ಕನ್ನಡ ಧ್ವಜದ ಕುರಿತು ಸಿ.ಟಿ.ರವಿ ಹೇಳಿಕೆ; ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹ
ದಾವಣಗೆರೆ, ಆಗಸ್ಟ್ 31: "ಪ್ರತ್ಯೇಕ ನಾಡ ಧ್ವಜದ ಅಗತ್ಯವಿಲ್ಲ" ಎಂದಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾಡ ಧ್ವಜದ ವಿಚಾರವಾಗಿ ಸಚಿವ ಸಿ.ಟಿ.ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ರಾಜ್ಯದ ಮರ್ಯಾದೆ ಕಳೆದಿದ್ದಾರೆ. ಜನಪ್ರತಿನಿಧಿಗಳಾದವರು ಕನ್ನಡಿಗರ ಪರ ಕೆಲಸ ಮಾಡುತ್ತಾರೆಂಬ ಭರವಸೆ ಇತ್ತು. ಆದರೆ ಇವರು ಕನ್ನಡದ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ.
"ಅವರ ಹೇಳಿಕೆ ಕನ್ನಡಿಗರಿಗೆ ಅಪಮಾನ ಮಾಡಿದಂತಿದೆ. ಈ ಕೂಡಲೇ ಅವರು ಕನ್ನಡಿಗರ ಕ್ಷಮೆ ಕೋರಬೇಕು. ಜನಪ್ರತಿನಿಧಿಗಳು ರಾಜ್ಯದ ಹಿತ ಕಾಪಾಡಬೇಕು. ಸಂಸ್ಕೃತಿ, ನೆಲ, ಜಲ ಉಳಿಸಬೇಕು. ಅದನ್ನು ಬಿಟ್ಟು ದೇಶದ ಮುಂದೆ ಕನ್ನಡಕ್ಕೆ, ಕನ್ನಡಿಗರಿಗೆ ಅಪಮಾನ ಮಾಡಿರುವುದು ಸರಿಯಲ್ಲ. ಬೇರೆ ರಾಜ್ಯದ ರಾಜಕಾರಣಿಗಳು ಭಾಷಾಭಿಮಾನ ಹೊಂದಿದ್ದಾರೆ. ಆದರೆ ನಮ್ಮ ಸಚಿವರಿಗೆ ಅಭಿಮಾನ ಇಲ್ಲದಿರುವುದು ದುರಂತ" ಎಂದು ಬೇಸರ ವ್ಯಕ್ತಪಡಿಸಿದರು.

"ಈ ಕೂಡಲೇ ಸಿ.ಟಿ.ರವಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.












Click it and Unblock the Notifications