ವಿಧಾನಸಭೆ ಕಲಾಪ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ!
ಬೆಂಗಳೂರು, ಡಿ. 08: ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ಭಾರತ್ ಬಂದ್ಗೆ ರೈತ ಸಮೂಹ ಕರೆ ಕೊಟ್ಟಿದೆ. ರಾಜ್ಯದಲ್ಲಿಯೂ ಭಾರತ್ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ಯ ವಿಧಾನ ಮಂಡಲ ಅಧಿವೇನದಲ್ಲಿಯೂ ರೈತರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಎದುರು ವಿಪಕ್ಷಗಳ ಸದಸ್ಯರು ಬಿಚ್ಚಿಡುತ್ತಿದ್ದಾರೆ.
ರೈತರ ಬೆಳೆ ಹಾನಿ ಹಾಗೂ ಬೆಂಬಲ ಬೆಲೆ ವಿಚಾರ ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮತ್ತ ಮಾತನಾಡುತ್ತಿದ್ದಾರೆ. ನಿಲುವಳಿ ಸೂಚನೆಯಡಿ ಚರ್ಚೆ ಆರಂಭಿಸಿರುವ ಸಿದ್ದರಾಮಯ್ಯ ಅವರು, ಆರಂಭದಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆ ವಿಷಯವನ್ನು ಪ್ರಸ್ತಾಪಿಸಿದರು.
ಕೇಂದ್ರ ಸರ್ಕಾರ ರೈತರ 17 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ಪ್ರವಾಹದ ನಡುವೆಯೂ ರಾಜ್ಯದಲ್ಲಿ 10.5 ಲಕ್ಷ ಟನ್ ಭತ್ತ ಬೆಳೆಯಲಾಗಿದೆ. ಆದರೆ ಭತ್ತವನ್ನು ಬೆಂಬಲ ಬೆಲೆಗೆ ಖರೀದಿಸುತ್ತಿಲ್ಲ. ಕರಾವಳಿ, ಉತ್ತರ ಕನ್ನಡ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭತ್ತ ಬೆಳೆಯಲಾಗಿದೆ. ರಾಜ್ಯದಲ್ಲಿ ಒಟ್ಟಾರೆ ಅಂದಾಜು 29 ಲಕ್ಷ ಟನ್ ಭತ್ತ ಬೆಳೆಯಲಾಗಿದೆ. ಅದರಲ್ಲಿ ಕನಿಷ್ಟ ಶೇಕಡಾ 70ರಷ್ಟನ್ನಾದರೂ ಕೊಂಡುಕೊಳ್ಳಬೇಕು. ಆದರೆ ಸರ್ಕಾರ ಕೇವಲ 2 ಲಕ್ಷ ಟನ್ ಮಾತ್ರ ಕೊಳ್ಳುತ್ತೇವೆ ಅಂದರೆ ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಜೊತೆಗೆ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ಘೋಷಣೆ ಮಾಡುತ್ತಿಲ್ಲ. ಡಾ. ಸ್ವಾಮಿನಾಥನ್ ವರದಿಯಂತೆ ಅನುಷ್ಠಾನವನ್ನೂ ಮಾಡುತ್ತಿಲ್ಲ. ಎ2, ಎಫ್ 1, ಸಿ2 ನಂತೆ ಬೆಲೆ ನಿಗದಿ ಮಾಡಬೇಕಾಗಿತ್ತು. ಜೋಳ, ರಾಗಿ, ಮೆಕ್ಕೆಜೋಳ, ತೊಗರಿ, ಹೆಸರಿಗೆ ಬೆಲೆ ನಿಗದಿ ಮಾಡಿದೆ. ಕೇವಲ 15 ಉತ್ಪನ್ನಗಳಿಗೆ ಮಾತ್ರ ಬೆಲೆ ನಿಗದಿ ಮಾಡಲಾಗಿದೆ. ಅದೂ ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿದ್ದಾರೆ. ಈ ಬಗ್ಗೆ ನಾನು ಪ್ರಧಾನಿ ಮೋದಿ ಅವರಿಗೆ ಪತ್ರವನ್ನೂ ಬರೆದಿದ್ದೆ.

ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ನೀವೇ ಉತ್ತರ ಕೊಡಲ್ಲ, ಇನ್ನು ಅವರೆಲ್ಲಿ ಕೊಡುತ್ತಾರೆ? ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದೇನೆ. ಯಾವಾಗಲಾದರೂ ಉತ್ತರ ಕೊಡಬಹುದು ಎಂದು ಕಾಯುತ್ತಿದ್ದೇನೆ. ಆದರೆ ಒಂದೂ ಪತ್ರಕ್ಕೂ ಸಿಎಂ ಯಡಿಯೂರಪ್ಪ ಉತ್ತರ ಕೊಟ್ಟಿಲ್ಲ. ನಿಮ್ಮ ಕೇಂದ್ರ ಕೃಷಿ ಸಚಿವ ತೋಮರ್ ಉತ್ತರಿಸಿದ್ದಾರೆ. ಆದರೆ ನೀವು ಉತ್ತರ ಕೊಡಲ್ವಲ್ಲಪ್ಪಾ ಮಾಧುಸ್ವಾಮಿ? ಎಂದು ಸದನದಲ್ಲಿದ್ದ ಸಚಿವ ಮಾಧುಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications