Cabinet Expansion: ರಾಜೀನಾಮೆ ನೀಡಲು ಮುಂದಾದ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರು?
ಮೊದಲು ಸಿಎಂ ಯಾರಾಗಬೇಕು, ಅದಾದ ನಂತರ ಸಚಿವ ಸಂಪುಟದಲ್ಲಿ ಯಾರು ಯಾರು ಇರಬೇಕು ಎನ್ನುವ ಗೊಂದಲಕ್ಕೆ ತೇಪೆ ಹಾಕಿ, ಸಿದ್ದರಾಮಯ್ಯನವರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸಲು ಸಜ್ಜಾಗಿದೆ. ಶನಿವಾರದಂದು (ಮೆ 27) 24 ಮುಖಂಡರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮದ ಸ್ವಲ್ಪಹೊತ್ತಿನಲ್ಲೇ ಖಾತೆ ಹಂಚಿಕೆಯ ಪಟ್ಟಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಪಿಸಿಸಿ ಮತ್ತು ಸರ್ಕಾರ ಸ್ಪಷ್ಟನೆ ನೀಡಿ, ಅದು ನಕಲಿ ಪಟ್ಟಿ ಎಂದು ಹೇಳಿತು. ಆದರೆ, ಆ ಪಟ್ಟಿಯೇ ಬಹುತೇಕ ಅಂತಿಮವಾಗಿದ್ದ ಪಟ್ಟಿ ಆದರೆ ಕೆಲವು ಸಚಿವರು ತಮಗೆ ಸಿಕ್ಕ ಖಾತೆಯಿಂದ ಅಸಮಾಧಾನಗೊಂಡ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಅದನ್ನು ಹಿಂದಕ್ಕೆ ಪಡೆದುಕೊಂಡರು ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ಹಿರಿಯ ಸಚಿವರು ಮತ್ತು ಮೂಲ ಕಾಂಗ್ರೆಸ್ಸಿಗರೂ ಆಗಿರುವ ಇಬ್ಬರು ಸಚಿವ ಸ್ಥಾನದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿ, ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯನವರ ಸಮಜಾಯಿಶಿಗೆ ಬಗ್ಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ, ಖಾತೆ ಹಂಚಿಕೆಯ ಸರ್ಕಸ್ ವಿಳಂಬವಾಗುತ್ತಿದೆ.
ಕೊರಟಗೆರೆಯ ಶಾಸಕ ಡಾ.ಪರಮೇಶ್ವರ್
ಬೆಂಗಳೂರಿನ ಬಿಟಿಎಂ ಲೇಔಟ್ ಶಾಸಕ ರಾಮಲಿಂಗ ರೆಡ್ಡಿ ಮತ್ತು ಕೊರಟಗೆರೆಯ ಶಾಸಕ ಡಾ.ಪರಮೇಶ್ವರ್ ತಮಗೆ ಹಂಚಿಕೆಯಾಗಿರುವ ಖಾತೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆಂದು ಕೆಲವು ಕನ್ನಡ ಮಾಧ್ಯಮಗಳು ವರದಿ ಮಾಡಿವೆ. ಒಂದು ಹಂತಕ್ಕೆ ನನ್ನ ಮರ್ಯಾದೆ ತೆಗೆಯುತ್ತಿದ್ದೀರಾ ಎಂದು ಏರು ಧ್ವನಿಯಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆಂದು ಹೇಳಲಾಗುತ್ತಿದೆ.

ರಾಮಲಿಂಗ ರೆಡ್ಡಿಯವರಿಗೆ ಈ ಹಿಂದೆ ಅವರು ನಿಭಾಯಿಸಿದ್ದ ಸಾರಿಗೆ ಖಾತೆ
ರಾಮಲಿಂಗ ರೆಡ್ಡಿಯವರಿಗೆ ಈ ಹಿಂದೆ ಅವರು ನಿಭಾಯಿಸಿದ್ದ ಸಾರಿಗೆ ಖಾತೆಯನ್ನು ನೀಡಲಾಗಿತ್ತು ಎನ್ನುವುದು ಲೀಕ್ ಆದ ಪಟ್ಟಿಯಲ್ಲಿ ಇದ್ದ ಅಂಶ. ಇದರ ಜೊತೆಗೆ ಪರಮೇಶ್ವರ್ ಅವರಿಗೆ ಗುಪ್ತಚರ ಹೊರತಾದ ಗೃಹ ಖಾತೆ ಹಂಚಿಕೆಯಾಗಿತ್ತು. ಎರಡೂ ಖಾತೆಯನ್ನು ನಿಭಾಯಿಸಲು ಹಿರಿಯ ಸಚಿವರು ನಾ ಒಲ್ಲೆ ಎಂದು ಹೇಳುತ್ತಿದ್ದಾರೆ.
ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ
ಮಹಿಳೆಯರಿಗೆ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಎನ್ನುವುದು ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಒಂದು . ಇನ್ನೊಂದು ಕಡೆ, ರಾಜ್ಯ ಸರ್ಕಾರ ಒಡೆತನದ ನಾಲ್ಕೂ ಸಂಸ್ಥೆಗಳು ನಷ್ಟದಲ್ಲಿ ಇರುವುದರಿಂದ, ಗ್ಯಾರಂಟಿಯನ್ನು ಹೊಂದಿಸಿಕೊಂಡು ಸಾರಿಗೆ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಸಾರಿಗೆ ಸಚಿವರ ಮೇಲಿರಲಿದೆ.
ದೂರವಾಣಿ ಕರೆ ಮಾಡಿದ
ಇನ್ನೊಂದು ಕಡೆ ಗೃಹ ಇಲಾಖೆಯನ್ನು ನಿಭಾಯಿಸುವುದು ಒಟ್ಟಾರೆಯಾಗಿ ಸವಾಲಿನ ಕೆಲಸ. ಹಾಗಾಗಿ, ಇಬ್ಬರಿಗೂ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ ಒಂದು ವರ್ಷ ಖಾತೆಯನ್ನು ನಿಭಾಯಿಸಿ ಎಂದು ಮನವಿ ಮಾಡಿದ್ದಾರೆ. ಆ ವೇಳೆ, ಏಳು ಬಾರಿಯ ಶಾಸಕನಾನು, ನನ್ನನ್ನು ಅವಮಾನಿಸುತ್ತಿದ್ದೀರಾ, ನನಗೆ ವಹಿಸಿರುವ ಖಾತೆಯನ್ನು ನೀವೇ ಇಟ್ಟುಕೊಳ್ಳಿ ಎಂದು ರಾಮಲಿಂಗ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications