೂಲಕ ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಮ್ ಶ್ರೀಕಂಠಯ್ಯನವರ 'ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ' ಎಂಬ ಆಶಯದಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.












Click it and Unblock the Notifications