ಆಗದ ಸಂಪುಟ ವಿಸ್ತರಣೆ: ಎಲ್ಲರ ಚಿತ್ತ ತ್ರಿಮೂರ್ತಿಗಳ ಮುಂದಿನ ಹೆಜ್ಜೆಯತ್ತ
ಸಚಿವ ಸಂಪುಟ ವಿಸ್ತರಣೆ ಇಂದು ಆಗಬಹುದು, ನಾಳೆ ಆಗಬಹುದು ಎಂದು ಕಾತುರದ ಕಣ್ಣಿನಿಂದ ಕಾಯುತ್ತಿದ್ದವರಿಗೆ ಭಾರೀ ನಿರಾಶೆಯಾಗಿದೆ. ಇನ್ನು, ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ತೀವ್ರ ಲಾಬಿ ನಡೆಸುತ್ತಿದ್ದವರೂ ಸುಮ್ಮನಾಗಬೇಕಿದೆ.
"ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಅವರು ಸಂದೇಶವೊಂದನ್ನು ಹೊತ್ತು ತಂದಿದ್ದಾರೆ. ಆ ಸಂದೇಶ ಏನೆಂದು ನೋಡಿ, ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎನ್ನುವುದರ ಬಗ್ಗೆ ನಿರ್ಧರಿಸಲಾಗುವುದು"ಎಂದು ಯಡಿಯೂರಪ್ಪ ಹೇಳಿದ್ದರು. ಇದರಿಂದ ಮತ್ತೆ ಸಂಪುಟ ವಿಸ್ತರಣೆಯ ಲಾಬಿ ವೇಗ ಪಡೆದಿತ್ತು.
ರಾಜ್ಯ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾದ ಕಂದಾಯ ಸಚಿವ ಅಶೋಕ್ ಹೇಳಿಕೆ!
ಸಂಪುಟ ವಿಸ್ತರಣೆಯ ವಿಚಾರ ರಾಜ್ಯ ಬಿಜೆಪಿಯಲ್ಲಿ ಮೂಲ ಮತ್ತು ವಲಸೆ ಎನ್ನುವ ಚರ್ಚೆಗೂ ನಾಂದಿ ಹಾಡಿತ್ತು. ನಾಯಕರ ಬಹಿರಂಗ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿರುವುದನ್ನು ಅರಿತ ದೆಹಲಿಯ ನಾಯಕರು, ಸುಮ್ಮನಿರುವಂತೆ ಫರ್ಮಾನು ಹೊರಡಿಸಿದ್ದರು.
ದೆಹಲಿಯಿಂದ ಕಾರ್ಯಕಾರಿಣಿಗೆ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಂಪುಟ ವಿಸ್ತರಣೆಯ ವಿಚಾರದಲ್ಲಿ ಯಾವುದೇ ಸಂದೇಶ ನೀಡದೇ ಇದ್ದಿದ್ದರಿಂದ, ಈ ಪ್ರಕ್ರಿಯೆ ಸದ್ಯದ ಮಟ್ಟಿಗೆ ನೆನೆಗುದಿಗೆ ಬಿದ್ದಿದೆ. ಎಲ್ಲರ ಚಿತ್ತ ತ್ರಿಮೂರ್ತಿಗಳ ಮುಂದಿನ ಹೆಜ್ಜೆಯತ್ತ, ಯಾರೆಲ್ಲಾ ಅವರು?
ಬೆಳಗಾವಿಯಲ್ಲಿ ಸಿಎಂ ಬಿಎಸ್ವೈ ಹೇಳಿಕೆ: ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ
ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ
ಸಚಿವ ಸಂಪುಟ ವಿಸ್ತರಣೆ ಎನ್ನುವುದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದರೂ, ಬಿಜೆಪಿಯಲ್ಲಿ ಅದನ್ನು ನಿರ್ಧರಿಸುವುದು ವರಿಷ್ಠರು. ಹಾಗಾಗಿ ಅವರ ಅನುಮತಿ ಅಗತ್ಯ, ಸದ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಸಿಕ್ಕಿಲ್ಲ"ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳುವ ಮೂಲಕ, ಆಕಾಂಕ್ಷಿಗಳಿಗೆ ಬರಸಿಡಿಲಿನಂತಹ ಸುದ್ದಿಯನ್ನು ನೀಡಿದ್ದರು.
ಸಚಿವ ಸ್ಥಾನಕ್ಕಾಗಿ ದಂಬಾಲು ಬೀಳುತ್ತಿದ್ದವರಲ್ಲಿ ಒಬ್ಬರಾದ ಎಚ್.ವಿಶ್ವನಾಥ್
ಆಪರೇಶನ್ ಕಮಲದ ಮೂಲಕ ಬಿಜೆಪಿ ಬಾಗಿಲಿಗೆ ಬಂದವರಲ್ಲಿ ಸಚಿವ ಸ್ಥಾನಕ್ಕಾಗಿ ದಂಬಾಲು ಬೀಳುತ್ತಿದ್ದವರಲ್ಲಿ ಒಬ್ಬರಾದ ಎಚ್.ವಿಶ್ವನಾಥ್ ಅವರ ವಿರುದ್ದ ಹೈಕೋರ್ಟ್ ತೀರ್ಪು ನೀಡಿದೆ. ಹಾಗಾಗಿ, ಸದ್ಯಕ್ಕೆ ಇವರು ರೇಸ್ ನಲ್ಲಿ ಇರಲಿಲ್ಲ. ಕೋರ್ಟ್ ತೀರ್ಪು ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಬಿಜೆಪಿ ಹೇಳಿದ್ದರೂ, ಸಂಪುಟ ವಿಸ್ತರಣೆಯ ಸಾಧ್ಯತೆ ಸದ್ಯಕ್ಕೆ ಇಲ್ಲದೇ ಇರುವುದರಿಂದ, ಬಿಜೆಪಿ ಈ ವಿಚಾರದಲ್ಲಿ ಮುಂದಿನ ಹೆಜ್ಜೆಯಿಡುವ ಸಾಧ್ಯತೆ ಕಮ್ಮಿ.
ಎಂ.ಟಿ.ಬಿ ನಾಗರಾಜ್ ಅವರಂತೂ ಈ ವಿಚಾರವನ್ನು ಪ್ರಸ್ತಾವಿಸದ ದಿನವೇ ಇಲ್ಲ
ಇನ್ನು, ಎಂ.ಟಿ.ಬಿ ನಾಗರಾಜ್ ಅವರಂತೂ ಈ ವಿಚಾರವನ್ನು ಪ್ರಸ್ತಾವಿಸದ ದಿನವೇ ಇಲ್ಲ. "ನನ್ನನ್ನು ನೋಡಿದಾಗಲೆಲ್ಲಾ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ, ಇದ್ಯಾವುದು ನಡೆಯುವುದೇ ಇಲ್ಲ. ನಿಮಗೆ ಇಷ್ಟ ಬಂದವರಿಗೆ ಮಂತ್ರಿ ಸ್ಥಾನ ಕೊಡಿ"ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಟೀಕಿಸಿದ್ದರು.
ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ ಮುನಿರತ್ನ
ಇನ್ನು, ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ ಮುನಿರತ್ನ ಅವರು ಫಲಿತಾಂಶ ಬಂದಾಗಿನಿಂದ ಸಚಿವ ಸ್ಥಾನದ ಬಗ್ಗೆ ಮಾತನಾಡಲು ಆರಂಭಿಸಿದ್ದರು. "ಯಡಿಯೂರಪ್ಪನವರದ್ದು ಮಾತಿಗೆ ನಿಲ್ಲುವ ವ್ಯಕ್ತಿತ್ವ. ನನಗೆ ಈ ಹುದ್ದೆ ಬೇಕು, ಆ ಹುದ್ದೆ ಬೇಕೆಂದು ಒತ್ತಡ ಹೇರುವುದಿಲ್ಲ. ಕೊಟ್ಟ ಖಾತೆಯನ್ನು ನಿಭಾಯಿಸುತ್ತೇನೆ"ಎಂದು ಮುನಿರತ್ನ ಹೇಳಿದ್ದರು. ಇನ್ನೋರ್ವ ಮುಖಂಡ ಆರ್.ಶಂಕರ್ ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.
ಸರಕಾರ ಬರಲು ಕಾರಣರಾದ ಮೂವರು ವಲಸೆ ಹಕ್ಕಿಗಳು
ಸರಕಾರ ಬರಲು ಕಾರಣರಾದ ಮೂವರು ವಲಸೆ ಹಕ್ಕಿಗಳಿಗೆ ಆದ್ಯತೆಯಿಂದ ಸಚಿವ ಸ್ಥಾನ ನೀಡಬೇಕೆನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಒತ್ತಡಕ್ಕೆ ಹೈಕಮಾಂಡ್ ಮಣಿದಿಲ್ಲ. ಇದರಿಂದಾಗಿ, ಸಚಿವ ಸಂಪುಟ ವಿಸ್ತರಣೆ ಸದ್ಯದ ಮಟ್ಟಿಗೆ ನೆನೆಗುದಿಗೆ ಬಿದ್ದಿದೆ. ಚುನಾವಣಾ ನೀತಿಸಂಹಿತೆ ಎನ್ನುವ ಕಾರಣವೂ ಇದೆ. ಹಾಗಾಗಿ, ಎಂ.ಟಿ.ಬಿ, ಮುನಿರತ್ನ ಮತ್ತು ಶಂಕರ್ ಅವರ ಮುಂದಿನ ಹೆಜ್ಜೆ ಏನಿರಬಹುದು ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Recommended Video