ಜಮೀರ್ ಹಣೆಯಲು ಹೋಗಿ ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ!
ಏಳು ಮಂದಿ ಜೆಡಿಎಸ್ ಭಿನ್ನಮತೀಯ ಶಾಸಕರಿದ್ದರೂ, ದೇವೇಗೌಡ್ರ ಮತ್ತು ಕುಮಾರಸ್ವಾಮಿಯವರ ರಾಜಕೀಯ ವೈರತ್ವ ಹೆಚ್ಚಾಗಿ ಕಾಣಿಸುತ್ತಿದ್ದದ್ದು ಮೂವರಲ್ಲಿ. ಅದು ಜಮೀರ್ ಅಹಮದ್, ಚೆಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರ ಮೇಲೆ.
ಈ ಮೂವರಲ್ಲಿ ಇಬ್ಬರನ್ನು ಚುನಾವಣೆಯಲ್ಲಿ ಹೆಡೆಮುರಿ ಕಟ್ಟಲು ಗೌಡ್ರು ಶಕ್ತರಾದರೂ, ಜಮೀರ್ ಅಹಮದ್ ಅವರನ್ನು ಮಣಿಸಲು ಗೌಡ್ರಿಗೆ ಮತ್ತು ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ. ಎಲ್ಲಾ ತಂತ್ರಗಾರಿಕೆಯನ್ನು ಉಪಯೋಗಿಸಿದರೂ, ಅದಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಜಮೀರ್ ಯಶಸ್ವಿಯಾದರು. ಎಷ್ಟಾದರೂ ಗೌಡ್ರ ಗರಡಿಯಲ್ಲೇ ಪಳಗಿದವರಲ್ಲವೇ?
ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಮತ್ತು ಮಾಗಡಿಯಲ್ಲಿ ಎಚ್ ಸಿ ಬಾಲಕೃಷ್ಣ ಅವರು ಜೆಡಿಎಸ್ ಅಭ್ಯರ್ಥಿಯ ಎದುರು ಭಾರೀ ಅಂತರದ ಸೋಲು ಅನುಭವಿಸಿದ್ದಾರೆ. ಅದೇ ವೇಳೆ, ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಭಾರೀ ಅಂತರದಿಂದ ಗೆದ್ದಿದ್ದಾರೆ. ಚಾಮರಾಜಪೇಟೆಯಲ್ಲಿ ಜಮೀರ್ ಮತ್ತು ಕುಮಾರಸ್ವಾಮಿ ನಡುವಿನ ಫೈಟ್ ಎಂದೇ ಬಿಂಬಿತವಾಗಿತ್ತು.
ಪ್ರಮುಖವಾಗಿ ಗೌಡ್ರಿಗಿಂತ ಕುಮಾರಸ್ವಾಮಿಯ ಜೊತೆ ಮನಸ್ತಾಪ ಹೊಂದಿರುವ ಜಮೀರ್, ಚಾಮರಾಜಪೇಟೆ ಚುನಾವಣೆ ಗೆಲ್ಲಲು ದೇವೇಗೌಡ್ರು ರೂಪಿಸಿದ ಎಲ್ಲಾ ಕಾರ್ಯತಂತ್ರಗಳನ್ನು ಮೀರಿಸಿ 33,137 ಮತಗಳ ಅಂತರದಿಂದ ಜಯಶೀಲರಾದರು.
ಈ ಕ್ಷೇತ್ರದ ಫಲಿತಾಂಶದಿಂದ ಗೌಡ್ರ ಕುಟುಂಬಕ್ಕಾದ ಇನ್ನೊಂದು ಹಿನ್ನಡೆಯೆಂದರೆ, ಭಾರೀ ಸದ್ದು ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದ ಅಲ್ತಾಫ್ ಖಾನ್, ಕೊನೆಯ ಪಕ್ಷ ಠೇವಣಿ ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದು. ಬಿಜೆಪಿ ಇಲ್ಲಿ ಎರಡನೇ ಸ್ಥಾನದಲ್ಲಿತ್ತು. ಮುಂದೆ ಓದಿ..

ಚಾಮರಾಜಪೇಟೆ ಹೈವೋಲ್ಟೇಜ್ ಕ್ಷೇತ್ರ
ಜಮೀರ್ ಅಹಮದ್, ಗೌಡ್ರ ಕುಟುಂಬದ ವಿರುದ್ದ ಸೆಟೆದು ಕಾಂಗ್ರೆಸ್ ಟಿಕೆಟಿನಿಂದ ಕಣಕ್ಕಿಳಿದಿದ್ದರಿಂದ ಚಾಮರಾಜಪೇಟೆ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾಗಿತ್ತು. ಜಮೀರ್ ಮಣಿಸಲೇ ಬೇಕೆಂದು ಗೌಡ್ರು ಹೂಡಿದ ರಾಜಕೀಯ ತಂತ್ರಗಾರಿಕೆಯೆಂದರೆ, ಕಾಂಗ್ರೆಸ್ ನಲ್ಲೇ ಗುರುತಿಸಿಕೊಂಡಿದ್ದ ಅಲ್ತಾಫ್ ಖಾನ್ ಅವರಿಗೆ ಟಿಕೆಟ್ ನೀಡಿದ್ದು, ಜೊತೆಗೆ, ಪಾದರಾಯನಪುರ ವಾರ್ಡಿನ ಕಾರ್ಪೋರೇಟರ್ ಇಮ್ರಾನ್ ಮತ್ತು ಅಲ್ತಾಫ್ ನಡುವೆ ಇದ್ದ ವೈಮನಸ್ಸನ್ನು ದೂರಮಾಡುವಲ್ಲೂ ಗೌಡ್ರು ಯಶಸ್ವಿಯಾಗಿದ್ದರು.

ಬಿಜೆಪಿಗೆ ಅಭ್ಯರ್ಥಿ ಗೆದ್ದರೂ ಪರವಾಗಿಲ್ಲ, ಜಮೀರ್ ಗೆಲ್ಲಬಾರದು
ಅಲ್ಪಸಂಖ್ಯಾತ ಸಮುದಾಯದವರನ್ನೇ ಕಣಕ್ಕಿಳಿಸಿದರೆ, ಆ ಸಮುದಾಯದ ಮತ ಇಬ್ಭಾಗ ಆಗಿ ಜಮೀರ್ ಗೆ ಸೋಲುಣಿಸಬಹುದು ಎನ್ನುವುದು ಜೆಡಿಎಸ್ ಲೆಕ್ಕಾಚಾರವಾಗಿತ್ತು. ಜೊತೆಗೆ, ಜಮೀರ್ ಮತ್ತು ಅಲ್ತಾಫ್ ನಡುವಿನ ಪೈಪೋಟಿಯಲ್ಲಿ, ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಇರುವ ಹಿಂದೂ ಮತಗಳು ಬಿಜೆಪಿಗೆ ಹೋಗಿ ಆ ಪಕ್ಷದ ಅಭ್ಯರ್ಥಿ ಗೆದ್ದರೂ ಪರವಾಗಿಲ್ಲ, ಜಮೀರ್ ಗೆಲ್ಲಬಾರದು ಎನ್ನುವ ಲೆಕ್ಕಾಚಾರದಲ್ಲಿ ಇದ್ದಂತಿದ್ದರು ಗೌಡ್ರು ಮತ್ತು ಕುಮಾರಸ್ವಾಮಿ.

ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮೀನಾರಾಯಣ
ಚಾಮರಾಜಪೇಟೆಯಲ್ಲಿ ಒಟ್ಟು ಚಲಾವಣೆಯಾದ 120,209 ಮತಗಳಲ್ಲಿ ಜಮೀರ್ ಅಹಮದ್ 65,339 ಮತಗಳನ್ನು ಪಡೆದು ಜಯಶೀಲರಾದರು. ಬಿಜೆಪಿ ಅಭ್ಯರ್ಥಿ ಎಂ ಲಕ್ಷ್ಮೀನಾರಾಯಣ 32,202 ಮತಗಳನ್ನು ಪಡೆದರೆ, ಜೆಡಿಎಸ್ ಪಕ್ಷದ ಅಲ್ತಾಫ್ ಖಾನ್ 19,393 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಆ ಮೂಲಕ ಪರೋಕ್ಷವಾಗಿ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಅಲ್ತಾಫ್ ಖಾನ್ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲ
ಕಾಂಗ್ರೆಸ್ ಅಭ್ಯರ್ಥಿ ಶೇ. 54.35, ಬಿಜೆಪಿ ಅಭ್ಯರ್ಥಿ ಶೇ. 26.79 ಮತ್ತು ಜೆಡಿಎಸ್ ಅಭ್ಯರ್ಥಿ ಶೇ.16.13 ಮತಗಳನ್ನು ಪಡೆದರು. ಆ ಮೂಲಕ, ಅಲ್ತಾಫ್ ಖಾನ್ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯಲು ವಿಫಲರಾದರೆ, ಠೇವಣಿ ಉಳಿಯುವುದಿಲ್ಲ. 20,035ಕ್ಕಿಂತ ಹೆಚ್ಚು ಮತಗಳನ್ನು ಜೆಡಿಎಸ್ ಅಭ್ಯರ್ಥಿ ಮೂಲಕ ಪಡೆದುಕೊಳ್ಳುವಲ್ಲಿ ಕುಮಾರಸ್ವಾಮಿ ವಿಫಲರಾಗಿದ್ದಾರೆ.

ಸಮ್ಮಿಶ್ರ ಸರಕಾರದ ಪರವಾಗಿ ಜಮೀರ್ ಮತ್ತೆ ಓಡಿಸುತ್ತಾರಾ?
ಈ ಎಲ್ಲಾ ಲೆಕ್ಕಾಚಾರ ಒಂದೆಡೆಯಾದರೆ, ಅತಂತ್ರ ಫಲಿತಾಂಶ ಬಂದ ನಂತರ ಇನ್ನೊಂದು ಲೆಕ್ಕಾಚಾರ. ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯ ರೀತಿಯಲ್ಲಿದ್ದ ಕುಮಾರಸ್ವಾಮಿ ಮತ್ತು ಜಮೀರ್ ಸದ್ಯದ ಮಟ್ಟಿಗೆ ನಾನೊಂದು ತೀರ, ನೀನೊಂದು ತೀರ. ಆದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬಂದರೆ, ಸಿಎಂ ಕುಮಾರಸ್ವಾಮಿ. ಈಗ ಕಾಂಗ್ರೆಸ್ ಶಾಸಕರಾಗಿರುವ ಜಮೀರ್, ಒಂದು ವೇಳೆ ರೆಸಾರ್ಟ್ ರಾಜಕಾರಣ ನಡೆದರೆ, ಸಮ್ಮಿಶ್ರ ಸರಕಾರದ ಪರವಾಗಿ ಮತ್ತೆ ನ್ಯಾಷನಲ್ ಟ್ರಾವೆಲ್ಸ್ ಬಸ್ ಓಡಿಸಿಕೊಂಡು ಹೋಗುವ ಕೆಲಸ ಮಾಡುತ್ತಾರಾ?... ಕಾಲವೇ ಉತ್ತರಿಸಬೇಕು...












Click it and Unblock the Notifications